palachandra (ಲೇಖನಗಳು)
ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
November 22, 2008 - 1:25pm — palachandraಕ್ಯಾಮರಾದ ಸೆನ್ಸರ್ ಎಷ್ಟು ಸಮಯ ನೀವು ತೆಗೆಯುವ ಚಿತ್ರವನ್ನು ನೋಡುತ್ತದೆಯೋ ಆ ಕಾಲಾವಧಿಯೇ "Shutter Speed". ಇದನ್ನು ಸಾಮಾನ್ಯವಾಗಿ ೧/೧೦೦೦, ೧/೨೦೦, ೧/೬೦ ಮುಂತಾದ ಕ್ಷಣದ ಭಾಗದಲ್ಲಿ ಅಳೆಯುತ್ತಾರೆ. ಇಲ್ಲಿ ಭಾಜಕ ಕ್ಷಣದ ಭಾಗವನ್ನೂ, ಭಾಜ್ಯ ಕ್ಷಣವನ್ನೂ ಸೂಚಿಸುತ್ತದೆ. ಆದ್ದರಿಂದ ಭಾಜಕ ಹೆಚ್ಚಾದಂತೆಲ್ಲಾ "Shutter Speed" ಜಾಸ್ತಿಯಾಗುತ್ತದೆ ಮತ್ತು ಕ್ಯಾಮರಾದ ಸೆನ್ಸರ್ ಕಡಿಮೆ ಬೆಳಕನ್ನು ಪಡೆಯುತ್ತದೆ. "Shutter Speed" ೧/೬೦ ಗಿಂತ ಕಡಿಮೆ ಇದ್ದ ಪಕ್ಷದಲ್ಲಿ ಸಾಮಾನ್ಯವಾಗಿ ತೆಗೆದ ಚಿತ್ರದಲ್ಲಿ ಅಸ್ಪಷ್ಟತೆ ಇರುವುದರಿಂದ, ಇಂತಹ ಸಂದರ್ಭದಲ್ಲಿ ಟ್ರೈಪೋಡ್ ನ ನೆರವು ಅಗತ್ಯವಿರುತ್ತದೆ.
ನೀವು ತೆಗೆಯ ಹೊರಟ ಚಿತ್ರಕ್ಕೆ ಯಾವ "Shutter Speed" ಎಂದು ಅದರ ಚಲನೆಯನ್ನು ಗಮನಿಸಿ ನಿರ್ಧರಿಸಬಹುದು. ವೇಗವಾಗಿ ಚಲಿಸುವ ವಾಹನ, ಹರಿಯುವ ನೀರು, ಉಯ್ಯಾಲೆಯಲ್ಲಿ ಆಡುತ್ತಿರುವ ಮಕ್ಕಳು ಮುಂತಾದ ಚಲಿಸುವ ವಿಷಯವಾಗಿದ್ದಲ್ಲಿ, ಹೆಚ್ಚಿನ "Shutter Speed" ಬಳಸಿ, ಆ ಚಲನೆಯನ್ನು ನಿಮ್ಮ ಚಿತ್ರದಲ್ಲಿ ಸ್ತಬ್ಧಗೊಳಿಸಬಹುದು. ಗುಡ್ಡ, ಬೆಟ್ಟ, ಮರ ಮುಂತಾದ ಚಲಿಸದ ವಿಷಯವಾಗಿದ್ದಲ್ಲಿ ಇದನ್ನು ಕಡಿಮೆಮಾಡಬಹುದು. ಕೆಳಗಿನ ಚಿತ್ರದಲ್ಲಿ ಜೇನಿನ ಚಲನೆಯನ್ನು ಸ್ತಬ್ಧಗೊಳಿಸಲು ನಾನು ಉಪಯೋಗಿಸಿದ "Shutter Speed" ೧/೫೦೦.
ಮುಂದೆ ಓದಿ »

ದೀಪಾವಳಿ
November 7, 2008 - 10:07pm — palachandra೬ ಗಂಟೆಗೆ ಇಟ್ಟ ಅಲಾರಾಂ, ದಿಯುವಿನ ನಾಗರ ಸೇಟ್ ಹವೇಲಿಯ ಹಳೇಯ ಮನೆಯೊಂದರ ಕೋಣೆಯೊಂದರ ಮೂಲೆಯಿಂದ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಅಲಾರಾಂ ಆರಿಸಿ, ದೇವರನ್ನು ಸ್ಮರಿಸುತ್ತಾ, ಕಾಂತಾ ಬೆನ್ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಳು. ಇಂದು ದೀಪಾವಳಿಯಾದ್ದರಿಂದ, ಹಿಂದಿನ ರಾತ್ರಿಯಿಂದ ಮುಂಜಾನೆ ೪ ಗಂಟೆಯವರೆಗೂ ತಮ್ಮ ಆಪ್ತರ ಮನೆಯಾದ ಸೋಲಂಕಿಯವರ ಮನೆಯಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸುವಲ್ಲಿ ಸಹಾಯ ಮಾಡುತ್ತಾ ನಿಂತಿದ್ದಳು. ಸುಕ್ಕು ಮುಖ, ನೆರೆತ ಉದ್ದನೆಯ ಕೂದಲು,ಇತಿಹಾಸದ ಕುರುಹೋ ಎಂಬಂತೆ ನಕ್ಕರೆ ಮಾತ್ರ ಕಾಣಿಸುವ ಮುಂದಿನ ಎರಡು ಹಲ್ಲುಗಳು, ಮಂದವಾದ ದೃಷ್ಟಿ, ಸುಮಾರು ೭೫ರ ಆಸುಪಾಸಿನ ಆಕೆಯನ್ನು ೪ ಗಂಟೆಯ ಜಾವಕ್ಕೆ ಮನೆಯಿಂದ ಹೊರಗೆ ಕಳುಹಿಸಲು ಮನಸ್ಸು ಬಾರದಿದ್ದರೂ ಆಕೆಯ ಹಟಕ್ಕೆ ಸೋಲಂಕಿಯವರ ಮನೆಯಾಕೆ ಸೋಲಬೇಕಾಗಿತ್ತು.ವೃತ್ತಿಯಿಂದ ಹೂವಾಡಿಗಳಾದ ಆಕೆಗೆ,ದಿನ ನಿತ್ಯ ಒದಗಿಸುವ ಹೂವಲ್ಲದೆ, ಹಬ್ಬದ ದಿನವಾದ ಇಂದು ಇನ್ನೂ ಹೆಚ್ಚಿನ ಬೇಡಿಕೆ ಇದ್ದುದರಿಂದ ಸೋಲಂಕಿಯವರ ಮನೆಯಲ್ಲಿ ಉಳಿಯದೆ, ಬೆಳಿಗ್ಗೆ ಬೇಗ ಏಳುವ ಉದ್ದೇಶದಿಂದ ಮನೆಗೆ ಬಂದಿದ್ದಳು. ಜನರ ಚಟುವಟಿಕೆಯಿಲ್ಲದ ಬೀದಿಯಲ್ಲಿ ಒಬ್ಬಳೇ, ದಾರಿಯಲ್ಲಿ ಬಿದ್ದಿದ್ದ ಮಾಟ ಮಾಡಿಸಿದ ನಿಂಬೆ ಹಣ್ಣನ್ನು ತುಳಿಯದೆ ಎಚ್ಚರಿಕೆಯಿಂದ ಕಾಲಿಡುತ್ತಾ ತನ್ನ ಇಷ್ಟ ದೇವತೆಯಾದ ಹನುಮನ ಜಪ ಮಾಡುತ್ತಾ ಮನೆಗೆ ತೆರಳಿ ಆಗ ತಾನೆ ನಿದ್ರಿಸಿದ್ದಳು.ನಿದ್ರಾ ಹೀನತೆಯಿಂದ ಕೆಂಪಾದ ಕಣ್ಣುಗಳು ಬಳಲಿ ಉಬ್ಬಿದ್ದವು.ಬಿಳಿಯ ಮಾಸಲು ಬಣ್ಣದ ರವಿಕೆಯ ಮೇಲೆ ಅದೇ ಬಣ್ಣದ ಸೀರೆಯನ್ನು ಗುಜರಾತಿ ಹೆಂಗಸರು ಸೀರೆ ಉಡುವ ಮಾದರಿಯಲ್ಲಿ, ಸೆರಗನ್ನು ಬಲಗಡೆಯಿಂದ ಹೊದ್ದು, ಮನೆಯ ಕದವಿಕ್ಕಿ ಮಾರುಕಟ್ಟೆಯ ಕಡೆಗೆ ಸಾಗಿದಳು. ಮುಂದೆ ಓದಿ »

ಪಿತೃ ವಾತ್ಸಲ್ಯ
October 22, 2008 - 7:53pm — palachandraನವರಾತ್ರಿಯ ಒಂದು ರಜಾ ದಿನ, ಪ್ರಥಮ ಪಿ.ಯು. ಓದುತ್ತಿದ್ದ ನಾನು, ಅಮ್ಮ ಮಾಡಿಕೊಟ್ಟ ಕಾಫಿ ಹೀರುತ್ತಾ, ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದ ಸೂರ್ಯಾಸ್ತಮಾನವನ್ನು ಒಂದು ರೀತಿಯ ನಿರ್ಲಿಪ್ತತೆಯಿಂದ ನೋಡುತ್ತಿದ್ದೆ. ಸಮಯ ಕಳೆದಂತೆ, ಪಡುವಣದಿಂದ ಮುಗಿಲೆದ್ದು, ವಿವಿಧಾಕೃತಿಯನ್ನು ತಳೆದು, ಬಣ್ಣ ಬಳಿದುಕೊಂಡ ಆಗಸ ಆಕರ್ಷಕವಾಗಿ ಕಾಣಿಸತೊಡಗಿತು. ಮಧ್ಯಾಹ್ನದಿಂದ ಒಂದೇ ಸಮನೆ ಓದುತ್ತಿದ್ದ ನನಗೆ, ಮನದ ವಿಶ್ರಾಂತಿಗಾಗಿ ಬದಲಾವಣೆಯ ಅಗತ್ಯ ತೋರಿದ್ದರಿಂದ, ಅಮ್ಮನಿಗೆ ತಿಳಿಸಿ, ನನ್ನ ಸೈಕಲ್ ಏರಿ, ಮನೆಯಿಂದ ೧ ಕಿ.ಮೀ. ದೂರವಿರುವ ಕಡಲಿನ ಕಡೆಗೆ ತೆರಳಿದೆನು. ಹೊರಡುವಾಗ ಸೂರ್ಯ ಮುಳುಗಿದ ಕೆಲವು ಗಳಿಗೆಯಲ್ಲಿ ಮನೆ ಸೇರುತ್ತೇನೆ ಎಂದೂ, ನೀರಿಗಿಳಿಯುವುದಿಲ್ಲ ಎಂದು ಮನೆಯವರಿಗೆ ಭರವಸೆಯಿತ್ತು ಬಂದಿದ್ದೆ.
ದಾರಿಯ ಇಕ್ಕೆಲಗಳಲ್ಲಿ ಕೊಯ್ಲಿಗೆ ಸಿದ್ಧವಾಗಿ ನಿಂತಿರುವ, ತೆನೆ ತುಂಬಿ, ಸುಳಿದಾಡುವ ಗಾಳಿಗೆ ತೆಲೆದೂಗುವ ಭತ್ತದ ಗದ್ದೆ, ಮಧ್ಯದಲ್ಲಿ ಅಲ್ಲಲ್ಲಿ ಎತ್ತರವಾಗಿ ತಲೆಯೆತ್ತಿ ನಿಂತ ತಾಳೆ ಮರಗಳು, ಅದರ ಗರಿಗಳಿಗೆ ಜೋತು ಬಿದ್ದಂತೆ ಕಟ್ಟಿದ ಗೀಜಗನ ಗೂಡು, ದಾರಿಯಲ್ಲಿ ಕಡಲಿನ ಹಿನ್ನೀರಿಗೆ ಹಾಕಿದ ಪುಟ್ಟ ಸೇತುವೆ, ಅದರ ಮಗ್ಗುಲಲ್ಲಿರುವ ಮೀನಿನ ಕಾರ್ಖಾನೆ, ಮುಂದೆ ಸಿಗುವ ಹೊಯಿಗೆಯ ಬೆಟ್ಟು, ಅದರ ನೆತ್ತಿಯಲ್ಲೊಂದು ಬೊಬ್ಬರ್ಯನ ಗುಡಿ, ಸುತ್ತ ಗಾಳಿ ಮರ, ಪಕ್ಕದಲ್ಲಿನ ಶಾಲೆಯ ಆಟದ ಮೈದಾನದಲ್ಲಿ ಆಡುತ್ತಿರುವ ಹುಡುಗರ ತಂಡ, ಚಿಕ್ಕ ಪುಟ್ಟ ಅಂಗಡಿಗಳು, ಮೀನು ಸಂರಕ್ಷಣೆಗಾಗಿ ತಯಾರಿಸುವ ಮಂಜುಗಡ್ಡೆ ಕಾರ್ಖಾನೆ, ಬಂಡೆಯಂತಹ ಮಂಜುಗಡ್ಡೆಯನ್ನು ದೊಡ್ಡ ದೊಡ್ಡ ಸುತ್ತಿಗೆಯಲ್ಲಿ ಪುಡಿ ಮಾಡಿ ಮೀನಿನ ಲಾರಿಯಲ್ಲಿ ತುಂಬಿಸುವ ಮೊಗವೀರರು, ಕಳ್ಳಿನಂಗಡಿ, ಪುಡಿ ಮೀನು ಮಾರುವ ಬೆಸ್ತರ ಹೆಂಗಸರು, ಅವರು ಬಿಸಾಕಬಹುದಾದಂತಹ ಹಾಳಾದ ಮೀನಿಗಾಗಿ ಆಸೆಯಿಂದ ನೋಡುತ್ತಿರುವ ನಾಯಿಗಳು, ಬೆಕ್ಕುಗಳು, ಆಗ್ಗೆ ಸುಮಾರು ೧೦ ವರ್ಷದಿಂದಲೂ ನೋಡುತ್ತಿರುವುದು ಇದೇ ಸನ್ನಿವೇಷದ ಪುನರಾವರ್ತೆನೆಯಾದರೂ, ಆ ದಾರಿಯಲ್ಲಿ ಸಾಗುವುದು ಇಂದಿಗೂ ಕೂಡ ನನಗೆ ಪ್ರಿಯವಾಗಿದೆ. ಮುಂದೆ ಓದಿ »

ಕುಮಾರ ಪರ್ವತದಲ್ಲಿ ಚಾರಣ
October 10, 2008 - 11:37am — palachandraನಮ್ಮ ತಯಾರಿ
ಕರ್ನಾಟಕದಲ್ಲಿ, ಅತ್ಯಂತ ಕಠಿಣವಾದ, ರಮಣೀಯವಾದ ಕುಮಾರ ಪರ್ವತದಲ್ಲಿ ಚಾರಣ ಮಾಡಬೇಕೆಂಬುದು ನನ್ನ ಹಲವು ವರ್ಷಗಳ ಬಯಕೆಯಾಗಿತ್ತು.ಹಲಕೆಲವು ಕಾರಣಗಳಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಅಕ್ಟೋಬರ್ ೨ ೨೦೦೮, ಗುರುವಾರವಾಗಿದ್ದು ಗಾಂಧಿ ಜಯಂತಿಯ ಪ್ರಯುಕ್ತ ರಜೆ ಇದ್ದುದರಿಂದ, ಇದರೊಂದಿಗೆ ಶುಕ್ರವಾರದ ನನ್ನ ಖಾಸಗಿ ರಜೆ ಸೇರಿಸಿ ಸಿಗುವ ೪ ದಿನಗಳನ್ನು ನಿಸರ್ಗದೊಡನೆ ಕಳೆಯುವ ನನ್ನ ಹಂಬಲಕ್ಕೆ ಮೊದಲು ತೋಚಿದ್ದು ಕುಮಾರ ಪರ್ವತ. ನನ್ನ ಚಾರಣ ಮಿತ್ರರಲ್ಲಿ ಮೂವರು ವಿದೇಶೀ ಪಾಲದ್ದರಿಂದ, ಉಳಿದ ಇಬ್ಬರಲ್ಲಿ ಒಮ್ಮತಕ್ಕೆ ಬರಲು ಹೆಚ್ಚಿನ ಸಮಯ ತಗಲಲಿಲ್ಲ. ಈ ಮೊದಲು ರಾಘವೇಂದ್ರ ಕುಮಾರ ಪರ್ವತಕ್ಕೆ ೨ ಬಾರಿ ಭೇಟಿ ಕೊಟ್ಟಿದ್ದರೂ ಮತ್ತೆ ಅಲ್ಲಿಗೆ ಹೋಗುವ ಉತ್ಸಾಹ ತೋರಿಸಿದ. ನಮ್ಮ ಹಳೇಯ ಜೊತೆಗಾರರನ್ನು ಬಿಟ್ಟು ನಾವಿಬ್ಬರೇ ಹೋಗುವ ವಿಚಾರದಿಂದ ಮೊದಲಿಗೆ ತುಸು ಇರುಸು ಮುರುಸಾದರೂ ಅಕ್ಟೋಬರ್ ೧ರ ರಾತ್ರಿ ಬೆಂಗಳೂರಿನಿಂದ ಸುಬ್ರಮಣ್ಯಕ್ಕೆ ಹೋಗಲಿರುವ ಕ.ರಾ.ರು.ಸಾ.ಸಂ.ನಲ್ಲಿ ೨ ಟಿಕೇಟನ್ನು ಕಾಯ್ದಿರಿಸಿದೆವು. ಟಿಕೇಟ್ ಕಾಯ್ದಿರಿಸಲು ವಿಳಂಬ ಮಾಡಿದ್ದರಿಂದ ಕೊನೇಯ ೨ ಸೀಟುಗಳಿಗೆ ತೃಪ್ತಿ ಪಡಬೇಕಾಯಿತು. ಮರಳುವ ದಿನ ನಿರ್ಧರಿಸಿರಲಿಲ್ಲವಾದ್ದರಿಂದ ಸುಬ್ರಮಣ್ಯದಿಂದ ಬೆಂಗಳೂರಿಗೆ ಬರುವ ಟಿಕೇಟನ್ನು ಕಾಯ್ದಿರಿಸಲಿಲ್ಲ.ಇದಲ್ಲದೆ ಹೊರಡುವ ದಿನ ರಾಘವೇಂದ್ರ ಬಾಡಿಗೆ ಟೆಂಟನ್ನು ತಂದದ್ದು ಬಿಟ್ಟರೆ ಇನ್ನಾವುದೇ ಪೂರ್ವ ತಯಾರಿ ಇರಲಿಲ್ಲ. ಮುಂದೆ ಓದಿ »

ಪತ್ರಗಳು
September 12, 2008 - 12:11pm — palachandra"ಮೈಲ್" ಎಂದಾಕ್ಷಣ ನಮ್ಮ ನೆನಪಿಗೆ ಬರುವುದು "ಇ-ಮೈಲ್", ನನ್ನಂತೆಯೆ ಸ್ವಲ್ಪ ಹಳೆಯ ಕಾಲದವರಾದರೆ "ಆ-ಮೈಲ್" ಕೂಡಾ ನೆನಪಿಗೆ ಬರಬಹುದು! ನಾನು ಈಗ ಹೇಳ ಹೊರಟಿರುವುದು ಅದೇ "ಆ-ಮೈಲ್" ಬಗ್ಗೆ. ಅಚ್ಚ ಕನ್ನಡದಲ್ಲಿ ಪತ್ರಗಳು ಎಂದರೆ ನಿಮಗೆ ನಾನು ಹೇಳ ಹೊರಟಿರುವ ಆ-ಮೈಲ್ನ ಸುಳಿವು ಸಿಗಬಹುದು.
ತಿಳಿ ನೀಲಿ ಬಣ್ಣದ "ಅಂತರ್ದೇಶೀಯ ಪತ್ರ", ಹಳದಿ ಬಣ್ಣದ "ಪೋಸ್ಟ್ ಕಾರ್ಡ್", ಕಾವಿ ಬಣ್ಣದ್ದೋ, ಖಾಕಿ ಬಣ್ಣದ್ದೋ, ಇಲ್ಲ ಹಲವು ವರ್ಣ ಸಂಯೋಜನೆಗಳ "ಪೋಸ್ಟ್ ಕವರ್"ಎಂಬಿತ್ಯಾದಿ ಹಲವು ಬಗೆಯ ವೈವಿಧ್ಯತೆಯಿಂದ ಕೂಡಿದ ಸಂದೇಶವಾಹಕಗಳು. ಈ ಮೇಲೆ ಹೇಳಿದ ಬರೀ ಪತ್ರಗಳಿಗೆ ಸಂದೇಶವಾಹಕಗಳು ಎಂದು ಕರೆದದ್ದನ್ನು ನೀವು ಆಕ್ಷೇಪಿಸಬಹುದೋ ಎನೋ, ಪತ್ರಕ್ಕೆ ಕಾಲುಂಟೆ, ರೆಕ್ಕೆ ಉಂಟೆ ಎಂದು ಪ್ರಶ್ನೆಗಳನ್ನು ಕೇಳಿ ನನ್ನನ್ನು ಪೇಚಿಗೆ ಸಿಲುಕಿಸಬಹುದು.ಆದರೆ ಈ ಹಲವು ಬಗೆಯ ಪತ್ರಗಳೊಂದಿಗೆ ಅವನ್ನು ವಿವಿಧೆಡೆಗೆ ಸಾಗಿಸುವ ಅಂಚೆಯವರನ್ನೂ ಸೇರಿಸಿ, ಈ ಶಬ್ದ ಪ್ರಯೋಗಿಸಿದ್ದಾದರೆ ನೀವು ಆಕ್ಷೇಪಿಸಲಾರಿರಿ. ಮುಂದೆ ಓದಿ »








RSS: