ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ
ಗೆಳೆಯರೆ, ನನಗೆ ಕಳೆದುಹೋಗಿರುವ ಒಂದು ಕನ್ನಡ ಪದ್ಯ ಬೇಕಾಗಿದೆ, ದಯವಿಟ್ಟು ಸಹಾಯ ಮಾಡಿರೆಂದು ಕೇಳಿಕೊಳ್ಳುವೆ. ಆ ಪದ್ಯದ ಕೆಲವು ಸಾಲುಗಳು ಮಾತ್ರ ನನಗೆ ತಿಳಿದಿವೆ.
ನಾನು ಈಗ್ಗೆ ಸುಮಾರು ತಿಂಗಳ ಹಿಂದೆ, ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದಲ್ಲಿ, "ಶಿವಾನಂದ ಲಹರಿ" ಬಗ್ಗೆ ಒಂದು ಉಪನ್ಯಾಸ ಕೇಳುತ್ತಿದ್ದೆ. ಆಗ ಈ ಪದ್ಯದ ಪ್ರಸ್ತಾಪವಾಗಿತ್ತು,
ಯಾರೋ ಪುಣ್ಯಾತ್ಮರು ಈ ರೀತಿ ಒಂದು ಸರಳ ಪದ್ಯವನ್ನು ಬಹಳ ಹಿಂದೆ ರಚಿಸಿರುವರಂತೆ.
ಸುಲಿದ ಬಾಳೆಯಹಣ್ಣಿನಂದದಿ...
ಕಳಿದ.....ಕಬ್ಬಿನಂದದಿ...
......................
ಸಂಸ್ಕೃತದಲ್ಲಿನ್ನೇನು.
ಆ ಪದ್ಯದ ಅರ್ಥ ಹೀಗಂತೆ..
ನಮ್ಮ ಕನ್ನಡ ಭಾಷೆಯು, ಸುಲಿದ ಬಾಳೆ ಹಣ್ಣಿನಂತೆ, ಕಬ್ಬಿನ ಹಾಲು ಕುಡಿದಷ್ಟೇ ಸಿಹಿ.....ಹೀಗೆ ಸರಳವಾಗಿ ಇರುವ ಕನ್ನಡ ಭಾಷೆಯಲ್ಲಿ ನಾನು ಹೇಳುತ್ತೇನೆ. ಸಂಸ್ಕೃತದಲ್ಲಿ ಅದರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಸಂಸ್ಕೃತದಲ್ಲೂ ಅದೇ ಹೇಳಿದೆ.
ಜೇನಿನ ಹೊಳೆಯಾಗಿರುವ, ಹಾಲಿನ ಮಳೆಯಾಗಿರುವ ನಮ್ಮ ಕನ್ನಡ ಭಾಷೆಯನ್ನು ಇನ್ನಷ್ಟು ಸರಳವಾಗಿ ಹೊಗಳಿರುವ ಆ ಪದ್ಯ ಬೇಕಾಗಿದೆ. ನನಗೆ ಆ ಪದ್ಯವನ್ನು ದಯಮಾಡಿ ಯಾರಾದರು ತಿಳಿಸಿಕೊಟ್ಟರೆ ನಾನು ನಿಜವಾಗಿಯೂ ಚಿರಋಣಿಯಾಗಿರುತ್ತೇನೆ.

- Login or register to post comments
- 1669 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಸುಲಿದ ಬಾಳೆಯ ಹಣ್ಣಿನಂದದಿ
ಗೂಗಲ್ ಮಾಡಿದಾಗ, ಡಾ || ಚಿದಾನಂದಮೂರ್ತಿಯವರು ಈ ಪದ್ಯದ ಹಿರಿಮೆಯ ಬಗ್ಗೆ ವಿಶ್ವಕನ್ನಡದಲ್ಲಿ ಬರೆದಿರುವ ಒಂದು ಲೇಖನ ಕಂಡಿತು. ಇಂತಹ ಲೇಖನಗಳನ್ನು ಓದಲೇ ಬೇಕು ನಾವೆಲ್ಲರು.
Re: ಸುಲಿದ ಬಾಳೆಯ ಹಣ್ಣಿನಂದದಿ
ಸುನಿಲ್, ನೀವು ಕೇಳಿರುವ ಪದ್ಯ ಇಲ್ಲಿದೆ.
---------
ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳೆದ ಉಷ್ಣದ ಹಾಲಿನಂದದಿ ಸುಲಭವಾಗಿರುವ ಈ
ಲಲಿತವಹ ಕನ್ನಡ ನುಡಿಯಲಿ
ತಿಳಿದು ತನ್ನಲಿ ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲಿನ್ನೇನು?
Comment on (ಮನ's) comment
ಈ ಪದ್ಯವನ್ನು ರಚಿಸಿದವರಾರೆಂದು ತಿಳಿಸಿಕೊಟ್ಟರೆ ಚೆನ್ನಿತ್ತು.
ಸುಲಿದ ಬಾಳೆಯ ಹಣ್ಣಿನಂದದಿ - ರಚಿಸಿದವರು
ಡಾ|ಚಿದಾನಂದಮೂರ್ತಿಯವರು ಪ್ರಸ್ತಾಪಿಸಿರುವಂತೆ ಇದರ ರಚನಕಾರ ಮಹಾಲಿಂಗರಂಗ ಎಂಬ ಕವಿ. ಇದರ ಪೂರ್ಣ ಲೇಖನ ಇಲ್ಲಿದೆ.
ಮನರವರಿಗೆ ನಮೋನಮಃ
ನನಗೆ ಬಹಳ ಸಂತೋಷವಾಗುತ್ತಿದೆ. ಈ ಪದ್ಯವನ್ನು ತಿಳಿಸಿ ಬಹಳ ಉಪಕಾರವನ್ನು ಮಾಡಿರುವಿರಿ "ಮನ" ಅವರೇ. ಸವಿಯೊದಗು.
ಸವಿ ಸಿರಿ ಗನ್ನಡಂ ಗೆಲ್ಗೆ
ನಲಿವಾಯಿತು ಜೀವಕ್ಕೆ
ಒಲವಾಯಿತು ಭಾವಕ್ಕೆ
ಕನ್ನಡದ ಈ ಹೊಗಳಿಕೆ
ತಿಂದ ಹಾಗೆ ಹೋಳಿಗೆ
ಸಕ್ಕರೆಯದು ಕನ್ನಡದ ಪಾಲ್ಗೆ!
ಗೆಳೆಯರೇ,
ಸಾಲದೇ, 'ಸಂಸ್ಕೃತದಲಿನ್ನೇನು'? ಎಂಬುದೇನೋ ಸರಿ, ಕನ್ನಡದ ಹಿರಿಮೆ ಅರ್ಥವಾಗುತ್ತದೆ. ಆದರೆ, ಸಂಸ್ಕೃತವಿಲ್ಲದೆ ಕನ್ನಡವಿಲ್ಲ ಎಂಬುದಕ್ಕೆ ಇದೇ ಪದ್ಯವೇ ಒಳ್ಳೆಯ ಉದಾಹರಣೆ. ಏಕೆಂದರೆ ಇಲ್ಲಿಯೂ ಕೂಡ ಸಕ್ಕದದ ಬಳಕೆಯಿದೆ! ನೋಡಿ:
'ಉಷ್ಣ'ದ ಹಾಲು, 'ಸುಲಭ'ವಾಗಿರುವ, 'ಲಲಿತ'ವಹ, 'ಮೋಕ್ಷ' -> ಎಲ್ಲ ಶುದ್ಧ ಸಕ್ಕದಪದಗಳೇ! ಅಲ್ಲವೇ?
ಸಕ್ಕದದೊಳಿನಿತಕ್ಕರೆಯಿರಲ್
ಸಕ್ಕರೆಯದು ಕನ್ನಡದ ಪಾಲ್ಗೆ!
ನಿಮ್ಮ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ
ಗೆಳೆಯರೆ,
ಈ ದಿನ ಅಶೋಕ್ ಅವರು ಒಂದು ಕೊಂಡಿಯನ್ನು ನೀಡಿ ದೊಡ್ಡ ನೆರವನ್ನಿತ್ತರು. ತೆರೆದು ನೋಡಿದರೆ, ನಾವುಗಳು ತುಂಬಾ ದಿನಗಳಿಂದ ಕಾಯುತ್ತಿದ್ದ ಪುಸ್ತಕ ಸಿಕ್ಕಿತು.
ಈ ಪುಸ್ತಕದ ಮುನ್ನುಡಿಯನ್ನು ತಿರುವಿ ಹಾಕಿದಾಗ ತಿಳಿದುಬಂದದ್ದು, ಅನೇಕ ಕುತೂಹಲಕಾರಿಯಾದ ಅಂಶಗಳು.
೧. ಈ ಗ್ರಂಥದ ಕರ್ತೃವಿಗೂ, ಚಿತ್ರದುರ್ಗಕ್ಕೂ ಏನೋ ನಂಟಿದೆ.
೨. ನಾವು ಸಂಸ್ಕೃತದ ಅನೇಕ ಗ್ರಂಥಗಳು ಕನ್ನಡಕ್ಕೆ ಭಾಷಾಂತರವಾಗಿರುವದನ್ನು ಕಾಣುತ್ತೇವೆ. ಆದರೆ ಕುತೂಹಲಕಾರಿಯಾದ ಅಂಶವೆಂದರೆ, ಈ ಕನ್ನಡ ಗ್ರಂಥವು ಸಂಸ್ಕೃತಕ್ಕೆ ಭಾಷಾಂತರವಾಗಿದೆಯಂತೆ. "ಶ್ರೀಮತ್ಪರಮಹಂಸ ಬಾಲಕೃಷ್ಣ ಬ್ರಹ್ಮಾನಂದ ರಾಜಯೋಗಿಗಳು" ಇದನ್ನು ೧೭೩೫ರಲ್ಲಿ ಸಂಸ್ಕೃತಕ್ಕೆ ಅನುವಾದ ಮಾಡಿರುವರಂತೆ.
ಅನುಭವಾಮೃತ ಪುಸ್ತಕವನ್ನು ಪೂರ್ತಿಯಾಗಿ ಓದಲು ಇಲ್ಲಿ ಕ್ಲಿಕ್ಕಿ. ಶ್ರೀಮಹಲಿಂಗರಂಗಕವಿಯ ಅನುಭವಾಮೃತ (ಶುದ್ಧಪಾಠ) ಸರ್ವಾರ್ಥಸಂದರ್ಶಿನಿ ಎಂಬ ಟೀಕಿನೊಡನೆ - ಮುದ್ರಣ ೧೯೩೬
ಈ ಪುಸ್ತಕ ತುಂಬಾ ತೂಕವುಳ್ಳದ್ದೆನಿಸುತ್ತಿದೆ. ಓದಿದರೆ ತಿಳಿಯುವುದು. ಬಿಡುವಿದ್ದಾಗ ಅಥವಾ ಅದ್ವೈತದಲ್ಲಿ ಆಸಕ್ತಿಯುಳ್ಳವರು ಓದಬಹುದು. ಪಿ.ಡಿ.ಎಫ್ ಎಲ್ಲಿಯಾದರೂ ಅಪ್ಲೋಡ್ ಮಾಡಲು ಪ್ರಯತ್ನಿಸುವೆ.
ಉ: ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ
ಸುನೀಲ್ಜಿ,
ನಿಮ್ಮ ಡೌನ್ಲೋಡ್ ಸಲಕರಣೆಗೆ ಧನ್ಯವಾದಗಳು.
ಅನುಭವಾಮೃತ ಪುಸ್ತಕವನ್ನು ಇಳಿಸಿಕೊಂಡೆ. ಇದನ್ನು ಅಂತರ್ಜಾಲದ ಈ ಕೊಂಡಿಯಲ್ಲಿ ಇರಿಸಿದ್ದೇನೆ. ಬೇಕಾದವರು ಇಳಿಸಿಕೊಳ್ಳಿ.
http://www.mediafire.com/?52m091zh1tz
*ಅಶೋಕ್