ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!

‘ಗ್ರಹಣ ಹಿಡಿಯುವ ಸಮಯದಲ್ಲಿ ಊಟ ಮಾಡುವುದಿರಲಿ,
ಒಂದು ಹನಿ ನೀರನ್ನೂ ಕುಡಿಯಬಾರದು.’ ‘ಸೂರ್ಯನಿಗೆ ಗ್ರಹಣ ಅಪಾಯಕಾರಿ ವಿಕಿರಣಗಳು
ಹೊರಬರುತ್ತವೆ, ಮನೆಯಿಂದ ಹೊರಬರಬಾರದು’, ‘ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು,
ನೋಡಿದರೆ ಕಣ್ಣುಗಳು ಹೋಗಿಬಿಡುತ್ತವೆ’, ‘ಗ್ರಹಣ ಹಿಡಿದಾಗ ಮನೆಯಲ್ಲಿನ ನೀರಿನ ತೊಟ್ಟಿ,
ಟ್ಯಾಂಕು, ಫಿಲ್ಟರುಗಳಲ್ಲಿ ತುಳಸಿ ದಳ ಹಾಕಬೇಕು’ , ‘ಗ್ರಹಣ ಬಿಟ್ಟ ಕೂಡಲೇ ಸ್ನಾನ
ಮಾಡಬೇಕು’

ಇದಿಷ್ಟೂ ಆಜ್ಞೆ, ಅಪ್ಪಣೆಗಳನ್ನು ಟಿವಿಯಲ್ಲಿನ ಜೋತಿಷಿಯ ಬಾಯಿಂದ,
ಪತ್ರಿಕೆಗಳಲ್ಲಿನ ಮುಖವಿಲ್ಲದ ಜೋತಿಷ್ಯ ಪ್ರವೀಣರಿಂದ, ಮನೆಯ ಹಿರಿಯರಿಂದ, ಬಂಧು
ಬಳಗದವರಿಂದ ಕೇಳಿದ್ದಾಯಿತು. ಬೆಳಿಗ್ಗೆ ತಿಂಡಿಯನ್ನು ಎರಡೆರಡು ಬಾರಿ ಬಡಿಸುತ್ತಾ ಈಗಲೇ
ಜಾಸ್ತಿ ತಿಂದುಬಿಡಿ  ಗ್ರಹಣ ಹಿಡಿದಾಗ ‘ಹೊಟ್ಟೆ..’ ಅಂತ ರಾಗ ಎಳೀಬೇಡ್ರಿ. ಗ್ರಹಣ
ಕಳೆಯೋವರ್ಗೂ ಏನೂ ಇಲ್ಲ ಅಂದಾಗ ಏತಕ್ಕೋ ಅಮ್ಮ ಓದಿದ್ದು ಅಪ್ಪಟ ವಿಜ್ಞಾನದ ವಿಷಯಗಳಿದ್ದ
ಬಿಎಸ್ಸಿ ಪದವಿಯನ್ನು ಎನ್ನುವುದು ನೆನಪಾಗಿ ನಗುಬಂದಿತು.

ನಾನು ಇಂಜಿನಿಯರಿಂಗ್ ವಿದ್ಯಾರ್ಥಿ ಹೀಗಾಗಿ ಶುದ್ಧ ವಿಜ್ಞಾನದ ಬಗೆಗಿನ ಜ್ಞಾನ
ಪಿಯುಸಿ ಮಟ್ಟದಲ್ಲೇ ನಿಂತಿದೆ. ನಮ್ಮ ಶಿಕ್ಷಣ ಪದ್ಧತಿಯ ಹಿರಿಮೆ ಇದು! ಈಗಿರುವ ನಮ್ಮ
ಸಿಲ್ಯಾಬಸ್ಸು ಯಾತರದಕ್ಕೂ ಉಪಯೋಗವಿಲ್ಲ ಎಂದು ನಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುವ
ಕಂಪೆನಿಗಳು ಹಲುಬುತ್ತವೆ. ಇತ್ತ ಇರುವ ಸಿಲೆಬಸ್ಸು ನಮಗೆ ವಿಜ್ಞಾನವನ್ನು ಕಲಿಸುವುದೇ
ಇಲ್ಲ ಎಂದು ನಾವು ವಿದ್ಯಾರ್ಥಿಗಳು ಮರುಗಬೇಕು. ಹೈಸ್ಕೂಲಿನ ವಿಜ್ಞಾನದಲ್ಲಿ ಓದಿದ
ಸೂರ್ಯಗ್ರಹಣ, ಚಂದ್ರ ಗ್ರಹಣದ ಬಗೆಗಷ್ಟೇ ನನ್ನ ‘ಗ್ರಹಣ’ ಜ್ಞಾನ ಸೀಮಿತವಾಗಿತ್ತು.
ಅದರಲ್ಲೂ ನಮ್ಮ ಟೆಕ್ಸ್ಟ್ ಬುಕ್ ಮಾಹಿತಿಯನ್ನು ತಲೆಗೇರಿಸಿಕೊಂಡ ವೇಗದಲ್ಲೇ
ಪರೀಕ್ಷೆಯಲ್ಲಿ ಕಕ್ಕಿ ಪಾರಾಗಿರುತ್ತೇವೆ. ಅಂಥದ್ದರಲ್ಲಿ ವಿಜ್ಞಾನವನ್ನು ಓದಿದ
ಮಾತ್ರಕ್ಕೆ ವೈಜ್ಞಾನಿಕ ಮನೋಭಾವನೆ, ಮೂಢನಂಬಿಕೆಗಳೆಡೆಗೆ ನಿರ್ಲಕ್ಷ್ಯ,
ಪ್ರತಿಯೊಂದನ್ನೂ ಪ್ರಶ್ನಿಸಿ, ಪರಿಶೀಲಿಸಿ, ಪ್ರಯೋಗಕ್ಕೆ ಒಳಪಡಿಸಿ ಒಪ್ಪುವ ಗುಣ
ಅದೆಲ್ಲಿಂದ ಬರಬೇಕು!

ಈಗ ಈ ಹಂತದಲ್ಲಿ ನಿಂತು ಹಿಂದಿರುಗಿ ನೋಡಿದರೆ ನನ್ನ ಪ್ರೈಮರಿ ಸ್ಕೂಲು,
ಹೈಸ್ಕೂಲುಗಳಲ್ಲಿದ್ದ ವಿಜ್ಞಾನದ ಶಿಕ್ಷಕರ ಉತ್ಸಾಹ ಹಾಗೂ ಕಾಳಜಿಗಳಿಂದಾಗಿಯೇ ನನ್ನಲ್ಲಿ
ಕೊಂಚ ಮಾತ್ರವಾದರೂ ವೈಜ್ಞಾನಿಕ ಮನೋಭಾವ ಎಂಬುದು ಬೆಳೆದಿದೆ ಎನ್ನಬಹುದು. ಪ್ರೈಮರಿ
ಶಾಲೆಯಲ್ಲಿದ್ದಾಗ ವಿಜ್ಞಾನವನ್ನು ಆಟದ ಹಾಗೆ ಕಲಿಸುತ್ತಿದ್ದ ಗುರುಗಳಿದ್ದರು.
ಸೆಂಟ್ರಿಪಿಟಲ್, ಸೆಂಟ್ರಿಫ್ಯುಗಲ್ ಫೋರ್ಸು (ಇಂಗ್ಲೀಷ್ ಮೀಡಿಯಮ್ಮಿನ ಪ್ರಭಾವ, ಕನ್ನಡದ
ತಾಂತ್ರಿಕ ಪದಗಳು ತಿಳಿದಿಲ್ಲ) ಗಳನ್ನು ವಿವರಿಸುವಾಗ ಒಂದು ದಾರದ ತುದಿಗೆ
ಕಲ್ಲೊಂದನ್ನು ಕಟ್ಟಿ ತಮ್ಮ ತಲೆಯ ಮೇಲೆ ಗಿರ್ರನೆ ತಿರುಗಿಸುತ್ತಾ, ಒಮ್ಮೆ ದಾರವನ್ನು
ಅರ್ಧಕ್ಕೆ ತುಂಡರಿಸಿ ಕಲ್ಲು ಜಿಗಿಯುವ ರೀತಿಯನ್ನು ವಿವರಿಸುತ್ತಿದ್ದ ಶಿಕ್ಷಕರ ಚಿತ್ರಣ
ಇನ್ನೂ ಕಣ್ಣ ಮುಂದಿದೆ. ಇಷ್ಟು ಸರಳವಾದ ಡೆಮಾನ್ಸ್ಟ್ರೇಶನ್‌ನಿಂದ ನಮಗೆ ವಿಜ್ಞಾನವನ್ನು
ಮನದಟ್ಟು ಮಾಡಿಸುತ್ತಿದ್ದರು. ವೈಯಕ್ತಿಕ ಕಾಳಜಿಯಿರುವ, ವಿಜ್ಞಾನವನ್ನು ಪ್ಯಾಶನ್ ಎಂದು
ಭಾವಿಸಿದ ಶಿಕ್ಷಕರು ಮಾತ್ರವೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಬಲ್ಲರು.
ಮಠಾಧಿಪತಿಗಳು, ದೇವಸ್ಥಾನದ ಸಂಸ್ಥೆಗಳು ನಡೆಸುವ ಶಾಲೆಯಲ್ಲಿನ ವಿಜ್ಞಾನದ ಶಿಕ್ಷಕರು
ಒಂದು ತೆರನಾದ ಮುಜುಗರವನ್ನು ಅನುಭವಿಸುತ್ತಾರೆ. ಉದಾಹರಣೆಗೆ ಶಿಕ್ಷಕ ತರಗತಿಯಲ್ಲಿ
ವಿಜ್ಞಾನವನ್ನು ಬೋಧಿಸುವಾಗ ಹಲವು ಸಾಮಾಜಿಕ ಮೌಢ್ಯಗಳನ್ನು, ಧಾರ್ಮಿಕ ಕಂದಾಚಾರಗಳನ್ನು
ಖಂಡಿಸಬೇಕಾಗುತ್ತದೆ, ಆದರೆ ಮಕ್ಕಳಿಗೆ ಮಠದ ಸ್ವಾಮಿಗಳೋ, ಇನ್ನಿತರ ಹಿರಿಯರೋ ಅದೇ ಅಂಧ
ಆಚರಣೆಗಳನ್ನು ಬೋಧಿಸಿದಾಗ ಮಕ್ಕಳು ಎದುರಿಸುವ ಗೊಂದಲವನ್ನು ಕಂಡು ವಿಜ್ಞಾನದ ಶಿಕ್ಷಕರು
ಮುಜುಗರ ಪಡಬೇಕಾಗುತ್ತದೆ.

‘ಗ್ರಹಣ’ದ ಘಟನೆಯಿಂದ ನನ್ನ ವಿಜ್ಞಾನದ ಓದು ಎಲ್ಲಿಗೆ ನಿಂತಿದೆ ಎಂಬುದು
ಅರಿವಾಯ್ತು. ಈಗಲಾದರೂ ಶುದ್ಧ ವಿಜ್ಞಾನದ ವಿದ್ಯಾರ್ಥಿಯಾಗಬೇಕು! ಇಂಥ ಮಾಹಿತಿ
ತಂತ್ರಜ್ಞಾನದ ಯುಗದಲ್ಲಿ ಅದೇನು ಕಷ್ಟಸಾಧ್ಯವಲ್ಲ.

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!

hamsanandi's picture

"‘ಗ್ರಹಣ ಹಿಡಿಯುವ ಸಮಯದಲ್ಲಿ ಊಟ ಮಾಡುವುದಿರಲಿ,
ಒಂದು ಹನಿ ನೀರನ್ನೂ ಕುಡಿಯಬಾರದು.’ ‘ಸೂರ್ಯನಿಗೆ ಗ್ರಹಣ ಅಪಾಯಕಾರಿ ವಿಕಿರಣಗಳು
ಹೊರಬರುತ್ತವೆ, ಮನೆಯಿಂದ ಹೊರಬರಬಾರದು’, ‘ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು,
ನೋಡಿದರೆ ಕಣ್ಣುಗಳು ಹೋಗಿಬಿಡುತ್ತವೆ’, ‘ಗ್ರಹಣ ಹಿಡಿದಾಗ ಮನೆಯಲ್ಲಿನ ನೀರಿನ ತೊಟ್ಟಿ,
ಟ್ಯಾಂಕು, ಫಿಲ್ಟರುಗಳಲ್ಲಿ ತುಳಸಿ ದಳ ಹಾಕಬೇಕು’ , ‘ಗ್ರಹಣ ಬಿಟ್ಟ ಕೂಡಲೇ ಸ್ನಾನ
ಮಾಡಬೇಕು’ "

ಇಷ್ಟು ಮಾತುಗಳಲ್ಲಿ ಒಂದೆರಡು ಮಾತ್ರ ವಿಚಾರಿಸಲು ತಕ್ಕವು.
‘ಸೂರ್ಯನಿಗೆ ಗ್ರಹಣ ಅಪಾಯಕಾರಿ ವಿಕಿರಣಗಳು ಹೊರಬರುತ್ತವೆ’

---> ನಿಜ ಹೇಳಬೇಕೆಂದರೆ ಸೂರ್ಯನಿಂದ ಗ್ರಹಣ ಕಾಲದಲ್ಲಿ ಮಾತ್ರವಲ್ಲ, ಎಲ್ಲ ಹೊತ್ತಿನಲ್ಲೂ ಅಪಾಯಕಾರಿ ವಿಕಿರಣಗಳು ಬರುತ್ತಿರುತ್ತವೆ. ಹಾಗಾಗಿ, ಯಾವಾಗಲೂ ಸೂರ್ಯನನ್ನು ದಿಟ್ಟಿಸಿ ನೋಡಬಾರದು.

‘ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು, ನೋಡಿದರೆ ಕಣ್ಣುಗಳು ಹೋಗಿಬಿಡುತ್ತವೆ’

----> ಇದೂ ಕೂಡ ಹಿಂದಿನ ಸಾಲಿನಂತೆಯೇ. ಯಾವ ಸಮಯದಲ್ಲಾದರೂ ಸೂರ್ಯನನ್ನು ಬಹುಕಾಲ ದಿಟ್ಟಿಸಿ ನೋಡ ಬಾರದು ಅಂದಾಗ ಅದು ಗ್ರಹಣಕಾಲವನ್ನೂ ಸೇರಿಸಿಕೊಳ್ಳುತ್ತೆ.

ಯಾಕೋ ತೊಂಬತ್ತರ ದಶಕದ ನಂತರ ಟಿವಿ ರೇಡಿಯೋಗಳಲ್ಲಿ ಗ್ರಹಣವನ್ನು ಬರಿಗಣ್ಣಿಂದ ನೋಡಬೇಡಿ ಎಂಬ ಸಲಹೆ ಪ್ರಸಾರವಾಗತೊಡಗಿದ ಬಳಿಕ ’ಗ್ರಹಣ’ವಾದಿಗಳು, "ಹ್ಹ! ನೋಡಿ, ಇದನ್ನೇ ನಾವೂ ಹೇಳ್ತಿದ್ದಿದ್ದು ಸಾವಿರ ವರ್ಷದಿಂದ’ ಅಂತ ತಮ್ಮ ಭುಜ ತಾವೇ ತಟ್ಟಿಕೊಳ್ಳುತ್ತಿದ್ದಾರೆ!

ಸೂರ್ಯ ಮುಳುಗುವ ಸಮಯದಲ್ಲಿ (ಅಂದರೆ ಬೆಳಕು ಪ್ರಖರವಿಲ್ಲದಿರುವಾಗ) ನಡೆಯುವ ಗ್ರಹಣಗಳನ್ನು ಬರಿಗಣ್ಣಿಂದ ನೋಡಬಹುದು Smiling ಬೇಕಾದರೆ ಯಾರಾದರೂ ಕಣ್ಣಿನ ವೈದ್ಯರನ್ನು ಕೇಳಿ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!

uniquesupri's picture

ಹೌದು, ಸೂರ್ಯ ಗ್ರಹಣವೆಂಬುದು ಸೂರ್ಯನ ಹಾಗೂ ಭೂಮಿಯ ನಡುವೆ ಚಂದ್ರ ಬಂದಾಗ ಭೂಮಿಯ ಮೇಲೆ ಬೀಳುವ ಚಂದ್ರನ ನೆರಳು. ಬರಿಗಣ್ಣಿನಿಂದ ಸೂರ್ಯನನ್ನು ನೋಡಿದರೆ ನಮ್ಮ ಕಣ್ಣಿನ ರೆಟಿನಾ ಸುಟ್ಟು ಹೋಗುತ್ತದೆ. ಗ್ರಹಣದ ಸಮಯದಲ್ಲಿ ನಾವು ಮೈಮರೆತು ಸೂರ್ಯನನ್ನು ಬಹುಕಾಲ ದಿಟ್ಟಿಸುತ್ತೇವಾದ್ದರಿಂದ ಅಪಾಯ ಹೆಚ್ಚು.
ಈ ಸಲದ ಗ್ರಹಣವನ್ನು ನಾನು ಬರಿಗಣ್ಣಿನಿಂದಲೇ ನೋಡಿದೆ. ಮೋಡಗಳು ಸೂರ್ಯನನ್ನು ಭಾಗಶಃ ಕವಿದುಕೊಂಡದ್ದರಿಂದ ಗ್ರಹಣ ಹಿಡಿದ ಸೂರ್ಯನನ್ನು ಬರಿಗಣ್ಣಿನಿಂದಲೇ ನೋಡಬಹುದಿತ್ತು.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!

shreedevikalasad's picture

ಸುಪ್ರೀತ್‌, ನಿಮ್ಮ ಆಸಕ್ತಿ, ಓದು, ಶ್ರದ್ಧೆಗೆ ನನ್ನದೊಂದು ಪುಟ್ಟ ಶುಭಾಶಯ. ಒಳ್ಳೆಯದಾಗಲಿ. ಹೀಗೆ ಇನ್ನಷ್ಟು ವಿಷಯಗಳನ್ನು ತಿಳಿದುಕೊಂಡು ಬರೆಯುತ್ತಾ ಸಾಗಿ. ನಾವು ಓದುತ್ತಿರುತ್ತೇವೆ.

Syndicate content