ಒಂದೇ ಒಂದು ಪ್ರಶ್ನೆ, ಉತ್ತರದಿಂದ ನಿಮಗೆ ನಗು ಬರುತ್ತದೆಯೋ ಅಥವಾ ಕೋಪವೋ ?
ನೀವು ಈ ಮಾತನ್ನು ಕೇಳಿರಲೇಬೇಕು, ನೀನು ಕೋಪ ಮಾಡ್ಕೊಂಡಾಗ ಮುದ್ದಾಗಿ ಕಾಣಿಸ್ತೀಯಾ ? ಯಪ್ಪಾ, ನನಗೆ ನಗು ತಡೆಯಲಾಗುತ್ತಿಲ್ಲ. ಸರಿ ಈ ಕೆಳಗಿನ ಪ್ರಶ್ನೆಗ ಉತ್ತರವನ್ನು ನೀಡಿ. ನಗು ಬರುತ್ತದೋ ಅಥವಾ ಕೋಪ ಬರುತ್ತದೋ ನೀವು ನಿರ್ಧರಿಸಿ. ಪ್ರಶ್ನೆ ಹೀಗಿದೆ.
User(Member) ಎನ್ನುವುದಕ್ಕೆ ಕನ್ನಡ ಪದವೇನು ? ಹೇಳಬಲ್ಲಿರಾ ?
ಸರಿ ಈಗ ಮುಖ್ಯ ವಿಷಯ.
ಹಿಂದೆ ಪವನಜರು, ಕನ್ನಡಕ್ಕೆ ನೂರಾರು ಫಾಂಟುಗಳು ಬರಲಿವೆ ಎಂಬುದಾಗಿ ತಿಳಿಸಿದ್ದರು, ಇದರ ಕುರಿತಾದ ಸುದ್ಧಿ ಈ ದಿನ ಪ್ರಕಟವಾಗಿದೆ. ಆದರೆ ಲಿಂಕ್ ಎಲ್ಲೂ ಸಿಗಲಿಲ್ಲ. ಕೊನೆಗೆ ಅಡ್ಡೇಟಿನ ಮೇಲೆ ಗುಡ್ಡೇಟು ಎನ್ನುವ ಹಾಗೆ, ಅನೇಕ ಲಿಂಕುಗಳನ್ನು ಸುಮ್ಮನೆ ಟೇಪುತ್ತಿರುವಾಗ, ಕನ್ನಡ ಫಾಂಟುಗಳ ಲಿಂಕ್ ಸಿಕ್ಕೇಬಿಟ್ಟಿತು.
ನೋಡಿ, ಇಲ್ಲಿವೆ ಕನ್ನಡದ ನೂರಾರು ಓಪನ್ ಟೈಪ್ ಹಾಗು ಟ್ರೂಟೈಪ್ ಫಾಂಟುಗಳು. http://www.ildc.in/kannada/kindex.aspx
ಅಂದ ಹಾಗೆ, ನಿಮಗೆ ಫಾಂಟುಗಳು ಬೇಕಿದ್ದರೆ, ನಾನು ಮೊದಲು ಕೇಳಿದ ಪ್ರಶ್ನೆಗೆ ಉತ್ತರವನ್ನು ಹುಡುಕಿ, ಇಲ್ಲವಾದರೆ ನಿಮಗೆ ಫಾಂಟುಗಳು ಸಿಗುವುದಿಲ್ಲ. ಏಕೆಂದರೆ ನೀವು ಫಾಂಟುಗಳನ್ನು ಡೌನ್ಲೋಡ್ ಮಾಡಬೇಕೆಂದರೆ ಭಾರತ ಸರ್ಕಾರದ ಸೈಟಿನಲ್ಲಿ ಅನುಭೋಗಿಯಾಗಲೇಬೇಕು.
ಸರಿ, ಬನ್ನಿ ಎಲ್ಲರೂ ಅನುಭುಕ್ತರಾಗೋಣ.
ಗಂಗಾವತರಣ ಎನ್ನುವ ನಾಟಕ ಒಂದಿದೆ, ಬಹುಶಃ ನೀವೆಲ್ಲ ಓದಿರಬಹುದು, ಕೇಳಿರಬಹುದು, ಮತ್ತು ನೋಡಿರಲೂಬಹುದು. ಬಹಳ ಬಹಳ ಹಿಂದೆ, ಭಗೀರಥ ತನ್ನ ಪೂರ್ವಜರಿಗೆ ಮುಕ್ತಿ ದೊರಕಿಸಿಕೊಡಲೊಸುಗ ಗಂಗೆಯನ್ನು ಭೂಮಿಗೆ ಕರೆದುಕೊಂಡು ಬಂದ ಕಥೆಯದು. ಈ ಕಲಿಯುಗದಲ್ಲಿ, ನಾವು ಕನ್ನಡಿಗರಿಂದು ದಿನವೂ ಮಾಡ್ರನ್ ಗಂಗಾವತರಣವನ್ನು ನೋಡುತ್ತಿದ್ದೇವೆ. ಆದರೆ ಯಾರು ಯಾರಿಗೆ ಮುಕ್ತಿ ದೊರಕಿಸಿ ಕೊಡುವರೋ, ಆ ಬರ್ದಿಲನಿಗೇ (ಕ್ಷಮೆಯಿರಲಿ, ಆ ದೇವರಿಗೇ ಎಂದು ತಿಳಿಯುವುದು) ಗೊತ್ತು.

- Sunil Jayaprakash ರವರ ಬ್ಲಾಗ್
- Login or register to post comments
- 973 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re:ಬನ್ನಿ ಎಲ್ಲರೂ ಅನುಭುಕ್ತರಾಗೋಣ: ಭೋಗಾ ನ ಭುಕ್ತಾ:
ನಿಮ್ಮ ಅನುಭೋಗಿ / ಅನುಭುಕ್ತ ನೋಡಿ ನನಗೆ ನೆನಪಾಯಿತು .
ಭೋಗಾ ನ ಭುಕ್ತಾ: ವಯಮೇವ ಭುಕ್ತಾ:
ನಾವು ಭೋಗಗಳನ್ನು ಭೋಗಿಸಲಿಲ್ಲ ; ಅವೇ ನಮ್ಮನ್ನೂ ಭೋಗಿಸಿದವು...
ಈ ಫಾಂಟುಗಳೂ ಭೋಗಗಳೇ ? ನಮ್ಮನ್ನು ಭೋಗಿಸುವವೇ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಅನುರಾಗದ ಭೋಗS.....
ನೆನಪಿನಲ್ಲಿರಬೇಕು, ಆಕಸ್ಮಿಕ ಚಿತ್ರದ ಅನುರಾಗದ ಭೋಗಆ, ಸುಖವಾ, ನಲಿವಾ....
ಈ ದಿನ ತುಂಬಾ ಕೆಲಸವಿದ್ದುದರಿಂದ ನಾನು ಇನ್ನೂ ಭುಕ್ತನಾಗಿಲ್ಲ. ಕೇವಲಂ ಡೌನ್ಲೋಡುಂ ಮಾಡಿರ್ಪೆಂ
.
ಯಥಾಪ್ರಕಾರವಾಗಿ, ತದಂತರ್ಜಾಲ ತಾಣವು (ತಾಣದ ಬದಲು ಕ್ಷೇತ್ರ ಮಾಡಿದರೆ...ಸಖ್ಖತ್ ಮಜ್ಜಾ....ಭೈರಪ್ಪನವರ ಪರ್ವ ಅಥವಾ ವಂಶವೃಕ್ಷ ಓದಿದವರಿಗೆ ತಿಳಿದಿರುತ್ತದೆ
) ಬಹೋತ್ SLOW ಆಗಿರ್ಪುದು
Re: ಡೌನ್ಲೋಡುಂ ಮಾಡಿರ್ಪೆಂ
ನಕ್ಕೂ ನಕ್ಕೂ ಸುಸ್ತಾಯಿತು.
ನಾನೂ ಹಳೆಗನ್ನಡವಂ ಕಲಿವೆಂ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re:ಬನ್ನಿ ಎಲ್ಲರೂ ಅನುಭುಕ್ತರಾಗೋಣ: ಭೋಗಾ ನ ಭುಕ್ತಾ:
ಭೋಗಾ ನ ಭುಕ್ತಾ: ವಯಮೇವ ಭುಕ್ತಾ:
ನಾವು ಭೋಗಗಳನ್ನು ಭೋಗಿಸಲಿಲ್ಲ ; ಅವೇ ನಮ್ಮನ್ನೂ ಭೋಗಿಸಿದವು...
ಈ ಫಾಂಟುಗಳೂ ಭೋಗಗಳೇ ? ನಮ್ಮನ್ನು ಭೋಗಿಸುವವೇ ?
ಕನ್ನಡದ ಆದಿಕವಿ punಪ ಈ ಭೋಗ(ಫಾಂಟು)ಗಳನ್ನು ಬಳಸಿಯೇ ಬರೆದದ್ದು:
"ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ..." ಎಂದು!
Re: ಒಂದೇ ಒಂದು ಪ್ರಶ್ನೆ, ಉತ್ತರದಿಂದ ನಿಮಗೆ ನಗು ಬರುತ್ತದೆಯೋ ಅಥವಾ ಕೋಪವೋ
User(Member) ಎನ್ನುವುದಕ್ಕೆ ಕನ್ನಡ ಪದವೇನು ? ಹೇಳಬಲ್ಲಿರಾ ?
ಅನುಭೋಗಿ ಎನ್ನುವುದು ಸರಿಯಾದ ಪ್ರಯೋಗ ಅನಿಸುತ್ತದೆ. ನಾನು ಅನುವಾದ ಮಾಡುವಾಗ ಇಲ್ಲಿಯವರೆಗೆ 'ಬಳಕೆದಾರ' ಎಂದೇ ಬಳಸುತ್ತಿದ್ದೇನೆ.
ನೋಡಿ, ಇಲ್ಲಿವೆ ಕನ್ನಡದ ನೂರಾರು ಓಪನ್ ಟೈಪ್ ಹಾಗು ಟ್ರೂಟೈಪ್ ಫಾಂಟುಗಳು. http://www.ildc.in/kannada/kindex.aspx
ಈ ಕೊಂಡಿ ದೊರಕಿಸಿದ್ದಕ್ಕೆ ಧನ್ಯವಾದಗಳು.
ಅಂದ ಹಾಗೆ, ನಿಮಗೆ ಫಾಂಟುಗಳು ಬೇಕಿದ್ದರೆ, ನಾನು ಮೊದಲು ಕೇಳಿದ ಪ್ರಶ್ನೆಗೆ ಉತ್ತರವನ್ನು ಹುಡುಕಿ, ಇಲ್ಲವಾದರೆ ನಿಮಗೆ ಫಾಂಟುಗಳು ಸಿಗುವುದಿಲ್ಲ. ಏಕೆಂದರೆ ನೀವು ಫಾಂಟುಗಳನ್ನು ಡೌನ್ಲೋಡ್ ಮಾಡಬೇಕೆಂದರೆ ಭಾರತ ಸರ್ಕಾರದ ಸೈಟಿನಲ್ಲಿ ಅನುಭೋಗಿಯಾಗಲೇಬೇಕು.
ಸರಿ, ಬನ್ನಿ ಎಲ್ಲರೂ ಅನುಭುಕ್ತರಾಗೋಣ.
ಇದು ಯಾಕೋ ನನಗೆ ಸರಿ ಕಾಣುತ್ತಿಲ್ಲ. ಇದು ಸರಕಾರಿ ತಾಣ. ಹಾಗಾಗಿ ಇದು ಸಾರ್ವಜನಿಕ ಸೊತ್ತು. ಇಲ್ಲಿ ಯಾವುದೇ ನೊಂದಣಿ ಇಲ್ಲದೆಯೇ ತಂತ್ರಾಂಶಗಳು ಸಿಗುವಂತಿರಬೇಕು.
ಆದರೂ ಕುತೂಹಲದಿಂದ ನೊಂದಣಿ ಮಾಡಿಕೊಂಡೆ. ಒಳಗೆ ಫಾಂಟುಗಳು, ಪದ ಪರೀಕ್ಷಕ, ಪದಕೋಶ, ಇನ್ನೂ ನಾನಾ ಬಗೆಯ ತಂತ್ರಾಂಶಗಳು ಲಭ್ಯವಿವೆ. ಅವುಗಳನ್ನು ಬಳಸಿ ನೋಡಿ ಅವುಗಳ ಉಪಯುಕ್ತತೆ ಬಗ್ಗೆ ಬರೆಯಬಲ್ಲೆ.
-----
ಶಶಿಧರ
ಒಂದೇ ಒಂದು ದನಿ
ಶಶಿಧರ್,
ದಯವಿಟ್ಟು ನೀವು ಈಗ ಬಳಸಿರುವ ಬಳಕೆದಾರ, ಇಲ್ಲವೇ ಸದಸ್ಯ ಎಂಬ ಪದಗಳನ್ನೇ, ಮತ್ತೊಮ್ಮೆ ದಯವಿಟ್ಟು, ಮುಂದುವರಿಸಿ, ಮುಂದುವರಿಸೋಣ. ಅನುಭೋಗಿ ಯಾವ ರೀತಿಯಿಂದಲೂ ಸರಿಯಿಲ್ಲ. ಕನ್ನಡ ಅಲ್ಲವೇ ಅಲ್ಲ ಅದು.
ಸವಿಯೊದಗು, ನಾನು ಬರೇ ಡೌನ್ಲೋಡ್ ಮಾಡಿಟ್ಟಿದ್ದೇನೆ. ಈ ದಿನ ತುಂಬಾ ಕೆಲಸವಿರುವುದರಿಂದ ಯಾವುದನ್ನೂ ಇಸ್ಟಾಲ್ ಮಾಡಲು ಹೋಗಿಲ್ಲ.
Re: ಒಂದೇ ಒಂದು ದನಿ
krishnamurthy bmsce
ನಿಮ್ಮ ಉತ್ತರವೂ ಸರಿ ಎನಿಸುತ್ತದೆ ಆದರೆ ಆ ಪದಕ್ಕೆ "ಉಪಯೋಗಿ"ಅಥವ"ಉಪಯೋಗಿಸುವವನು"ಎನ್ನುವುದು ಸರಿಎನಿಸುತ್ತದೆ
ಅಲ್ಲವೇ ಸುನಿಲರೇ
ಮತ್ತೊಂದು ದನಿ: ಒಂದೇ ಒಂದು ದನಿ
ಯಪ್ಪಾ ಒಂದು ಸಂಸ್ಕೃತವನ್ನು ನಿಭಾಯಿಸುವುದೇ ಕಷ್ಟ, ಇನ್ನು ಮೂರು ನಾಲ್ಕು ಬಂದುಬಿಟ್ಟರೆ ಮುಗೀತು. ಒಬ್ಬ Member ಅನುಭೋಗಿಯಾದರೆ, ಆ ಸೈಟಿನಲ್ಲಿರುವುದೆಲ್ಲವನ್ನು ಚೆನ್ನಾಗಿ(ಸಮ್ಯಕ್ಕಾಗಿ) ಬಳಸಿದರೆ ಅವನು ಸಂಭೋಗಿಯಾಗಬೇಕಾಗುತ್ತದೆ
. ಸುಷ್ಟುಪ್ ಆಗಿ ಮಾಡಿದರೆ ಸುಭೋಗಿಯಾಗಬೇಕಾಗುತ್ತದೆ.
ಸ್ವಾಮಿ ಕಾರ್ಯದಲ್ಲಿ ಸ್ವಲ್ಪ ಸಹಾಯ ಮಾಡುವವರನ್ನು ಉಪಭೋಗಿ ಅಂತ ಕರೆಯಬೇಕಾಗುತ್ತದೆ. ಕೆಟ್ಟದಾಗಿ ಬಳಸುವವನು ದುರ್ಭೋಗಿ. ನಿರ್ಭೋಗಿ ಯಾರೋ ತಿಳಿಯದು. ಯಪ್ಪಾ, ಸಾಕಾ ಸಂಸ್ಕೃತ. ಅದೇನು ಕನ್ನಡನಾಡಿನಲ್ಲಿರುವವರಿಗೆಲ್ಲಾ ಕನ್ನಡವೇ ಬರದಿದ್ದರೂ ಚತುರ್ವೇದಾಧ್ಯಯನದ ಮೂಲಕ ಸಂಸ್ಕೃತವಂತೂ ಸಿದ್ಧಿಸಿರಲೇಬೇಕು ಅಂತ ತಿಳಿದಹಾಗಿದೆ ನಮ್ಮ ವಿದ್ವತ್ ಪ್ರಪಂಚ. ಇಂತಹ ಕಾರಣದಿಂದಾಗಲೀ ಭಾಷಾ ವಿಷಯದಲ್ಲಿ ಇನ್ನಿತರ ರಾಜ್ಯಗಳಲ್ಲಿ ಕಂಡುಬರುವ ಐಕ್ಯತೆ ಕನ್ನಡನಾಡಿನಲ್ಲಿ ಇಲ್ಲವೇನೋ ?
ಸುಮ್ಮನೆ, ಸರಳವಾಗಿರುವ ಬಳಕೆದಾರ (ಇದು ಉದ್ದವೆನಿಸಿದರೆ, ಅಥವಾ ಗ್ರಾಮ್ಯವೆನಿಸಿದರೆ ಅಥವಾ ಸಂಸ್ಕೃತವೇ ಬೇಕೆಂದರೆ ಸದಸ್ಯ, ಹೋಗಲಿ ವರ್ಸ್ಟ್ ಸಿನಾರಿಯೋದಲ್ಲಿ ಮೆಂಬರ್) ಅಂತಲೇ ಬಳಸೋಣ. ಈ ಅನುಭೋಗಿ, ಅನುಭುಕ್ತ, ಸಂಭೋಗದಂತಹ ಘೇಂಡಾಮೃಗಗಳು ದಯವಿಟ್ಟು ಕನ್ನಡಕ್ಕೆ ಬೇಡ.
ಉ: ಮತ್ತೊಂದು ದನಿ: ಒಡೆದು ಆಳುವ ನೀತಿಯತ್ತ...
ಸುನಿಲ್,
ಬಳಕೆದಾರ, ಉಪಯೋಗಿಸುವವನು ಮತ್ತು ಸದಸ್ಯ ಮೂರೂ ಹೊಂದುತ್ತದೆ. ಅನುಭೋಗಿ ಇತ್ಯಾದಿಗಳು ಖಂಡಿತ ಬೇಡ. ಆದರೆ "ಮೆಂಬರ್" ಎಂಬ "ವರ್ಸ್ಟ್ ಕೇಸ್" ಬಗ್ಗೆ ನನ್ನ ವಿರೋಧವಿದೆ. ಕನ್ನಡದ್ದಲ್ಲದ ಬೇರೆ ಭಾಷೆಯ ಪದವನ್ನು ಒಪ್ಪುವುದೇ ಅದರೆ, ನಾನು ಸಂಸ್ಕೃತವನ್ನು ಒಪ್ಪುತ್ತೇನೆ. ಆದರೆ ಇಂಗ್ಲೀಷನಲ್ಲ. ಏಕೆಂದರೆ ಸಂಸ್ಕೃತಕ್ಕೆ ಭಾರತೀಯ ಸೊಗಡಾದರೂ ಇದೆ. ನೀವೇನೇ ಅನ್ನಿ, ಸಂಸ್ಕೃತ ಭಾರತೀಯ ಮೂಲದ್ದು.
ದಯವಿಟ್ಟು ತಪ್ಪು ತಿಳಿಯಬೇಡಿ. ನಾವು "ಕನ್ನಡ, ಕನ್ನಡೀಕರಣ"ದ ಭರಾಟೆಯಲ್ಲಿ "ಭಾರತೀಯತೆ"ಯನ್ನು ಮರೆಯುತ್ತಿದ್ದೀವಾ ಅಂತ ನನಗೆ ಹೆದರಿಕೆಯಾಗುತ್ತಿದೆ. ಪ್ರತಿ ರಾಜ್ಯದವರೂ "ಹಿಂದಿ ಹೇರಿಕೆ, ಸಂಸ್ಕೃತ ಹೇರಿಕೆ" ವಿರುದ್ಧ ಹೋರಾಡೋಣ, ನಮ್ಮ ಭಾಷೆಯನ್ನು ಉಳಿಸೋಣ, ಎನ್ನುವುದು ಒಪ್ಪುವಂಥ ಮಾತು. ಆದರೆ ಅನಿವಾರ್ಯವೆನ್ನುವ ಸ್ಥಿತಿ ಬಂದಾಗ, ನಮ್ಮೆಲ್ಲರ ಮನಃಸ್ಥಿತಿ ಹೇಗಾಗಿದೆ ಅಂದರೆ, "ನಾನು ಇಂಗ್ಲಿಷನ್ನು ಬೇಕಾದರೂ ಒಪ್ಪುತ್ತೇನೆ, ಆದರೆ ಸಂಸ್ಕೃತ, ಹಿಂದಿಯನ್ನಲ್ಲ" ಅಂತ ಹೇಳುತ್ತೇವೆ. ಇದನ್ನು ಹೇಳುವ ಮುನ್ನ ನಮ್ಮ ಇತಿಹಾಸವನ್ನು ಒಮ್ಮೆ ನೆನಪಿಗೆ ತಂದುಕೊಳ್ಳಲೇಬೇಕು. ಇದೂ ಪುನಃ "ಒಡೆದು ಆಳುವ ನೀತಿ"ಯತ್ತ ನಮ್ಮನ್ನು ಕೊಂಡೊಯ್ಯುವುದಿಲ್ಲವೇ? ಒಮ್ಮೆ ಎಲ್ಲಾ ರಾಜ್ಯಗಳಲ್ಲೂ ಇಂಗ್ಲಿಷ್ ಕಾಲೂರಿದರೆ, ಅದು ಕೇವಲ ಹತ್ತು ವರ್ಷಗಳಲ್ಲಿ ಎಲ್ಲ ಭಾರತೀಯ ಭಾಷೆಗಳನ್ನೂ ತಿಂದು ಮುಗಿಸುತ್ತದೆ, ಇದು ಖಚಿತ. ಆಮೇಲೆ, ಬರಿಯ ಸಂಸ್ಕೃತ ಅಷ್ಟೇ ಎಲ್ಲ, ಎಲ್ಲಾ ಭಾರತೀಯ ಭಾಷೆಗಳೂ so called (ಯಾಕೆಂದರೆ ನಾನು ಈ ಹಣೆಪಟ್ಟಿಯನ್ನು ಒಪ್ಪುವುದಿಲ್ಲ) "ಸತ್ತ ಭಾಷೆಗಳ" ಪಟ್ಟಿಯಲ್ಲಿ ರಾರಾಜಿಸುತ್ತವೆ. ಇದು ನಮಗೆ ಬೇಕೆ?
ಕನ್ನಡೀಕರಣಕ್ಕೆ, ಕನ್ನಡ ಪದಗಳ ಬಳಕೆಗೆ ನನ್ನ ಮೊದಲ ಆದ್ಯತೆ. ಇದರ ಬಗ್ಗೆ ಎರಡನೇ ಮಾತೇ ಇಲ್ಲ. ಆದರೆ ಪದಗಳು ಸಿಗಲೇ ಇಲ್ಲವೆಂದಲ್ಲಿ, ಇಂಗ್ಲಿಷ್ಗೆ ಶರಣಾಗಲು ನನ್ನ ಮನಸ್ಸು ಒಪ್ಪುವುದಿಲ್ಲ. ಉದಾಹರಣೆಗೆ, ಸಂಸ್ಕೃತವನ್ನು ಪೂರ್ಣ ಕಿತ್ತೊಗೆಯಲೇಬೇಕೆಂದು, ಈಗಾಗಲೇ ವ್ಯಾಪಕವಾಗಿ ಬಳಕೆಯಲ್ಲಿರುವ "ಸದಸ್ಯ" ಎನ್ನುವ ಪದದ ಬದಲಾಗಿ "ಯೂಸರ್/ಮೆಂಬರ್" ಅನ್ನುವುದನ್ನು ಒಪ್ಪೋಣ; ಆದರೆ ಈ "ಸದಸ್ಯ" ಮಾತ್ರ ಬೇಡ, ಅಂತ ಯಾರಾದರೂ ಹೇಳಿದಾಗ ಮೈ ಪರಚಿಕೊಳ್ಳುವಂತಾಗುತ್ತದೆ. ಇದು ಟಿಪಿಕಲ್ "ಇಬ್ಬರ ಜಗಳ ಮೂರನೆಯವನಿಗೆ ಲಾಭ"ದ ದೃಶ್ಯ ಅನ್ನಿಸುವುದಿಲ್ಲವೇ? ಇದರಿಂದ ಲಾಭ ಯಾರಿಗೆ? ಸ್ವಲ್ಪ ತಣ್ಣಗೆ ಯೋಚಿಸಿ. ದಶಕಗಳಿಂದ ಕನ್ನಡದ್ದೇ ಅನ್ನುವಂತಿದ್ದ "ಸದಸ್ಯ" ಪದ ಹೋಯಿತು, ಅದಕ್ಕೆ ಬದಲಾಗಿ ಯಾವ ಕನ್ನಡ ಪದವೂ ಬರಲಿಲ್ಲ. ಆ ಜಾಗದಲ್ಲಿ ಇಂಗ್ಲಿಷ್ "ಮೆಂಬರ್/ಯೂಸರ್" ಬಂದು ಕುಳಿತಿತು. ಇದರಿಂದ ನಮಗಾದ ಲಾಭವೇನು? ಇದು ಕೇವಲ ಉದಾಹರಣೆಗೆ ಹೇಳಿದ್ದು, ಸದಸ್ಯ ಪದದ ಬಗ್ಗೆ ಇಲ್ಲಿ ಚರ್ಚೆ ನಡೆಯುತ್ತಿಲ್ಲ. ಹಾಗೆ ಭಾವಿಸಬೇಡಿ. "ಇಲ್ಲಪ್ಪ, ಇಂಗ್ಲಿಷ್ ಆದರೂ ಪರವಾಗಿಲ್ಲ, ಆದರೆ ಸಂಸ್ಕೃತ ಮಾತ್ರ ಆಗೋದಿಲ್ಲ" ಅನ್ನುವುದು ಕನ್ನಡಪರ ನಿಲುವಿಗಿಂತ ಸಂಸ್ಕೃತ ವಿರೋಧೀ ನಿಲುವಾಗುತ್ತದೆ ಅಲ್ಲವೇ? ಇದರಿಂದ ಕನ್ನಡಕ್ಕೆ ಯಾವ ಲಾಭವೂ ಇಲ್ಲ.
ಸಂಸ್ಕೃತ ವಿರೋಧೀ ಮನೋಭಾವದಲ್ಲಿ ನಾವು ಪುನಃ ಇಂಗ್ಲಿಷ್ ದಾಸ್ಯಕ್ಕೆ ಒಳಗಾದರೂ ಪರವಾಗಿಲ್ಲ ಅನ್ನುವ ಈ ನಿಲುವು ಯಾಕೆ ಬೇಕು, ಮತ್ತು ಎಷ್ಟು ಸರಿ? ಬೇಡ, ದಯವಿಟ್ಟು ಹೀಗಾಗಲು ಬಿಡುವುದು ಬೇಡ. ಕಲಿಯುವುದೇ ಆದರೆ ನಮ್ಮದೇ ದೇಶದ ಇನ್ನೊಂದು ಭಾಷೆಯಿಂದ ಕಲಿಯೋಣ, ಆದರೆ ಇಂಗ್ಲಿಷ್ಗೆ ಪುನಃ ಶರಣಾಗುವುದು ಬೇಡ ಅಂತ ನನ್ನ ಅನಿಸಿಕೆ.
ಏನೋ ಹೊಟ್ಟೆಪಾಡಿನ ದೃಷ್ಟಿಯಿಂದ ಇಂಗ್ಲಿಷ್ ಬೇಕೇ ಬೇಕೇ, ಆಡಿಕೊಂಡಿದ್ದೇನೆ. ಆದರೆ ಇಬ್ಬರು ಚೀನೀಯರು ಭೇಟಿಯಾದಾಗ ಅವರು ಚೀನಿ ಭಾಷೆಯಲ್ಲೇ ಮಾತಾಡುವುದನ್ನು ಕೇಳಿ ಸಂಕಟವಾಗುತ್ತದೆ. ನಾನು ಇನ್ನೊಬ್ಬ ಭಾರತೀಯನನ್ನು ಭೇಟಿಯಾದಾಗ ಬಳಸುವ, ಬಳಸಲೇಬೇಕಾದ ಭಾಷೆ 'ಇಂಗ್ಲಿಷ್"! ಅಂತಹ ಪರಿಸ್ಥಿತಿ ಉಂಟಾಗಿದೆ. ದೆಹಲಿಯಂತಹ ದೆಹಲಿಯಲ್ಲೂ, ಇಂಗ್ಲಿಷ್ ಯಾವ ಪರಿಯಲ್ಲಿ ಬೆಳೆಯುತ್ತಿದೆ ಅಂದರೆ, ಕೇಳಿಯೇ "ಆನಂದಿಸ"ಬೇಕು. "ಮೇರಾ ಭಾರತ್ ಮಹಾನ್".
- ಶ್ಯಾಮ್ ಕಿಶೋರ್
ನನ್ನ ಸಂಸ್ಕೃತದ ಒಲವು : ಒಡೆದು ಆಳುವ ನೀತಿಯತ್ತ...
ಶ್ಯಾಮ್ ಕಿಶೋರ್,
ನೀವು ಸಂಸ್ಕೃತದ ಪ್ರಸ್ತಾಪವನ್ನು ಮಾಡಿದ್ದರಿಂದ ಈ ಹೆಮ್ಮೆಯಲ್ಲಿ ನಾನೂ ಪಾಲ್ಗೊಳ್ಳಬೇಕೆನಿಸಿತು.
ಈ ಹೆಮ್ಮೆಯಲ್ಲಿ ನಾನೂ ಪಾಲ್ಗೊಳ್ಳುತ್ತೇನೆ. Sanskrit is Indo-European ಎಂದು ಕರೆದರೂ ಅದು ಪ್ರಪಂಚಕ್ಕೆ ಭಾರತವು ನೀಡಿರುವ ಹೆಮ್ಮೆಯ ಕೊಡುಗೆ ಎನ್ನುವುದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಅಸೂಯೆಯಂತೂ ಇಲ್ಲವೇ ಇಲ್ಲ.
Infact, ಸಂಸ್ಕೃತವನ್ನು ಸತ್ತ ಭಾಷೆ ಎಂದು ಕರೆಯಲು ನನಗೆ ಮನಸ್ಸೇ ಬರುವುದಿಲ್ಲ. ಏಕೆಂದರೆ ಅದು ಎಂದೂ ಸತ್ತಿಲ್ಲ. ಸಾಯಲು ಸಾಧ್ಯವೂ ಇಲ್ಲ. ಈ ವಿಷಯವಾಗಿ ನಾನು ಶಾಲಾ ಕಾಲೇಜುಗಳಲ್ಲಿ ವಾದ ಮಾಡಿದ್ದೇನೆ. ಸತ್ತು ಹೋಗಿರುವ ಭಾಷೆಯನ್ನು ಯಾಕೋ ಕಲೀಬೇಕು ಅಂತ ಹೇಳುತ್ತಿದ್ದ ನನ್ನ ಸ್ನೇಹಿತರಿಗೆ ಅವರ ನಿಲುವು ತಪ್ಪು ಎಂದು ತಿಳಿಹೇಳಿದ್ದೇನೆ. ಕಟ್ಟಾ ಸಂಸ್ಕೃತ ದ್ವೇಷಿಗಳು ಬೇಕಿದ್ದರೆ ಹೇಳಬಹುದು, ಆದರೆ ಕನ್ನಡಿಗರು ಸಂಸ್ಕೃತವನ್ನು ಎಂದೂ ದ್ವೇಷಿಸಲಾರರು. ಯಾರು ಏನು ಹೇಳಿದರೂ ಸಂಸ್ಕೃತವು ಸಮ್ಯಕ್ ಕೃತವೇ(ಚೆನ್ನಾಗಿ ಮಾಡಲ್ಪಟ್ಟಿದ್ದು), ಕನ್ನಡವು ಕರುನುಡಿಯೇ (embossed, ಪರಿಪಕ್ವವಾದ ಭಾಷೆಯೇ). ಆದರೆ ನನಗಿರುವ ಬೇಸರವೆಂದರೆ ಕನ್ನಡದ ಬಗ್ಗೆ ಕನ್ನಡದ ಪಂಡಿತರುಗಳಿಗೇ ಇರುವ ತಾತ್ಸಾರ.
ಆದರೆ ವಿವಿಧ ಭಾಷೆಯಗಳ ನಡುವೆ ಕೊಟ್ಟುತಂದು ಮಾಡಿಕೊಳ್ಳುವಾಗ ನಮಗೆ ಏನು ಬೇಕು ಅದನ್ನು ಮಾತ್ರವೇ ಸ್ವೀಕರಿಸೋಣ. ಆದರೆ ಪಾರಿಭಾಷಿಕ ಎನ್ನುವುದಕ್ಕೆ ಸಂಸ್ಕೃತವನ್ನು ಅನ್ವರ್ಥವಾಗಿ ಬಳಸಿದರೆ ಅಥವಾ ಸಂಸ್ಕೃತವನ್ನು ಕನ್ನಡ ಅರಿಗಿಸಿಕೊಂಡಿದೆ ಎನ್ನುವಾಗ ಸಂಸ್ಕೃತವೆಲ್ಲವೂ ಕನ್ನಡವೇ ಎಂದರೆ ಅಥವಾ ಒಂದರ್ಥದಲ್ಲಿ ಕಣ್ಣುಮುಚ್ಚಿಕೊಂಡು ಸಂಸ್ಕೃತವನ್ನು ಅಪ್ಪಬೇಕು ಎಂಬಂತಹ ಮಾತುಗಳನ್ನು ಹೇಳಿದರೆ ಆ ಮಾತನ್ನು ನಾನು ಖಂಡಿತವಾಗಿಯೂ ವಿರೋಧಿಸುತ್ತೇನೆ. ಈ ಕನ್ನಡ-ಸಂಸ್ಕೃತ ಪ್ರಯೋಗಗಳನ್ನು ನಾನೇ ಖುದ್ದಾಗಿ ಕೆಲವು ಉಪನ್ಯಾಸಗಳಲ್ಲಿ ಕೇಳಿದ್ದೇನೆ. ನಾಟಕಗಳಲ್ಲಿ ಈಗೀಗ ಬರ್ತಾರೆ, ಹೋಗ್ತಾರೆ ಎನ್ನುಂತಹ ಪದಗಳನ್ನು ಬಳಸುತ್ತಿದ್ದಾರೆ....ಅದಕ್ಕೆ ಪರ್ಯಾಯವಾಗಿ ಆಗಮಿಸುತ್ತಾರೆ, ನಿರ್ಗಮಿಸುತ್ತಾರೆ ಅಂತ ಉಪಯೋಗಿಸಕ್ಕಾಗಲ್ವೇ ಎನ್ನುವಂತಹ ಹಿತೋಪದೇಶದ ನುಡಿಗಳನ್ನು ಕೆಲವು ಉಪನ್ಯಾಸಗಳಲ್ಲಿ ಕೇಳಿಸಿಕೊಂಡಿದ್ದೇನೆ. Edit DialogBoxಇಗೆ ಸಂಕಲನ ಸಂವಾದ ಚೌಕ ಎನ್ನುವುದರಲ್ಲಿ ಯಾವ ಭಾರತೀಯತೆಯೂ ನಮಗೆ(ಕಡೇಪಕ್ಷ ನನಗೆ) ಕಾಣಿಸದು. ಇಂತಹ ಪ್ರಯೋಗಗಳು ತಂತ್ರಜ್ಞಾನವನ್ನು ಜನಸಾಮಾನ್ಯರಿಂದ ಮತ್ತಷ್ಟು ದೂರತಳ್ಳುತ್ತದೆಯೇ ವಿನಃ ಬೇರೇನನ್ನೂ ಸಾಧಿಸುವುದಿಲ್ಲ. ಹೊಸದಾದ ಪದಕ್ಕೆ, ಕನ್ನಡವೇ ಬೇಕೆಂದರೆ ಕನ್ನಡವನ್ನೇ ಬಳಸಬೇಕು (ಹುಡುಕಬೇಕು, ರೂಪಿಸಬೇಕು), ಇಲ್ಲವೇ, ಕನ್ನಡ ಪದ ಸಿಗದಿದ್ದಾಗ ಸಂಸ್ಕೃತ, ಇಂಗ್ಲೀಷ್ ಅಥವಾ ಮೂಲಭಾಷೆ ಇವುಗಳಲ್ಲಿ ಯಾವುದು ಸುಲಭವೋ ಅದನ್ನೇ ಬಳಸಬೇಕು. ಇದು ನನ್ನ ವೈಯಕ್ತಿಕವಾದ ಅನಿಸಿಕೆ. ಇಂಗ್ಲೀಷ್ ಪದಗಳನ್ನು ಬಳಸಿದ ಮಾತ್ರಕ್ಕೆ ಇಂಗ್ಲೀಷ್ ಕಲಿತಂತಾಗುವುದಿಲ್ಲ. ಹೇಗೆ ಸಂಸ್ಕೃತ ಪದಗಳನ್ನು ಬಳಸಿದ ಮಾತ್ರಕ್ಕೆ ನನಗೆ ಸಂಸ್ಕೃತ ಬರುತ್ತದೆ ಅಂತ ಹೇಳಲು ಸಾಧ್ಯವಿಲ್ಲವೋ ಹಾಗೆ.
ಸಂಸ್ಕೃತದಲ್ಲಿ ಭಾರತೀಯತೆಯ ಸೊಗಡಿದೆ, ಇಂಗ್ಲೀಷಿನಲ್ಲಿ ಇಲ್ಲ ಎನ್ನುವುದಾದರೆ, ಪರ್ಷಿಯನ್ ಅರಬ್ಬೀ ಭಾಷೆಯಲ್ಲಿ ಕನ್ನಡದ ಸೊಗಡಿದೆಯೇ ಎಂದು ನಾನು ಕೇಳುತ್ತೇನೆ ? ನಾನು ಆಂಗ್ಲರು ಭಾರತವನ್ನು ಆಳಿದ ಮಾತ್ರಕ್ಕೆ ಇಂಗ್ಲೀಷನ್ನು ಖಂಡಿತವಾಗಿಯೂ ವಿರೋಧಿಸಲಾರೆ. ಹಾಗೆ ಮಾಡಿದರೆ ನಾನು ಪರ್ಷಿಯನ್, ಉರ್ದು, ಅರೇಬಿಕ್ ಭಾಷೆಗಳನ್ನೂ ಕೂಡ ದ್ವೇಷಿಸಬೇಕಾಗುತ್ತದೆ.
ನಾನು ಅಂದೇ ಹೇಳಿದ ಹಾಗೆ, ೧೮-೧೯ನೆಯ ಶತಮಾನದಲ್ಲಿ ಇಂಗ್ಲೀಷ್ ಕಲಿತವರು ನಮ್ಮಿಂದ ದೂರವಾಗಬಹುದು ಎಂಬ ಭಯ ನಮ್ಮ ಸಮಾಜವನ್ನು ಕಾಡಿರಬಹುದು. ಆದರೆ ಇಂದು ಹಾಗಿಲ್ಲ, ಯಾವುದೇ ವಿಷಯವಾಗಲೀ, ಇಂಗ್ಲೀಷಿನಲ್ಲಿ ಪ್ರಬುದ್ಧವಾದ ಪ್ರಬಂಧಗಳು ಮಂಡನೆಯಾಗುತ್ತವೆ.
ಅಂದ ಹಾಗೆ, ಹಿಂದೆ, ನನ್ನ ಸಂಸ್ಕೃತ ಪ್ರೇಮವನ್ನು ಬಿಂಬಿಸುವ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆದಿದ್ದೆ ಇಲ್ಲಿ. ಸಂಪದದಲ್ಲಿಯೇ ನನ್ನ ಹೆಸರಿನ ಅರ್ಥವನ್ನು ಕುರಿತು ಚರ್ಚೆಯಾಗಿತ್ತು. ಸಮಯವಾದಾಗ ನನ್ನ ಸಂಸ್ಕೃತ ಪ್ರೇಮದ ಬಗ್ಗೆ ತುಂಬಾ ಕುತೂಹಲಕರವಾದ ಅಂಶಗಳನ್ನು ಹಂಚಿಕೊಳ್ಳುವ ಆಸೆಯಿದೆ.
ಅನಿಸಿಕೆ: ನನ್ನ ಸಂಸ್ಕೃತದ ಒಲವು : ಒಡೆದು ಆಳುವ ನೀತಿಯತ್ತ...
ಸುನಿಲ್,
ಇದು ನೇರವಾಗಿ ಈ ಚರ್ಚೆಯ ವಿಷಯ ಅಲ್ಲವಾದರೂ, ನಮ್ಮ ನಡುವಣ ಸಂವಾದವನ್ನು ಇನ್ನೊಂದು ಕಡೆಗೆ ಎಳೆಯುವುದಕ್ಕಿಂತ ಇಲ್ಲಿಯೇ ಮುಂದುವರೆಸುವ ಉದ್ದೇಶದಿಂದ ಇಲ್ಲಿಯೇ ಬರೆಯುತ್ತೇನೆ.
"ಸಂಸ್ಕೃತದ್ದೆಲ್ಲವನ್ನೂ ಒಪ್ಪಲೇಬೇಕು" ಎನ್ನುವ ಮಾತನ್ನು ನಾನೂ ವಿರೋಧಿಸುತ್ತೇನೆ. ಹಾಗೆಯೇ ನನ್ನ ಇಂಗ್ಲಿಷ್ ಪರವಲ್ಲದ (ನಾನು ಇಂಗ್ಲಿಷ್ ವಿರೋಧಿಯೂ ಅಲ್ಲ, ಕನ್ನಡದ ವಿಚಾರಕ್ಕೆ ಬಂದಾಗ ಇಂಗ್ಲಿಷ್ ದಬ್ಬಳಿಕೆಯನ್ನು ಸಂಸ್ಕೃತದ ದಬ್ಬಾಳಿಕೆಗಿಂತ ಹೆಚ್ಚು ವಿರೋಧಿಸುತ್ತೀನಿ!) ಧೋರಣೆ "ಅವರು ನಮ್ಮನ್ನು ಆಳಿದರು" ಅನ್ನುವ ಕಾರಣಕ್ಕೆ ಅಲ್ಲವೇ ಅಲ್ಲ. ಅವರು ನಮ್ಮನ್ನು ಆಳಲು ಬೇಕಾದಷ್ಟು ಸಾಮಾಜಿಕ-ರಾಜಕೀಯ-ಆರ್ಥಿಕ ಕಾರಣಗಳಿದ್ದವು; ಅದರ ಬಗ್ಗೆ ಈಗ ಪ್ರಸ್ತಾಪ ಬೇಡ ಬಿಡಿ. ಒಟ್ಟಿನಲ್ಲಿ ನನ್ನ ವಿರೋಧ ಆ ದೃಷ್ಟಿಯಿಂದ ಅಲ್ಲವೇ ಅಲ್ಲ.
ಸಂಸ್ಕೃತದ ಪದ ಕಲಿತರೆ ಸಂಸ್ಕೃತ ಬಂದಹಾಗೆ ಆಗೋದಿಲ್ಲ ಅಂತ ನೀವು ಹೇಳಿದ್ದು ಸರಿ. ಆದರೆ ಇಂಗ್ಲಿಷ್ ಪದ ಕಲಿತ ಮಾತ್ರಕ್ಕೆ ಅದು ಬಂದಂತಾಗುವುದಿಲ್ಲ ಎನ್ನುವ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಯಾಕೆಂದರೆ ಭಾಷೆಯ ದೈನಂದಿನ ಬಳಕೆ ಕೂಡ ಅಷ್ಟೇ ಮುಖ್ಯ ನೋಡಿ. ಯಾರೇನೇ ಅಂದರೂ ಸಂಸ್ಕೃತ ಈಗ ಅಷ್ಟಾಗಿ ಬಳಕೆಯಲ್ಲಿಲ್ಲ (ದಿನನಿತ್ಯದ ಬಳಕೆ). ಆದರೆ ಇಂಗ್ಲಿಷ್ ದಿನನಿತ್ಯ ಎಲ್ಲೆಂದರಲ್ಲಿ ಬಳಕೆಯಲ್ಲಿದೆ. ಒಮ್ಮೆ "ಬಳಕೆದಾರ/ಸದಸ್ಯ" ಅನ್ನುವ ಪದಕ್ಕೆ "ಯೂಸರ್" ಅನ್ನುವುದನ್ನು ನಾವು ಸ್ವೀಕರಿಸಿದರೆ, ಅದು ಸರಪಳಿಯಂತೆ ಇನ್ನೂ ಎಲ್ಲೆಲ್ಲೋ ಎಳೆದುಕೊಂಡು ಹೋಗುವ ಸಂಭವ ಹೆಚ್ಚು. "ಚಲನ ಚಿತ್ರ" ಪದವನ್ನು ನಾವು ತಿರಸ್ಕರಿಸಿದೆವು. ಆದರೆ ಈಗ ಅದಕ್ಕೆ ಬದಲಾಗಿ ಇರೋದು "ಸಿನೆಮಾ" ಎಂಬ ಆಂಗ್ಲ ಪದ. ಪತ್ರಿಕೆಗಳಲ್ಲಿ ಚಲನ ಚಿತ್ರ ಅಂತೆಲ್ಲ ಬರೆದರೂ ಕೂಡ, ನಿಜ ಹೇಳಿ, ನಾವೇ ಮಾತಾಡುವಾಗ ನಮಗೆ ಬರೋದು "ಬಾ, ಸಿನೆಮಾಗೆ ಹೋಗೋಣ" ಅಂತಲೇ ಅಲ್ಲವೇ? ಇದೇ ರೀತಿ ಪ್ರತಿ ಪದಕ್ಕೂ ಆಗುತ್ತಾ ಹೋದರೆ ಕೊನೆಗೆ ಕನ್ನಡವೂ ಇರುವುದಿಲ್ಲ, ಮತ್ತು ಈಗಿರುವ "ಸಂಸ್ಕೃತಕನ್ನಡ"ವೂ ಇರುವುದಿಲ್ಲ. ಇಂಗ್ಲಿಷ್ ಎಲ್ಲದರಲ್ಲಿ ಒಂದು ಬಗೆಯ "ಸಮಮಟ್ಟ" ತಂದು ಬಿಡುತ್ತೆ. ಈ ಅಂಶವನ್ನೇ ಜಾನಕಿಯವರ ಅಂಕಣದಲ್ಲಿ ಬಹಳ ಚೆನ್ನಾಗಿ ಬರೆದಿದ್ದಾರೆ ಅಂತ ನಾನೊಮ್ಮೆ ಎಲ್ಲರ ಜತೆ ಹಂಚಿಕೊಂಡಿದ್ದೆ. (ನೋಡಿ: ಓದುವ ಸುಖ, ಬರೆಯುವ ಸುಖ...)
ಸಂಸ್ಕೃತದ ಹೇರಿಕೆಯನ್ನು ತಡೆಯೋಣ, ಆದರೆ ಅದಾಗಲಿಲ್ಲ ಅಂದ ಮಾತ್ರಕ್ಕೆ ಈಗಾಗಲೇ ಕನ್ನಡದಲ್ಲಿ ಬಳಕೆಯಲ್ಲಿರುವ ಸಂಸ್ಕೃತ ಮೂಲದ ಪದವನ್ನು ತೆಗೆದು ಇಂಗ್ಲಿಷನ್ನು ಅದರ ಜಾಗದಲ್ಲಿ ಕೂರಿಸುವುದು ಬೇಡ ಅಂತ ನನ್ನ ಅನಿಸಿಕೆ. ನೀವೇ ಹೇಳಿದಂತೆ ಉದಾ: "ಆಗಮನ"ಕ್ಕೆ ಬದಲಾಗಿ "ಬರುವಿಕೆ" ಎಂದು ಬಳಸಲು ಪ್ರಯತ್ನಪಡೋಣ. ಅದರ ಬಗ್ಗೆ ನಾನು ಯಾವ ಚಕಾರವನ್ನೂ ಎತ್ತುತ್ತಿಲ್ಲ. ಆದರೆ ಆಕಸ್ಮಾತ್ ಅದು ಸಾಧ್ಯವಾಗಲಿಲ್ಲ ಅಂದ ಮಾತ್ರಕ್ಕೆ, "ಆಗಮನ ಅನ್ನುವ ಪ್ರಯೋಗ ಕೂಡ ಬೇಡ, entry ಅಂತಲೇ ಇರಲಿ; ಕನ್ನಡದ ಪದ ಬಳಕೆಗೆ ಬರಲಿಲ್ಲ ಅಂದಮೇಲೆ ಯಾವ ಭಾಷೆಯದಾದರೇನು, ಸಂಸ್ಕೃತದ್ದು ಮಾತ್ರ ಆಗಬಾರದು ಅಷ್ಟೇ", ಅಂದರೆ ಅದು ಇಂಗ್ಲಿಷಿಗೆ ಹೆಬ್ಬಾಗಿಲು ತೆರೆದಂತೆ ಅಂತ ನನ್ನ ಭಾವನೆ. ಹಾಗಾದ ಪಕ್ಷದಲ್ಲಿ ನಾವು ಈಗಿರುವ ಕನ್ನಡಪದಗಳನ್ನೂ ಇನ್ನಷ್ಟು ಕಡಿಮೆ ಮಾಡುತ್ತಾ ಹೋಗುತ್ತೇವೆ. ನನ್ನ ಇಡಿಯ ಪ್ರತಿಕ್ರಿಯೆಯ ಸಾರಂಶ ಇದಾಗಿತ್ತು.
ಒಳ್ಳೆಯ ಪ್ರಬಂಧಗಳು ಇಂಗ್ಲಿಷಿನಲ್ಲೂ ಬರುತ್ತಿವೆ;ನಿಜ. ಆದರೆ ನಾಳೆ ಕನ್ನಡದ ವಿಷಯದ ಬಗ್ಗೆ ಪ್ರೌಢ ಪ್ರಬಂಧವೊಂದನ್ನು ಇಂಗ್ಲಿಷಿನಲ್ಲಿ ಓದಬೇಕಾದ ಸ್ಥಿತಿ ಬಂದರೇನು ಗತಿ ಅಂತ ನನ್ನ ಆತಂಕ. ಹೇಗಿರುತ್ತೆ ನೀವೇ ಯೋಚಿಸಿ. ಆಗ ನಾವೇ ಅದನ್ನು ವಿರೋಧಿಸುತ್ತೇವೆ ತಾನೇ? ಆ ಸ್ಥಿತಿ ತಂದುಕೊಳ್ಳುವುದು ಬೇಡ. ನಾವೇನೇ ಹೇಳಿದರೂ ಕೊನೆಗೂ ಭಾಷೆಯ ಗತಿಯನ್ನು ನಿರ್ಧರಿಸುವುದು ಅದರ ಬಳಕೆ ಅಂತ ನನಗನ್ನಿಸುತ್ತೆ. ಇಂಗ್ಲಿಷ್ ಪದಗಳನ್ನೂ ನಾವು ಸಾಕಷ್ಟು ಒಪ್ಪಿಕೊಂಡಿದ್ದೇವೆ. ಆ ಪರಿ ಬಳಸಿಯೇ ತಾನೆ "ಸಿನೆಮಾ, ಬಸ್ಸು, ಟ್ರೈನು, ಫೋನು..." ಇವೆಲ್ಲ ಕನ್ನಡದ್ದೇ ಪದಗಳಾಗಿರೋದು! ಏನಂತೀರಾ?
ಸಂಕಲನ ಸಂವಾದ ಚೌಕದಂತಹ ಅನುವಾದಗಳನ್ನು ಯಾರು ಮಾಡಿದ್ದರೋ ಗೊತ್ತಿಲ್ಲ. ಪ್ರತಿಯೊಬ್ಬರೂ ಅನುವಾದಿಸುವಾಗ ಅವರಿಗೆ ಸೂಕ್ತ ಅನ್ನಿಸುವಂತೆ ಅನುವಾದ ಮಾಡಿರುತ್ತಾರೆ. ಹಾಗಾಗಿ ಇಂತಹ ಕಠಿಣ ಪದಗಳು ಅಲ್ಲಲ್ಲಿ ಸಿಕ್ಕೇ ಸಿಗುತ್ತವೆ. ಇಂತಹ ಕಡೆ ಕನ್ನಡದ್ದೇ, ಆದರೆ ಸರಳ ಪದಗಳನ್ನು ಹುಡುಕೋಣ. ನಾಳೆ ಕನ್ನಡೀಕರಣಗೊಂಡ ಪದಗಳನ್ನು ನೋಡಿ ಇನ್ನೊಬ್ಬರು "ಕನ್ನಡದ ಪದಗಳೂ ಕಠಿಣವೇ" ಅನ್ನಲು ಆಗದಿರುವ ರೀತಿಯಲ್ಲಿ ಸರಳ, ತಿಳಿಗನ್ನಡ ಪದಗಳನ್ನು ಹುಡುಕೋಣ. ಆದರೆ Edit Dialog Box ಅಂತ ಒಪ್ಪಿಕೊಳ್ಳುವ ಅವಶ್ಯಕತೆಯಿಲ್ಲ ಅಲ್ಲವೇ? Editಗೆ "ತಿದ್ದುವ..." ಅನ್ನುವ ರೀತಿ ಶುರು ಮಾಡಿ ಯಾವುದಾದರೂ ಹೊಸ ಪದವನ್ನು ಹುಡುಕೋಣ. ನಮಗೆ ಆಗಲಿಲ್ಲವೇ, ಯಾರಾದರೂ ತಜ್ಞರನ್ನೇ ಕೇಳೋಣ. ನಮಗೆ ಹೊಸ, ಸರಳ ಕನ್ನಡ ಪದಗಳು ಬೇಕು, ಹುಡುಕಿಕೊಡಿ ಅಂತ. ಬೇಕಿದ್ದಲ್ಲಿ ಕನ್ನಡನಾಡಿನ ಬೇರೆ ಭಾಗದ ಕನ್ನಡ ಪದಗಳನ್ನು (ಧಾರವಾಡ ಕಡೆ, ಮಂಗಳೂರಿನ ಕಡೆ) ಬರಮಾಡಿಕೊಳ್ಳೋಣ. ಕನ್ನಡ ಅಂದರೆ ಕೇವಲ ಮೈಸೂರು ಕನ್ನಡ ಮಾತ್ರ ಅಲ್ಲ ಅಲ್ಲವೇ? ಈ ನಿಟ್ಟಿನಲ್ಲಿ ಯೋಚಿಸೋಣ ಅಂತ ನನ್ನ ಆಶಯ.
ಇನ್ನೂ ಟೈಪಿಸಲು ಕಷ್ಟವೆನಿಸುತ್ತಿದೆ. ಸಧ್ಯಕ್ಕೆ ಇಷ್ಟಕ್ಕೇ ಮುಗಿಸುವೆ. ಏನನ್ನಿಸಿತು ಹೇಳಿ.
- ಶ್ಯಾಮ್ ಕಿಶೋರ್
ಕನ್ನಡ ಕನ್ನಡ ಹಾ! ಸವಿಗನ್ನಡ
ಈ ಮಾತು ನಿಜಕ್ಕೂ ಎಲ್ಲರೂ ಒಪ್ಪಬೇಕಾದ್ದು. ಈ ಮಾತು ತುಂಬಾ ಇಷ್ಟವಾಯಿತು.
ನಾನು ಈ ವಿಷಯವಾಗಿಯೇ ಬಾಷಾ ಐಕ್ಯತೆ ಮೂಡಿಲ್ಲವೇನೋ ಎಂದದ್ದು. ಇರಲಿ ಬಿಡಿ ಈಗಲಾದರೂ ನಾವುಗಳು ಒಟ್ಟಾಗಿ ಮುನ್ನಡೆದು ಕನ್ನಡದ ಆಶಯಕ್ಕಾಗಿ ದುಡಿಯೋಣ. ಹೆಚ್ಚು ಹೆಚ್ಚು ಚರ್ಚಿಸಿದಷ್ಟೂ ಒಳ್ಳೆಯ ಪದಗಳು ಸಿಗುತ್ತಾ ಹೋಗುತ್ತವೆ.
ದನಿಗೂಡು: ಕನ್ನಡ ಕನ್ನಡ ಹಾ! ಸವಿಗನ್ನಡ
ನಿಜ ಸುನಿಲ್,
ನಮ್ಮೆಲ್ಲರ ಅನಿಸಿಕೆಗಳು ಅಲ್ಲಲ್ಲಿ ಬೇರೆಯಾದರೂ, ಮನಸ್ಸಿನಲ್ಲಿರುವ ಗುರಿ ಮಾತ್ರ ಒಂದೇ. ಒಟ್ಟಿಗೇ ಸಾಗೋಣ; ಭಾರವೂ ಹಗುರವಾಗಬಹುದು ಮತ್ತು ಸವೆಸುವ ದಾರಿಯೂ ಹಿತವೆನಿಸಬಹುದು.
- ಶ್ಯಾಮ್ ಕಿಶೋರ್
Re: ಇನ್ನೊಂದು, ದನಿಗೂಡು: ಕನ್ನಡ ಕನ್ನಡ ಹಾ! ಸವಿಗನ್ನಡ
ಶ್ಯಾಮ್, ಸುನಿಲ್ .....ನಿಮ್ಮ ವಿಚಾರಗಳು ಚೆನ್ನಾಗಿವೆ.
ನಾನು ಹೇಳುವುದು ಇಷ್ಟು ( ನಿಮ್ಮಿಬ್ಬರ ಮಾತಿನ ಸಾರಾಂಶ ಎಂದು ಅಂದುಕೊಳ್ಳುತ್ಟೇನೆ)
" ಆದಷ್ಟು ಕನ್ನಡವನ್ನು ಬಳಸೋಣ, ಬೇಕೇ ಬೇಕಾದಾಗ ಸಂಸ್ಕೃತ /ಇಂಗ್ಲಿಷ್ ನ್ನು 'ಉಪಯೋಗಿ'ಸೋಣ "
- ಜೈ ಕರ್ನಾಟಕ