ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
ಸ್ನೇಹಿತರೆ,
ಕೆಲವು ನಿರ್ವಹಿಸಲೇಬೇಕಿದ್ದ ಕೌಟುಂಬಿಕ ಜವಾಬ್ದಾರಿ ಮತ್ತು ಅನಾರೋಗ್ಯಗಳಿಂದಾಗಿ ಮೂರು ವಾರದಿಂದ ಅಂಕಣ ಬರೆಯಲಿಲ್ಲ. ಆದರೆ ಇದೇ ಸಮಯದಲ್ಲಿ ಮನಸು ಮಾತ್ರ ತೀವ್ರವಾದ ಕ್ರಿಯಾಶೀಲತೆಗೆ ತುಡಿಯುತ್ತಿತ್ತು. ಹಿಂದೆಂದೂ ಕಾಣದ ರೀತಿಯಲ್ಲಿ ಭ್ರಷ್ಟ ಆಮಿಷಗಳನ್ನು ಒಡ್ಡಲಿರುವ ಬರಲಿರುವ ಕರ್ನಾಟಕದ ಚುನಾವಣೆ ಮತ್ತು ಈ ಬಾರಿ ಬಹುಸಂಖ್ಯೆಯಲ್ಲಿ ಆಯ್ಕೆಯಾಗಲಿರುವ ಜನಪ್ರತಿನಿಧಿಗಳ ಅರ್ಹತೆ ಮತ್ತು ಯೋಗ್ಯತೆಯ ಬಗ್ಗೆ ಆಲೋಚಿಸುತ್ತಿದ್ದೆ; ಚರ್ಚಿಸುತ್ತಿದ್ದೆ. ನಮ್ಮ ಕಾಲದ ಸವಾಲುಗಳ ಮತ್ತು ಸಮಸ್ಯೆಗಳ ಅರಿವೆಯೇ ಇಲ್ಲದ, ಸಾರ್ವಜನಿಕ ಜೀವನಕ್ಕೆ ಬೇಕಾದ ಕನಿಷ್ಠ ಅರ್ಹತೆಗಳೂ ಇಲ್ಲದ, ಕನಿಷ್ಠ ಶಿಕ್ಷಣವೂ ಇಲ್ಲದ, ಕೇವಲ ದುಡ್ಡು-ಜಾತಿ-ಮತವೆ ಗರಿಷ್ಠ ಯೋಗ್ಯತೆಯಾಗಿ ಹೊಂದಿರುವ ಜನರು ಈ ಬಾರಿ ಬಹುಸಂಖ್ಯೆಯಲ್ಲಿ ನಮ್ಮ ಪ್ರತಿನಿಧಿಗಳಾಗಲಿದ್ದಾರೆ. ಬೆಂಗಳೂರಿನಲ್ಲಂತೂ ಚುನಾವಣಾ ವೆಚ್ಚದ ಮಿತಿಯಾದ ಹದಿನೈದು ಲಕ್ಷದ ಮಿತಿಯ ನೂರಕ್ಕೂ ಹೆಚ್ಚಿನ ಪಟ್ಟು ಹಣವನ್ನು ಗಣಿಗಾರಿಕೆಯ ಮತ್ತು ರಿಯಲ್ ಎಸ್ಟೇಟಿನ ಕಪ್ಪುಹಣ ಹೊಂದಿರುವವರು ಹರಿಸಲಿದ್ದಾರೆ. ಇದು ಸೃಷ್ಟಿಸಲಿರುವ ಭವಿಷ್ಯ ಹೀನಾಯವಾದದ್ದಾಗಿರುತ್ತದೆ. ನ್ಯಾಯ-ನೀತಿ-ಮೌಲ್ಯ-ಅರ್ಹತೆಗಳ ಮೇಲೆ ನಡೆಯದ ಈ ಚುನಾವಣೆ ನಮಗೆ ಮಾತ್ರವಲ್ಲ ನಮ್ಮ ಮಕ್ಕಳಿಗೂ ನಿಕೃಷ್ಟರನ್ನು ನಾಯಕರನ್ನಾಗಿ ದಯಪಾಲಿಸಲಿದೆ.
ಇದಕ್ಕೆ ನಮ್ಮ ಉತ್ತರವೇನು?
ಈಗ ತಾನೆ ನನ್ನ ಉದ್ದೇಶ ಮತ್ತು ಯೋಜನೆಯನ್ನು ಐಟಿ ಕ್ಷೇತ್ರದಲ್ಲಿನ ನನ್ನ ಸಹಬಾಂಧವರಿಗೆ ತಿಳಿಯಪಡಿಸುವ ಮತ್ತು ಅವರ ಬೆಂಬಲ ಕೋರುವ ಇಂಗ್ಲಿಷ್ ಲೇಖನವನ್ನು www.ravikrishnareddy.com ವೆಬ್ಸೈಟಿನಲ್ಲಿ ಏರಿಸಿದ್ದೇನೆ. ಬೆಂಗಳೂರಿನಲ್ಲಿ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ, ಭಾರತದ ಬೇರೆಲ್ಲ ಜನಸಮುದಾಯಕ್ಕಿಂತ ಹೆಚ್ಚಿನ ಶಿಕ್ಷಣ, ಆದಾಯ ಮತ್ತು ಆಧುನಿಕತೆಯಲ್ಲಿ ಬದುಕುತ್ತಿರುವ ಈ ವಿದ್ಯಾವಂತ ಸಮುದಾಯಕ್ಕೆ ಬರೆದ ಪತ್ರ ಇದು. ಈ ಸಮಯದಲ್ಲಿ. ನಿಮ್ಮೆಲ್ಲರ ತನು-ಮನ-ಧನದ ಸಹಾಯವನ್ನು ಕೋರುತ್ತಿದ್ದೇನೆ. ಇದು ನಮ್ಮೆಲ್ಲರ ಹೋರಾಟ.
(ಇದರ ಕನ್ನಡ ರೂಪ ಇಷ್ಟರಲ್ಲಿಯೆ ಪ್ರಕಟವಾಗಲಿದೆ.)
ಗೆಳೆಯರೆ, ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರೊಡನೆ ಮತ್ತು ಸಮುದಾಯವರೊಡನೆ ಹಂಚಿಕೊಳ್ಳಿ. ಚರ್ಚಿಸಿ. ಕಾಲದ ವಿಷಮತೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಅದರ ಸವಾಲನ್ನು ಸ್ವೀಕರಿಸುವ ಅವಕಾಶ ಮತ್ತು ಸಂದರ್ಭ ಎಲ್ಲರಿಗೂ ಬರುವುದಿಲ್ಲ. ಸಿನಿಕರಾಗದೆ, ಇನ್ನೂ ಕೆಡಲಿ ಎಂಬಂತಹ ಮಾನವದ್ವೇಷಿ ಭಾವನೆ ಇಲ್ಲದೆ, ನಮ್ಮ ಪಾಲಿಗೆ ಬಂದಿರುವ ಕರ್ತವ್ಯವನ್ನು ಪ್ರತಿಸಾರಿಯೂ ನಿರ್ವಹಿಸುವ ನೈತಿಕತೆಯನ್ನು ತೋರೋಣ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಂತೆ ಪ್ರಭುಗಳು ಎನ್ನುವುದನ್ನು ಮರೆಯದಿರೋಣ.
ಮುಂದಿನ ದಿನಗಳಲ್ಲಿ ಸ್ಪಷ್ಟ ಯೋಜನೆಗಳನ್ನು, ಯಾಕೆ ಮತ್ತು ಹೇಗೆ ಎನ್ನುವುದನ್ನು ವಿಷದವಾಗಿ ತಮ್ಮೊಡನೆ ಹಂಚಿಕೊಳ್ಳಲಿದ್ದೇನೆ. ದಯವಿಟ್ಟು ಈ ಸಂವಾದಕ್ಕೆ ತೆರೆದುಕೊಳ್ಳಿ.
ನಮಸ್ಕಾರ,
ರವಿ...

- ravikreddy ರವರ ಬ್ಲಾಗ್
- Login or register to post comments
- 1029 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
ರವಿಯವರೆ,
ಕರ್ನಾಟಕದ ಭ್ರಷ್ಟ ರಾಜಕಾರಣಿಗಳು ಕಾಯ್ಕೊಂಡಿದಾರೆ, ಚುನಾಯಿತರಾದ ಮೇಲೆ ಹಣ ನುಂಗೋಕೆ. ಪಾಪ ಅವರು ತಾನೆ ಹಾಕಿದ ಬಂಡವಾಳ ಎಲ್ಲಿಂದ ಹೊರತೆಗೀತಾರೆ, ಇರೋದು ಒಂದೇ ಬಿಸಿನೆಸ್, ಜನರನ್ನು ದೋಚೋದು.
ನೀವು ಮಾಡೋದಕ್ಕೆ ಎಲ್ಲ ಕನ್ನಡಿಗರ ಸಹಕಾರ ಇದ್ದೇ ಇರುತ್ತೆ.
-ವರುಣ ಭಟ್
ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
ರವಿಕೆರೆಡ್ಡಿ, ನಿಮ್ಮ ವೆಬ್ಸೈಟ್ ನೋಡಿದ ಮೇಲೆ ನನಗೆ ಎಷ್ಟು ಬೇಸರ ಆಯ್ತು ಅಂದ್ರೆ, ತಪ್ಪು ತಿಳೀಬೇಡಿ, ನನಗೆ ಮೈಯೆಲ್ಲ ಉರಿತಾ ಇದೆ (ನಿಜ, ಬೇಕಿದ್ದರೆ ಮತ್ತೊಮ್ಮೆ ಓದಿಕೊಳ್ಳಿ). ಅಲ್ಲಿ ರೀ, ನೀವು ಎಲೆಕ್ಷನ್ನಿಗೆ ನಿಲ್ತಾ ಇದ್ದೀರಾ. ನಿಲ್ಲಿ ಯಾರು ಬೇಡ ಅಂದಿದ್ದಾರೆ, ಆದರೆ ಕನ್ನಡಕ್ಕೆ ಕನಿಷ್ಠ ಸೌಜನ್ಯ ಬೇಡವೇ.
ಎಷ್ಟು ಸುಲಭವಾಗಿ ಹೇಳಿಬಿಟ್ರೀ, ಈ ಮಾತನ್ನ. ನಿಮ್ಮ ಲೇಖನಗಳನ್ನು ಇಷ್ಟು ದಿನ ಓದಿ ಪ್ರೋತ್ಸಾಹಿಸಿದವರು ಇಂಗ್ಲೀಷಿನವರೋ, ಕನ್ನಡದವರೋ ? ಅಲ್ಲ ಕರ್ನಾಟಕದ ರಾಜಧಾನಿ ಬೆಂಗಳೂರಿನ ಅದರಲ್ಲೂ ಜಯನಗರವೋ, ಬಿಟಿಎಂ ನಿಂದಲೋ ನಿಲ್ತೀನಿ ಅಂದ್ರಲ್ಲ, ನಿಮ್ಮ ಪತ್ರವನ್ನು ಕನ್ನಡದಲ್ಲಿ ಮೊದಲು ಮಾಡಬೇಕಿದ್ದು, ನಿಮ್ಮ ನೈತಿಕೆ ಹೊಣೆಯಾಗಿತ್ತು. ಕರ್ನಾಟಕದಿಂದ ಎಲೆಕ್ಷನ್ನಿಗೆ ನಿಲ್ತಾ ಇಂಗ್ಲೀಷಿನಲ್ಲಿ ಪ್ರಚಾರ ಮಾಡುತ್ತಿದ್ದೀರಲ್ಲ, ಇದು ಯಾವ ರೀತಿಯ ಮೌಲ್ಯಾಗ್ರಹ ನನಗೆ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ.
ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
ರವಿಯವರೆ,
ನಿಮ್ಮ ಎದೆಗಾರಿಕೆ ಮತ್ತು ಅದರ ಹಿಂದನ ಒತ್ತಡವನ್ನು ಮೆಚ್ಚಬೇಕಾದ್ದೆ. ಬಹುಶಃ ನಿಮ್ಮ ಮೊದಲ ಸವಾಲು ಇಲ್ಲೇ ಶುರುವಾಗಿದೆ.
ಚುನಾವಣೆ, ರಾಜಕೀಯ, ಜನ ಸ್ಪಂದನ ಇವೆಲ್ಲಾ ತುಂಬಾ ಜಟಿಲವಾದ ವಿಷಯಗಳು. ತುಂಬಾ ಸುಲಭದಲ್ಲಿ ಕಪ್ಪು/ಬಿಳುಪಿನಂತೆ ನಿರ್ಧಾರವಾಗುವಂತವಲ್ಲ.
ಇದನ್ನು ಒಂದು ಪಯಣ ಎನ್ನುವಂತೆ ಭಾವಿಸಿಕೊಂಡರೆ ಸೋಲು, ಗೆಲುವಿಗಿಂತ ಅದು ಕೊಡುವ ಅನುಭವ ಸೂಕ್ಷ್ಮಗಳು ಮಿಗಿಲಾಗುತ್ತವೆ. ಅವುಗಳಿಂದ ಹೆಚ್ಚಿನ ಕೆಲಸ ಮಾಡುವುದು ಸುಲಭವಾಗುತ್ತದೆ ಅನಿಸುತ್ತದೆ.
ನಿಮಗೆ ಗೆಲುವಾಗಲಿ ಎಂದು ಹಾರೈಸುತ್ತೇನೆ.
ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
ರವಿ,
ಇಷ್ತು ದಿನದಿಂದ ನಿಮ್ಮನ್ನ್ಯ್ ನೋಡಿದ ನನಗೆ ನಿಮ್ಮ ಹೆಜ್ಜೆ ಆಶ್ಚರ್ಯವೇನೂ ತರಲಿಲ್ಲ! ಒಳ್ಳೆಯದಾಗಲಿ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
ರವಿ ರೆಡ್ಡಿಯವರೇ, ಶುಭಾಶಯಗಳು. ವಿದ್ಯಾವಂತರಿಗೆ ರಾಜಕೀಯ ಕ್ಷೇತ್ರ ಆಗಿಬರಲ್ಲ ಅನ್ನುವ ನಂಬಿಕೆ ನಿಮ್ಮಿಂದ ಸುಳ್ಳಾಗಲಿ.