ಜೀವ ಗಂಧ
ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...
ಕಚೇರಿ ಎಂಬ ನರಕ-೧
ನನ್ನ ಬರಹಕ್ಕೆ ಪ್ರತಿಕ್ರಿಯೆ ಹಾಕುತ್ತಾ ಶ್ರೀದೇವಿ ಕಳಸದ ಅವರು ಒಂದು ಸವಾಲು ಒಡ್ಡಿದ್ದಾರೆ. ಅದು ಸವಾಲೆಂದರೇ ಸರಿ. ಏಕೆಂದರೆ, ಅವರ ಪ್ರಕಾರ ನಾನು, ಜಿಟಿಜಿಟಿ ಮಳೆಯಲ್ಲಿ ಬೆಚ್ಚಗೇ ಕೂತು, ಭಾವನಾತ್ಮಕ ಪ್ರಪಂಚದಲ್ಲಿ ವಿಹರಿಸುತ್ತಿದ್ದೇನಂತೆ. ಲೋಕದ ಕಷ್ಟಗಳ ಬಗ್ಗೆ ನನಗೆ ಗೊತ್ತಿಲ್ಲವಂತೆ. ’ನಾವಾದರೆ, ಕಚೇರಿಯಲ್ಲಿ ಕೆಲಸ ಮಾಡಿ, ಹೈರಾಣಾಗಿ ಮನೆಗೆ ಬರುತ್ತೇವೆ. ಹೀಗಾಗಿ, ಬರವಣಿಗೆಯಲ್ಲಿ ಪೂರ್ತಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ’ ಎಂಬುದು ಅವರ ದೂರು.
ಈ ದೂರಿಗೆ ಅಥವಾ ಅಸಮಾಧಾನಕ್ಕೆ ನಾನೊಬ್ಬಳೇ ಉತ್ತರ ಬರೆಯುವುದು ಸೂಕ್ತವಲ್ಲ ಅಂದುಕೊಂಡಿದ್ದೇನೆ. ಸಂಪದದ ನಿಯಮಿತ ಬರಹಗಾರ್ತಿಯರಾದ ಕಲ್ಪನಾ, ರೂಪಾ, ಜಯಲಕ್ಷ್ಮೀ ಕೂಡಾ ಈ ಪ್ರಶ್ನೆಯನ್ನು ತಮಗೇ ಸಂಬಂಧಿಸಿದ್ದು ಎಂಬಂತೆ ತೆಗೆದುಕೊಂಡು ಉತ್ತರ ನೀಡಬೇಕೆಂದು ನನ್ನ ವಿನಂತಿ.
ಕಚೇರಿಯಲ್ಲಿ ನಾನು ಕೆಲಸ ಮಾಡಿಲ್ಲ. ಅಲ್ಲಿಯ ಸಮಸ್ಯೆಗಳ ಬಗ್ಗೆ ನನಗೆ ನೇರ ಅನುಭವವಿಲ್ಲ. ಆದರೆ, ಕಚೇರಿಯ ವಾತಾವರಣ ಗೊತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ, ಕಾಲೇಜಿನ ದಿನಗಳಲ್ಲಿ ಆಗಷ್ಟು, ಈಗಷ್ಟು ಕಚೇರಿಯ ರಗಳೆಯನ್ನು ಅನುಭವಿಸಿದ್ದಾಗಿದೆ. ಅಡ್ಮಿಶನ್ ಸಮಯದಲ್ಲಂತೂ ಗುಮಾಸ್ತರು ಜೀವ ಹಿಂಡುತ್ತಿದ್ದರು. ನಮ್ಮವೇ ಮಾರ್ಕ್ಸ್ಕಾರ್ಡ್ಗಳ ಮೇಲೆ ಮುಖ ಗೊತ್ತಿಲ್ಲದ ಗೆಜೆಟೆಡ್ ಆಫೀಸರ್ನ ಅಟೆಸ್ಟೇಶನ್ ಮಾಡಿಸಿ ತರಬೇಕಿತ್ತು. ಸರಕಾರಿ ಕಚೇರಿಗಳ ಕ್ರೂರತೆ ಮತ್ತು ಕೆಟ್ಟ ವೃತ್ತಿಪರತೆ ಹೇಗಿರುತ್ತದೆ ಎಂಬುದು ನನ್ನ ಅನುಭವಕ್ಕೆ ಬಂದಿದ್ದು ಆಗ.
’ಸರ್’ ಎಂದು ನಾವು ಆಫೀಸರ್ನ ಕೋಣೆಯ ಹೊರನಿಂತು, ಅಂಜುತ್ತ ಅಂಜುತ್ತ ಕೂಗುತ್ತಿದ್ದೆವು. ಆತ ಮುಖ ಎತ್ತಿ ನೋಡುತ್ತಿರಲಿಲ್ಲ. ಮತ್ತೆ ಸರ್ ಎಂದು ಕೂಗು. ಏನ್ರೀ? ಎಂಬ ದರ್ಪದ ಉತ್ತರ. ನಿಮ್ಮನ್ಯಾರು ಒಳಗೆ ಬಿಟ್ಟಿದ್ದು ಎಂದು ಕೆಂಡವಾಗುತ್ತಿದ್ದ. ಹೊರಗೆ ನಿಂತಿದ್ದ ಜವಾನನಿಗೆ ಒಂದು ಮುಗುಳ್ನಗೆ ಬೀರಿ, ಅವನ ಆಕ್ಷೇಪಣೆಯನ್ನು ಹುಟ್ಟುವುದಕ್ಕೆ ಮುಂಚೆಯೇ ಇಲ್ಲವಾಗಿಸಿ ನಾವು ಒಳಗೆ ಬಂದಿರುವುದು ಪಾಪ, ಆ ಅಧಿಕಾರಿಗೆ ಹೇಗೆ ಗೊತ್ತಾಗಬೇಕು?
ಸರ್, ಅಟೆಸ್ಟ್ ಮಾಡಿಸಬೇಕಿತ್ತು ಎಂದು ಅಂಜುತ್ತ ವಿನಂತಿಸುತ್ತಿದ್ದೆವು. ’ನನಗೆ ಸರ್ಕಾರ ಸಂಬಳ ಕೊಟ್ಟು ಇಟ್ಟಿರುವುದು ನಿಮ್ಮ ಸರ್ಟಿಫಿಕೇಟ್ಗಳಿಗೆ ಅಟೆಸ್ಟ್ ಮಾಡಿಸಲು ಅಲ್ಲ’ ಎಂದು ಕ್ರೂರವಾಗಿ ಉತ್ತರಿಸಿ ಆತ ನಮ್ಮನ್ನು ಹೊರಗೆ ಅಟ್ಟುತ್ತಿದ್ದ. ಪ್ರತಿಯೊಂದು ಕಚೇರಿಯಲ್ಲಿಯೂ ಇದೇ ಅನುಭವ.
ಆಗ ತುಂಬ ಕೋಪ ಬರುತ್ತಿತ್ತು. ನಮ್ಮವೇ ಸರ್ಟಿಫಿಕೇಟ್ಗಳಿಗೆ ಅಟೆಸ್ಟ್ ಮಾಡಿಸಲು ಇವನ್ಯಾರು ದೊಣ್ಣೆನಾಯಕ? ಎಂದು ಗೊಣಗುತ್ತಿದ್ದೆವು. ಅರ್ಜಿಯಲ್ಲಿ, ’ಮೇಲೆ ಹೇಳಿದ ಎಲ್ಲ ಸಂಗತಿಗಳೂ ಸತ್ಯ ಎಂದು ಈ ಮೂಲಕ ಪ್ರಮಾಣೀಕರಿಸುತ್ತಿದ್ದೇನೆ’ ಎಂದು ಸಹಿ ಮಾಡಿದ ಮೇಲೆ, ನಾವು ಲಗತ್ತಿಸುವ ಎಲ್ಲ ಸರ್ಟಿಫಿಕೇಟ್ಗಳ ಸತ್ಯಾಸತ್ಯತೆ ನಮ್ಮ ಜವಾಬ್ದಾರಿ ತಾನೆ? ಹಾಗಿರುವಾಗ, ಇವನ್ಯಾರು ನಮ್ಮ ಸರ್ಟಿಫಿಕೇಟ್ಗಳನ್ನು ದೃಢೀಕರಿಸಲು?
ಆದರೆ, ಸರ್ಕಾರಕ್ಕೆ ವಾದ ಅರ್ಥವಾಗುವುದಿಲ್ಲ. ವಿವೇಕ ಮೊದಲೇ ಇರುವುದಿಲ್ಲ. ಹೀಗಾಗಿ ನಮ್ಮ ಪ್ರಶ್ನೆಗಳು ಬರೀ ಅಸಹಾಯಕ ಗೊಣಗಾಟವಾಗಿ ಬಿಡುತ್ತಿತ್ತು.
ಕೊನೆಗೆ, ಕಚೇರಿಯಿಂದ ಕಚೇರಿಗೆ ಅಡ್ಡಾಡಿ, ಯಾರಾದರೂ ಸಹೃದಯಿಯೋ ಅಥವಾ ’ಹೆಂಗರುಳಿನ’ ಅಧಿಕಾರಿಯ ಹತ್ತಿರ ಅಟೆಸ್ಟ್ ಶ್ರಾದ್ಧ ಮುಗಿಸಿ ಅಡ್ಮಿಶನ್ಗೆ ಹೋಗುತ್ತಿದ್ದೆವು. ಅಲ್ಲಿ ಗುಮಾಸ್ತರ ಸುದೀರ್ಘ ಪರಿಶೀಲನೆ. ಒಂದೇ ಒಂದು ಅಕ್ಷರವನ್ನು ಓವರ್ರೈಟ್ ಮಾಡಿದ್ದರೆ, ಅಥವಾ ಕಾಟು ಹಾಕಿದ್ದರೆ ಮುಗೀತು. ’ಈ ರೀತಿ ಅಪ್ಲಿಕೇಶನ್ ಕೊಟ್ಟರೆ ನಡೆಯೋಲ್ಲ. ವೈಟನರ್ ಹಾಕಿ ಸರಿಯಾಗಿ ಬರೆದುಕೊಂಡು ಬನ್ನಿ’ ಎಂದು ಅಟ್ಟುತ್ತಿದ್ದ. ಆಗೆಲ್ಲ ಅಳುವೇ ಬಂದುಬಿಡುತ್ತಿತ್ತು. ನಮ್ಮ ಓದಿಗೂ, ಈ ಅರ್ಜಿ ತುಂಬುವ ಕರ್ಮಕ್ಕೂ ಅದೆಂಥ ಸಂಬಂಧವಿದ್ದೀತು ದೇವರೇ’ ಎಂಬ ಅಸಹಾಯಕತೆ ಆವರಿಸುತ್ತಿತ್ತು. ಆದರೇನು? ಅದು ಮಾಡಲೇಬೇಕಾದ ಕರ್ಮ.
ಹೀಗಾಗಿ, ಕಾಲೇಜಿನ ದಿನಗಳಲ್ಲೇ ಸರ್ಕಾರಿ ಕಚೇರಿಗಳ ಬಗ್ಗೆ ಅನಾದರ, ಅಸಡ್ಡೆ ಹಾಗೂ ಕೆಟ್ಟ ಅಭಿಪ್ರಾಯ ಬೆಳೆದುಬಿಟ್ಟಿತು. ಮುಂದೆ ಡ್ರೈವಿಂಗ್ ಲೈಸೆನ್ಸ್ಗಾಗಿ ಹೋದಾಗ ಅಂಥದೇ ಅನುಭವ. ನನ್ನ ಗೊಣಗಾಟ ನೋಡಲಾರದೇ ಅಪ್ಪ, ಯಾರೋ ಏಜೆಂಟ್ಗೆ ಹೇಳಿ ಕೆಲಸ ಹಗುರ ಮಾಡಿಕೊಟ್ಟ.
ಇವತ್ತಿಗೂ ಸರ್ಕಾರಿ ಕಚೇರಿಯಲ್ಲಿ ಏನಾದರೂ ಕೆಲಸ ಇದೆ ಎಂದರೆ ತಳಮಳ ಶುರುವಾಗುತ್ತದೆ. ಅಲ್ಲಿಯ ಬೇಜವಾಬ್ದಾರಿತನ, ಸಣ್ಣತನ, ಕೆಲಸ ಕದಿಯುವ, ಕೆಡಿಸುವ ಗುಣ ನೆನಪಾಗಿ ಮನಸ್ಸು ಮಂಕಾಗುತ್ತದೆ. ಚೆನ್ನಾಗಿ ಮಾರ್ಕ್ಸ್ ಪಡೆದರೂ ಸರ್ಕಾರಿ ಕೆಲಸಕ್ಕೆ ನಾನು ಅರ್ಜಿ ಕೂಡ ಹಾಕದೇ ಇರಲು ಈ ಅಭಿಪ್ರಾಯವೇ ಕಾರಣವಾಯಿತು.
ಆದರೆ, ಈ ರೀತಿಯ ವಾತಾವರಣ ಅಥವಾ ಮನಃಸ್ಥಿತಿ ಕೇವಲ ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಇರುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ, ಡಿಗ್ರಿ ಮುಗಿಯುತ್ತಲೇ ನನ್ನ ಹಲವಾರು ಗೆಳತಿಯರು ದೊಡ್ಡ ದೊಡ್ಡ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದರು. ಫೋನ್ನಲ್ಲಿ, ಈ ಮೇಲ್ನಲ್ಲಿ ಅಥವಾ ರಜೆಯಲ್ಲಿ ಬಂದಾಗ ಅವರು ಹೇಳುತ್ತಿದ್ದ ಅನುಭವ ಕೇಳಿದಾಗ, ಮೊದಮೊದಲು ನಂಬಲಿಕ್ಕೇ ಆಗಲಿಲ್ಲ.
ಆದರೆ, ಇಂತಹ ವಿಷಯಗಳಲ್ಲಿ ಗೆಳತಿಯರು ಸುಳ್ಳು ಹೇಳುವುದಿಲ್ಲ ಎಂಬುದು ನನಗೆ ಗೊತ್ತಿತ್ತು. ಹೀಗಾಗಿ, ಪರೀಕ್ಷೆ ಮಾಡೋಣ ಎಂದು ಹುಬ್ಬಳ್ಳಿಯಲ್ಲೇ ಇದ್ದ ಖಾಸಗಿ ಕಂಪನಿಯೊಂದಕ್ಕೆ ಒಂದು ದಿನದ ಮಟ್ಟಿಗೆ ಹೋಗಿ ಬಂದೆ. ಅಲ್ಲಿ ಕಂಡ ನರಕ ನನ್ನ ಅಭಿಪ್ರಾಯವನ್ನು ಬದಲಾಯಿಸಿಬಿಟ್ಟಿತು.
ಆ ಬಗ್ಗೆ ಮುಂದಿನ ಕಂತಿನಲ್ಲಿ ಬರೆಯುವೆ.
- ಪಲ್ಲವಿ ಎಸ್.

- pallavi.dharwad ರವರ ಬ್ಲಾಗ್
- Login or register to post comments
- 931 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


ಪ್ರತಿಕ್ರಿಯೆಗಳು
ಉ: ಕಚೇರಿ ಎಂಬ ನರಕ-೧
ನೀವು ಅವರ ಸ್ಥಿತೀಲಿದ್ರೆ ನೀವು ಮಾಡೋದೂ ಅದನ್ನೇ. ನಿಮ್ ಥರಾನೇ ಎಲ್ರೂ ಕೆಲ್ಸಕ್ ಹೋಗ್ದೇ ಮನೇಲೇ ಕೂತಿದ್ರೆ ದೇವ್ರೇ ಗತಿ (ಹಾಗಂತ ನೀವು ಹೋಗಿ ಅಂತ ಹೇಳ್ತಿಲ್ಲ. ಅದು ನಿಮ್ಮ ಇಷ್ಟ). ಬಾಸ್ ಕೈಲಿ ಬೈಸ್ಕೋಬೇಕಾಗತ್ತೆ ನಾನು ಕೆಲಸಕ್ಕೆ ಹೋಗಲ್ಲ ಅನ್ನೋರನ್ನ ನಾನು ನೋಡ್ತಿರೋದು ಇದೇ ಮೊದಲು. ಐಟಿ ಕಂಪನಿಗಳಲ್ಲಿ ನೀವು ಹೇಳೋ ಅಷ್ಟು ಕೆಟ್ಟ ಪರಿಸ್ಥಿತಿ ನಾನಂತೂ ನೋಡಿಲ್ಲ. ಆದರೂ ಒಂದು ನೆನಪಿಟ್ಕೊಳಿ.
You must be the change you want to see in the world - ಮಹಾತ್ಮಾ ಗಾಂಧಿ.
ಕೀರ್ತಿ ಕಿರಣ್ ಎಂ
ಉ: ಕಚೇರಿ ಎಂಬ ನರಕ-೧
ಕಾರಣ ಅದೊಂದೇ ಅಲ್ಲ ಕೀರ್ತಿ. ಏಕೋ ಕಚೇರಿಗೆ ಹೋಗಿ ಕೆಲಸ ಮಾಡೋಕೆ ಮನಸ್ಸಾಗುತ್ತಿಲ್ಲ. ಅಪ್ಪ ಗಳಿಸಿದ್ದು ಇದೆ. ಅವರಿಗೂ ನನ್ನನ್ನು ಕೆಲಸಕ್ಕೆ ಕಳಿಸಲು ಇಷ್ಟ ಇಲ್ಲ. ಪ್ರಯತ್ನಿಸಿದರೆ ಯಾವುದಾದರೂ ಕೆಲಸ ಸಿಗಬಹುದು. ಆದರೆ, ಅತ್ತ ಮನಸ್ಸು ಹೋಗ್ತಿಲ್ಲ. ಹಾಗಂತ ಟೈಮ್ ವೇಸ್ಟ್ ಮಾಡ್ತಿಲ್ಲ. ಓದ್ಕೊಂಡು, ಬರ್ಕೊಂಡು ಇದ್ದೇನೆ. ಅಪ್ಪನ ಚಿಕ್ಕ ಬಿಸಿನೆಸ್ಗೆ ಒಂದಿಷ್ಟು ಸಹಾಯ ಮಾಡ್ತೀನಿ, ಅಷ್ಟೇ.
ಒಂದಿಷ್ಟು ದಿನವಾದರೂ ನೆಮ್ಮದಿಯಿಂದ ಇರೋಣ ಅಂತ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಛೆ... ನಿಮ್ಮನ್ನು ನೀವು ಸಮರ್ಥಿಸಿಕೊಳ್ಳಬೇಕಿಲ್ಲ. ನಿಮಗೆ ಏನನ್ನಿಸತ್ತೋ ಅದನ್ನು ಮಾಡ್ತಿದೀರ. ಅದರಲ್ಲಿ ತಪ್ಪೇನಿಲ್ಲ. ನನ್ನ ಮಾತಿಂದ ಬೇಜಾರಾಗಿದ್ರೆ ಕ್ಷಮಿಸಿ.
ಕೀರ್ತಿ ಕಿರಣ್ ಎಂ
ಉ: ಕಚೇರಿ ಎಂಬ ನರಕ-೧
ಖಂಡಿತ ಬೇಜಾರಿಲ್ಲ ಕೀರ್ತಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
'ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು’ ಎಂದು ಯಾವುದೋ ರಾಜ್ಕುಮಾರ್ ಚಿತ್ರದ ಹಾಡಿದೆ. ಅದು ಯಾರುಬರೆದದ್ದೋ ತಿಳಿಯದು. ಆದರೆ ಅದು ಸರಿ ಎಂದು ನನ್ನ ಅನಿಸಿಕೆ. ನಿಜ ಹೇಳಬೇಕೆಂದರೆ ಯಾವುದೇ ಮನುಶ್ಯನಿಗೂ ಕಷ್ಟಪಡಲು ಇಷ್ಟವಿರುವುದಿಲ್ಲ. ಇಲ್ಲದಿದ್ದರೆ ಯಾಕೆ ಜನರು ತಾವು ಮತ್ತು ತಮ್ಮ ಮುಂದಿನ ಸಂತತಿಗಳು ’ಕೂತು’ ತಿನ್ನುವಷ್ಟು ಹಣ ಸಂಪಾದಿಸುವಷ್ಟು ಹಾತೊರೆಯುತ್ತಿದ್ದರು. ಶಾಶ್ವತ ಸುಖ ಇಹದಲ್ಲಿ ಸಾಧ್ಯವೇ ಇಲ್ಲ. ಈ ದೇಹ ಶಾಶ್ವತ ಸುಖಕ್ಕೆ ಸ್ಪಂದಿಸುವುದೂ ಇಲ್ಲ. ಒಂದು ವಾರ ಸುಮ್ಮನೆ ಮನೆಯಲ್ಲಿ ಕೂತರೆ ಕೈಕಾಲು ಸೋಲು ಬರುತ್ತದೆ, ಬುದ್ಧಿ ಮಸುಕಾಗುತ್ತದೆ, ಮನಸ್ಸು ಮಂಕಾಗುತ್ತದೆ, ಯಾರೊಂದಿಗೂ ಮಾತು ಬೇಡವೆನಿಸುತ್ತದೆ. ಸುಮ್ಮನೆ ಬಳಸದೇ ಇಟ್ಟ ಅಕ್ಕಿಯಲ್ಲಿ ಹುಳಬಂದಂತೆ.
ಉ: ಕಚೇರಿ ಎಂಬ ನರಕ-೧
ಈ ಹಾಡು "ಭಕ್ತ ಕುಂಬಾರ" ಚಿತ್ರದ್ದು...
"ಹರಿನಾಮವೇ ಚೆಂದಾ ಅದ ನಂಬಿಕೋ ಕಂದಾ"
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ ಅಥವಾ ಚಿ|| ಉದಯಶಂಕರ್...
ಸಂಗೀತ: ಜಿ. ಕೆ. ವೆಂಕಟೇಶ್...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಕಚೇರಿ ಎಂಬ ನರಕ-೧
ನಿಮ್ಮ ಅಭಿಪ್ರಾಯಕ್ಕೆ ನನ್ನ ವಿರೋಧ ಇದೆ ಮಾಧವ. ಮುಂದಿನ ತಲೆಮಾರುಗಳಿಗೆ ಆಗುವಷ್ಟು ಹಣ ಗಳಿಸುವುದು ಖಂಡಿತ ತಪ್ಪಲ್ಲ. ಆದರೆ, ಗಳಿಸಿದ ಹಣ ಬಳಸದೇ ಇದ್ದರೆ ದುಡಿಮೆಗೇ ಅವಮಾನ ಮಾಡಿದಂತೆ. ಅಡುಗೆ ಮಾಡಿದರೆ ಮುಗಿಯಿತೆ? ಅದನ್ನು ಉಣ್ಣಬೇಡವೆ? ನನ್ನ ಸುತ್ತಮುತ್ತ ಅಡುಗೆ ಮಾಡುವುದರಲ್ಲೇ ನಿರತರಾದ ಜನರನ್ನು ನೋಡುತ್ತಿದ್ದೇನೆ. ಮಾಡಿಟ್ಟ ಅಡುಗೆ ಆಸ್ವಾದಿಸುವ ಗುಣವಿಲ್ಲ ಅವರಿಗೆ. ಅದರ ಬದಲು ಇಷ್ಟಪಟ್ಟು ಅಡುಗೆ ಮಾಡುವುದು, ಅದನ್ನು ಮನಃಪೂರ್ವಕ ಉಣ್ಣುವುದು ಉತ್ತಮ.
ನಾನು ಆ ಕೆಲಸ ಮಾಡಲು ಯತ್ನಿಸುತ್ತಿದ್ದೇನೆ. ನನಗೆ ಎಷ್ಟು ಬೇಕೋ ಅಷ್ಟನ್ನು ದುಡಿಯುತ್ತೇನೆ. ಅದನ್ನು ಖುಷಿಯಿಂದ ಬಳಸುತ್ತೇನೆ. ನನ್ನ ಅಕ್ಕಿಗೆ ಹುಳು ಬೀಳುವುದಿಲ್ಲ ಬಿಡಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಸೂಪರ್ ಪಲ್ಲವಿ
ಉ: ಕಚೇರಿ ಎಂಬ ನರಕ-೧
ಮತ್ತೊಮ್ಮೆ ಥ್ಯಾಂಕ್ಸ್ ವಿಕಾಸ್.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಪಲ್ಲವಿ
ನಿಮ್ಮ ಮನಃಸ್ಥಿತಿ ಗಮನಿಸಿದರೆ ನೀವು ಸರಕಾರಿ ಅಥವಾ ಖಾಸಗಿ ಯಾವುದೇ ನೌಕರಿಗೆ ತಕ್ಕವರಲ್ಲ . ನಿಮಗೆ ಸರಿಕಂಡ ಬದುಕನ್ನು ಆರಿಸಿಕೊಳ್ಳಬಲ್ಲಿರಿ . ನಿಮ್ಮ ಬಗ್ಗೆ ಹೆಮ್ಮೆ ಅನಿಸುತ್ತದೆ . ಇದು ಕೆಲವರಲ್ಲಿ ಮಾತ್ರ ಕಂಡು ಬರುವ ಅಪರೂಪದ ನಡವಳಿಕೆ .
ಉ: ಕಚೇರಿ ಎಂಬ ನರಕ-೧
ಅಪರೂಪದ ನಡವಳಿಕೆ ಏನೂ ಅಲ್ಲ ಸರ್. ಅದು ನನ್ನ ಅನಿವಾರ್ಯತೆ. ಸೂಕ್ಷ್ಮವಾದಷ್ಟೂ ಕಷ್ಟ. ಆದರೆ, ನನ್ನ ಮನಃಸ್ಥಿತಿ ಇದ್ದಕ್ಕಿದ್ದಂತೆ ಬದಲಾಯಿಸಿಕೊಳ್ಳುವುದು ಇನ್ನಷ್ಟು ಕಷ್ಟಕರ. ಅದಕ್ಕೇ ಹೀಗೆ. ಆದರೆ, ಇದೇ ಹೆಚ್ಚು ತೃಪ್ತಿ ಕೊಡುತ್ತಿದೆ.
ದುಡ್ಡನ್ನು ಷೇರು ಮಾರುಕಟ್ಟೆಯಲ್ಲೂ ಗಳಿಸಬಹುದು ಎಂಬ ನಂಬಿಕೆ ಇದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಪಲ್ಲವಿ
ಇದು ಸರಿಯಾದ ದಾರಿ ಅಂತ ನನಗನಿಸುತ್ತೆ , ಇದರ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಕೆಲಸವೊಂದನೇ ಮನುಶ್ಯನಿಗೆ ಮಾನದಂಡ? ಕೆಲವೊಮ್ಮೆ ಸನ್ನಿವೇಶಗಳಿಗೆ ನಾವು ಸೂತ್ರದ ಗೊಂಬೆಗಳಾಗುತ್ತೇವೆ.
ನಿಮ್ಮ ಈ ಅನಿಸಿಕೆ ಒಂದು ತರಹ ನನ್ನ ಜೀವನಕ್ಕು ಸಾಮ್ಯತೆ ಇದೆ. ನಾನು ಇದ್ದ ಕೆಲಸವನ್ನು ಬಿಟ್ಟು ಬೆಂಗಳೂರಿಗೆ ಹೋದೆ ಅಲ್ಲಿ ಒಂದು ಕೋರ್ಸ್ಗೆ ಸೇರಿಕೊಂಡೆ , ಇನ್ನೇನು ನನ್ನ ರೆಸ್ಯೂಮೆ ಸಿದ್ದ ಮಾಡುವ ಸಮಯವದು. ಊರಿಗೆ ಫೋನ್ ಮಾಡಿದ್ರೆ ಅಲ್ಲಿ ಅಮ್ಮನ ಕಾಲು ಮುರಿದಿದೆ , ಅಪ್ಪ ಡಾಕ್ಟರ್ನ ಬೇಜವಬ್ದಾರಿತನದಿಂದ ಸಾವು - ಬದುಕಿನ ನಡುವೆ ಜೀವನ ಸಾಗಿಸುತ್ತಿದ್ದರು. (ಅಲ್ಲಿಯವರಗೆ ನನಗೆ ಯಾವ ವಿಷಯವನ್ನು ತಿಳಿಸಿರಲ್ಲಿಲ್ಲ , ಅಕ್ಕನಿಗೆ ಆಗ ತಾನೆ ಕೆಲಸ ಸಿಕ್ಕಿತ್ತು ಅವಳು ಯಾವುದೊ ತರಬೇತಿಯಲ್ಲಿದ್ದಳು) , ತಕ್ಷಣವೇ ನಾನು ಊರಿಗೆ ಹೋದೆ ಅಲ್ಲಿ ಅಪ್ಪ ಚೇತರಿಕೊಳ್ಳಲು ೬-೮ ತಿಂಗಳು ಬೇಕಾಯ್ತು. ಅಷ್ಟರಲ್ಲೆ ನನ್ನ ಮದುವೆ ನಿಶ್ಚಯವಾಯ್ತು , ಆ ಜೀವನಕ್ಕೆ ಹೊಂದಿಕೊಳ್ಳುವಷ್ಟರಲ್ಲಿ ನನ್ನ ಮಾವನವರಿಗೆ ಹೃದಯಾಘಾತ ಸಂಭವಿಸಿ ಅವರು ೬ ತಿಂಗಳು ತುಂಬ ನರಳಿ ಕೊನೆಯುಸಿರೆಳೆದರು. ಮತ್ತೆ ಕೆಲಸಕ್ಕಾಗಿ ಹುಡುಕಾಟ ಶುರುವಾಯ್ತು , ಒಂದು ಕಂಪನಿಯಲ್ಲಿ ಎಲ್ಲಾ ಸುತ್ತುಗಳನ್ನು ಪಾಸ್ ಮಾಡಿ ಪಲಿತಾಂಶ ಬರುವಷ್ಟರಲ್ಲಿ ನನ್ನ ಹುಡುಗನಿಗೆ ವಿದೇಶಕ್ಕೆ ಕಳಿಸುವ ಅವಕಾಶ ಒದಗಿ ಬಂತು , ಅಲ್ಲಿ ನನ್ನ ಆಸೆಗೆ ಮತ್ತೆ ತಣ್ಣೀರೆರೆಚಿತು. ಇಲ್ಲಿ ನನಗೆ ಕೆಲಸ ಮಾಡಲು ಅವಕಾಶವಿಲ್ಲ. ನಾವು ಇದ್ದುದ್ದರಲ್ಲಿ ತೃಪ್ತಿ ಪಟ್ಟುಕೊಂಡರೆ ಎಲ್ಲವು ಸರಿಯಾಗಿರುತ್ತೆ. ನನಗೆ ಈಗ ಎಲ್ಲು ಪಶ್ಚಾತ್ತಾಪ ಕಾಡುತ್ತಿಲ್ಲ , ನೆಮ್ಮದಿಯಿಂದ ಇದ್ದೇನೆ. ಯಾರಾದರು ಮೊದಲು ಕೇಳಿದಾಗ ಬೇಜಾರಾಗುತ್ತಿದ್ದೆ , ಅಳು ಬರುತ್ತಿತ್ತು , ಆದ್ರೆ ಈಗ ನನ್ನನ್ನು ನಾನು ಸಮರ್ಥಿಸಿಕೊಳ್ಳುವುದನ್ನು ಕಲಿತಿದ್ದೇನೆ. ನಾನು ಕೆಲಸಕ್ಕೆ ಹೋಗಿದ್ದರೆ ನನ್ನ ಅಪ್ಪ , ಅಮ್ಮನ್ನನ್ನು ನೋಡಿಕೊಳ್ಳಲು ಆಗುತ್ತಿರಲ್ಲಿಲ್ಲ.
ಹೇಗಿದ್ದರು ಜನರು ಆಡಿಕೊಳ್ಳುವುದನ್ನು ಬಿಡುವುದಿಲ್ಲ ಅನ್ನೊ ತತ್ವಕ್ಕೆ ಬಂದಿದ್ದೀನಿ.ತಮ್ಮ ಮೂಗಿನ ನೇರಕ್ಕೆ ತಾವು ಮಾತನಾಡುತ್ತಾರೆ.ಅದಕ್ಕೆ ಕಿವಿಕೊಡಬಾರದು , ನಮ್ಮ ಪ್ರೊಡಕ್ಟಿವಿಟಿ , ಕ್ರಿಯೇಟಿವಿಟಿಯನ್ನು ಹೆಚ್ಚಿಸಿಕೊಳ್ಲಬೇಕು.ಹೊರಗೆ ಹೋಗಿ ಕೆಲಸ ಮಾಡಿದರಷ್ಟೆಯಲ್ಲ , ಮನೆಯಲ್ಲಿ ಮಾಡುವ ಕೆಲಸಕ್ಕು ಅಷ್ಟೆ ಪ್ರಾಮುಖ್ಯತೆ ಇರುತ್ತೆ. ನೀವು ಕೆಲಸಕ್ಕೆ ಹೋಗಿದಿದ್ರೆ ನಿಮ್ಮ ತಂದಗೆ ನೆರವಾಗಲು ನಿಮ್ಮಿಂದ ಸಾಧ್ಯವಾಗುತ್ತಿತ್ತೆ? ನಾವು ಯಾವ ಕೆಲಸವನ್ನು ಮಾಡುತ್ತೀವೋ ಅದನ್ನೇ ಪ್ರಮಾಣಿಕತೆಯಿಂದ , ಶ್ರಧ್ಧೆಯಿಂದ ಇಷ್ಟಪಟ್ಟು ಮಾಡಬೇಕು.
ಉ: ಕಚೇರಿ ಎಂಬ ನರಕ-೧
ನನ್ನ ಮುಂದೆ ಒಂದು ಭವಿಷ್ಯದ ಚಿತ್ರಣ ಇದೆ ರಾಜೇಶ್ವರಿ. ನಾನೊಬ್ಬಳೇ ಮಗಳು ನಮ್ಮ ತಂದೆತಾಯಿಗೆ. ಹುಟ್ಟಿದಾಗಿನಿಂದ ಜೊತೆಯಲ್ಲೇ ಇದ್ದೇನೆ. ಬಹುತೇಕ ಒಂದೇ ಊರಲ್ಲಿ ಬೆಳೆದಿದ್ದೇನೆ. ಇದರಿಂದ ನನ್ನ ಅನುಭವ ಸಮೃದ್ಧವಾಗಿದೆ. ಕೆಲ ಮಟ್ಟಿಗೆ ಸೀಮಿತವೂ ಆಗಿದೆ. ಸಮೃದ್ಧಿಯ ಮೂಲಕ ಸೀಮಿತತೆ ನಿವಾರಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ. ಅದಲ್ಲ ನನ್ನನ್ನು ಯೋಚನೆಗೆ ಹಚ್ಚಿರುವುದು. ವಯಸ್ಸಾದ ಮೇಲೆ ಅಪ್ಪ-ಅವ್ವ ಹೇಗೆ ಇರುತ್ತಾರೆ? ಸಾಧ್ಯವಾದಷ್ಟೂ ಜೊತೆಯಲ್ಲಿರುವುದು. ಮಾನಸಿಕ ಸಾಮ್ಯತೆ ಸಾಧಿಸುವುದು. ಭಿನ್ನಾಭಿಪ್ರಾಯಗಳನ್ನು ಆರೋಗ್ಯಕರ ಅಂತರದಲ್ಲಿ ಇಡುವುದು. ಅವರ ಬಿಸಿನೆಸ್ಗೆ ಸಹಾಯ ಮಾಡುವುದು. ಮುಂದೆಂದೋ ಒಂದಿನ ನಾನು ದೈಹಿಕವಾಗಿ ದೂರ ಹೋಗುವಂತಾದರೂ, ಮಾನಸಿಕವಾಗಿ ಮಗಳು ಹತ್ತಿರದಲ್ಲೇ ಇದ್ದಾಳೆ ಎಂಬ ತೃಪ್ತಿಯನ್ನು ಅವರಲ್ಲಿ ಉಳಿಸುವುದು.
ಹೀಗಾಗಿ, ನಾನು ಸಂಬಳಕ್ಕಾಗಿ ದುಡಿಯಲು ಸಿದ್ಧಳಿಲ್ಲ. ಎಲ್ಲರಿಗೂ ಅಪ್ಪನ ಬಿಸಿನೆಸ್ ಇರಲಿಕ್ಕಿಲ್ಲ. ಅವರ ಅನಿವಾರ್ಯತೆ ನನಗೆ ಅರ್ಥವಾಗುತ್ತದೆ. ನನಗೆ ಆಯ್ಕೆಯ ಅವಕಾಶ ಇದೆ. ಹೀಗಾಗಿ ಅದನ್ನೇ ಆಯ್ದುಕೊಂಡಿದ್ದೇನೆ. ನಿಮ್ಮ ವಿವರ ಓದಿದರೆ, ನೀವು ಸರಿಯಾದ ಮಾನಸಿಕ ಸ್ಥಿರತೆ ಕಾಯ್ದುಕೊಂಡಿದ್ದೀರಿ ಎಂಬುದು ಸ್ಪಷ್ಟವಾಗುತ್ತದೆ. ಒಳ್ಳೆಯದು. ಅದನ್ನೇ ಉಳಿಸಿಕೊಳ್ಳಿ, ಬೆಳೆಸಿಕೊಳ್ಳಿ.
ಎಲ್ಲರ ಅಭಿಪ್ರಾಯಗಳನ್ನೂ ಮನ್ನಿಸುತ್ತೇನೆ. ಆದರೆ, ನನ್ನ ಅಭಿಪ್ರಾಯ ತಪ್ಪೆಂದು ಅನಿಸುವವರೆಗೆ ಅದಕ್ಕೇ ಅಂಟಿಕೊಂಡಿರುತ್ತೇನೆ. ಹೀಗಾಗಿ, ಯಾರನ್ನೂ ನಾನು ಹೀಗಳೆಯಲಾರೆ. ಮತ್ತು ಹೀಗಳಿಕೆಗೆ ಒಳಗಾಗಲಾರೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಹೌದು ಎಲ್ಲರಿಗು ನಿಮ್ಮಂತೆ ಅವಕಾಶ ಇರುವುದಿಲ್ಲ , ಕೆಲವರಿಗೆ ಸಂಪಾದನೆ ಅತ್ಯವಶ್ಯಕತೆ ಇರುತ್ತೆ (ನನಗು ಮುಂಚೆ ಹಾಗೆಯೇ ಇತ್ತು ಅದಕ್ಕೆ ಯಾವ ಕೆಲಸ ಸಿಕ್ಕಿತೋ ಅದಕ್ಕೆ ಹೋದೆ ಅಲ್ಲಿನ ವಾತಾವರಣದಲ್ಲಿ ಕೆಲಸ ಮುಂದುವರೆಸಲು ನನ್ನ ಮನಸ್ಸು ಮುಂದಾಗಲ್ಲಿಲ್ಲ). ಈಗ ನನಗೆ ಒಂದು ಕೆಲಸದ ಅವಶ್ಯಕತೆಯಿದೆ ಆದ್ರೆ ಸಂಪಾದನೆಯಲ್ಲ.
ಹೀಗಳೆಯುವುದು ಸರಿ ಅಂತ ನಾನು ಹೇಳುವುದಿಲ್ಲ , ನನಗಾಗಿರುವ ಅನುಭವಕ್ಕೆ ಇಂತಹ ತೀರ್ಮಾನಕ್ಕೆ ಬಂದಿದ್ದೇನೆ.(ಹೇಗಿದ್ದರು ಜನರು ಆಡಿಕೊಳ್ಳುವುದನ್ನು ಬಿಡುವುದಿಲ್ಲ ಅನ್ನೊ ತತ್ವಕ್ಕೆ ಬಂದಿದ್ದೀನಿ.ತಮ್ಮ ಮೂಗಿನ ನೇರಕ್ಕೆ ತಾವು ಮಾತನಾಡುತ್ತಾರೆ.ಅದಕ್ಕೆ ಕಿವಿಕೊಡಬಾರದು). ಭವಿಶ್ಯ ರೂಪಿಸಿಕೊಳ್ಳುವುದಕ್ಕೆ ಆತ್ಮ ವಿಶ್ವಾಸ ಬೇಕು ಅದೊಂದಿರುವುದರಿಂದ ದಾರಿ ಸುಗಮವಾಗುತ್ತೆ.
ನಾನು ಬೇರೆಯವರ ಅಭಿಪ್ರಾಯಕ್ಕೆ ಬೆಲೆಯನ್ನು ಕೊಡುತ್ತೇನೆ , ಮೊದಮೊದಲು ಯಾರಾದರು ನನ್ನ ಕೆಲಸದ ಬಗ್ಗೆ ಕೇಳಿದ್ರೆ ಅವರಿಗೆ ಸಮಾಧಾನದಿಂದ ಉತ್ತರಿಸುತ್ತಿದ್ದೆ , ನಂತರ ಮೌನವನ್ನು ಆರಿಸಿಕೊಳ್ಳುತ್ತಿದ್ದೆ , ಈಗ ತೀರ ಅನಿವಾರ್ಯ ಅಂತ ಅನಿಸಿದ್ರೆ ಮಾತ್ರ ಮಾತನಾಡಲು ಮುಂದಾಗುತ್ತೇನೆ ಇಲ್ಲ ಅಂದ್ರೆ ಇಗ್ನೋರ್ ಮಾಡಿ ಸುಮ್ಮನಾಗುತ್ತೇನೆ. ಈಗ ಹಿಂಜರಿಯಿಲ್ಲದೆ ನನಗಿನ್ನು ಕೆಲಸ ಸಿಕ್ಕಿಲ್ಲ ಅಂತ ಹೇಳುತ್ತೇನೆ. ಯಾರಾದರು ಬೇರೆಯವರನ್ನು ಪ್ರಶ್ನಿಸುವಾಗ ಮೊದಲು ಅವರ ಪೂರ್ವ ಪರಗಳನ್ನು ಯೋಚಿಸಿ ಮಾತನಾಡಬೇಕು ಇಲ್ಲವಾದ್ರೆ ಅಪಾರ್ಥಕ್ಕೆ ಎಡೆ ಮಾಡಕೊಟ್ಟಂತಾಗುತ್ತೆ.
ಉ: ಕಚೇರಿ ಎಂಬ ನರಕ-೧
ಅದು ನಿಜ. ಆದರೆ, ಹಿಂದಿನ ಅನುಭವದ ಆಧಾರದ ಮೇಲೆ ತಕ್ಕ ಉತ್ತರ ಕೊಡಬಹುದು. ಅಲ್ವಾ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಅರ್ಹರಿಗೆ ಸದಾ ಉತ್ತರ ಕೊಡಲು ಸಿದ್ದ
ಉ: ಕಚೇರಿ ಎಂಬ ನರಕ-೧
ಪಲ್ಲವಿ,
ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡುವುದಕ್ಕೂ ಮತ್ತು ಕೆಲಸ ಮಾಡಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ.
ನಾವು ಎಲ್ಲೇ ಕೆಲಸ ಮಾಡುತ್ತಿದ್ದರೂ ಪ್ರಾಮಾಣಿಕರಾಗಿ ಇದ್ದರೆ ಆಯಿತು. ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ ನಿಜ, ಆದರೆ ’ಅದುವೇ ಜೀವನ’ .
ಉ: ಕಚೇರಿ ಎಂಬ ನರಕ-೧
ನಿಮಗೆ ನೂರಕ್ಕೆ ನೂರು ಮಾರ್ಕ್ಸ್ ವಿಕಾಸ್. ರೂಪಾ ಅವರಿಗೆ ನಾನು ಬರೆದ ಪ್ರತಿಕ್ರಿಯೆ ಓದಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಪಲ್ಲವಿ
ಕಛೇರಿ ಎನ್ನುವುದು ಸಮಾಜವನ್ನು ಪ್ರತಿನಿಧಿಸುತ್ತದೆ
ಸಮಾಜದಲ್ಲಿ ಹೇಗೆ ಎಲ್ಲಾ ಬಗೆಯ ಜನ ಇರ್ರುತಾರೋ ಹಾಗೆಯೇ ಒಂದು ಕಂಪೆನಿಯಲ್ಲಿ ಈ ಎಲ್ಲಾ ಬಗೆಯ ಜನರನ್ನೂ ಕೂಡ ಕಾಣಬಹುದು
ಇಲ್ಲಿ ಪ್ರಾಮಾಣಿಕತೆಯೇ ಮೂರ್ತಿವೆತ್ತ ಜನರೂ , ಹಾಗೆಂದರೆ ಏನೂ ಎಂದು ಗೊತ್ತಿರದವರೂ , ಸಿಡುಕಿನ ಮೋರೆಯವರೂ ಸದಾ ಹಸನ್ಮುಖಿಗಳೂ , ಕರ್ತವ್ಯವನ್ನು ನಿರ್ವಹಿಸುವವರು ,
ನಿರ್ವಹಿಸದವರೂ ಇರುತ್ತಾರೆ
ಹಾಗೆ ಬಾಸ್ ಎನ್ನಿಸಿಕೊಳ್ಳುವವರಲ್ಲೂ ಈ ವೈವಿಧ್ಯತೆ ಇರುತ್ತದೆ
ಯಾವುದೇ ನೌಕರನೂ/ನೌಕರಳೂ ತಾನು ಮಾಡುತ್ತಿರುವ ಕೆಲಸ ತೃಪ್ತಿದಾಯಕ . ತಾನು ಇಲ್ಲೇ ಮುಂದುವರಿಯುತ್ತೇನೆ ಎಂದು ಹೇಳುವುದಿಲ್ಲ.
ನಾನೂ ನಾಲಕ್ಕು ವರ್ಷ ವಿವಿಧ ಕಡೆಗಳಲ್ಲಿ ಕೆಲಸ ಮಾಡಿದ್ದೇನೆ ನನಗೆ ಎಲ್ಲೂ ತೃಪ್ತಿ ದೊರಕಲಿಲ್ಲ. ನಿಮ್ಮ ಹಾಗೆಯೆ ಇನ್ನೊಬ್ಬ್ಬರ ಕೈ ಕೆಳಗೆ ನೌಕರಿ ಮಾಡಿ ಮಾಡಿ ಬೇಸರವಾಯ್ತು
ಕೊನೆಗೆ ನನಗೆ ಅನ್ನಿಸಿದ ದಾರಿಯಲ್ಲಿ ನಾನು ನಡೆದೆ . ಈಗ ನಾನು ಬಾಸ್ ಆದರೂ ಆ ತೃಪ್ತಿ ನನಗೆ ಇನ್ನೂ ದೊರಕಿಲ್ಲ
ಕೆಲವೊಮ್ಮೆ ಅನ್ನಿಸುವುದುಂಟು ನಾನು ಮೊದಲಿದ್ದ ಹಾಗೆ ಎಲ್ಲಿಯಾದರೂ ಕೆಲಸ ಮಾಡಿಕೊಂಡು ಇದ್ದರೆ ಚೆನ್ನಾಗಿತ್ತು ಎಂದು. ಮನಸ್ಸಿಗೆ ಸಾಕು ಅನ್ನುವುದೇ ಇಲ್ಲ
ನಿಮಗೆ ಇನ್ನೂ ವಯಸ್ಸು ಚಿಕ್ಕದು
ನಿಮ್ಮ ತಂದೆಯವರ ಬಿಸಿನೆಸ್ ನಲ್ಲಿ ಸಹಾಯ ಮಾಡಿದರೂ ಅದು ಕೆಲ್ಸವೇ. ಅದನ್ನೇ ಮುಂದುವರಿಸಿಕೊಂಡು ಹೋಗಿ . ಅಥವಾ ಅನುಭವ ಬೇಕೆಂದರೆ ಕಷ್ಟವೋ ಸುಖವೋ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡಿ
ಒಂದು ನೆನಪಿನಲ್ಲಿಡಿ
"ಪ್ರತಿಯೊಂದು ಕಪ್ಪು ಮೋಡದಲ್ಲೂ ಒಂದು ಬೆಳ್ಳಿಗೆರೆ ಇರುತ್ತದೆಯಂತೆ"
http://thereda-mana.blogspot.com/
ರೂಪ
ಉ: ಕಚೇರಿ ಎಂಬ ನರಕ-೧
ಥ್ಯಾಂಕ್ಸ್ ರೂಪಾ.
ಹೊರಗೆ ಹೋಗಿ ಕೆಲಸ ಮಾಡುವುದೇ ನಿಜವಾದ ಕೆಲಸ ಎನ್ನುವುದಾದರೆ, ಗೃಹಿಣಿಯರಿಗೆ ಯಾವ ಪಾತ್ರವೂ ಇಲ್ಲವೆಂದು ಅವಮಾನ ಮಾಡಿದಂತೆ. ನಿಶ್ಚಿತ ಸಂಬಳ ಬರುವ ವೃತ್ತಿಯೇ ಕೆಲಸ ಎನ್ನುವುದಾದರೆ, ಅಂತಹ ಸಂಬಳ ಏನೇನೂ ಇಲ್ಲದ ನನ್ನ ಅವ್ವ ನಿರುಪಯುಕ್ತ ವ್ಯಕ್ತಿ ಅಂದಂತಾಗುತ್ತದೆ. ನನ್ನ ಅವ್ವನಂಥ ಕೋಟ್ಯಂತರ ತಾಯಂದಿರ ಕೊಡುಗೆಗೆ ಅವಮಾನ ಮಾಡಿದಂತೆ. ಅದನ್ನು ನಾನು ಒಪ್ಪಲಾರೆ.
ನನ್ನ ಸಮಯವನ್ನು, ನನಗೆ ತಿಳಿದಂತೆ ಬಳಸಿಕೊಳ್ಳುವುದು ಎಲ್ಲಕ್ಕಿಂತ ದೊಡ್ಡ ಕಷ್ಟ. ನೀವು ಹೇಳಿದಂತೆ, ನನಗೆ ನಾನೇ ಬಾಸ್. ಹಾಗೆ ಆಗುವುದು ನಿಜಕ್ಕೂ ಕಷ್ಟದ ಸಂಗತಿ. ಅದು ನಿತ್ಯ ನನ್ನ ಅನುಭವಕ್ಕೆ ಬರುತ್ತಿದೆ. ಆದರೆ, ಏಕೋ ನಂಗದೇ ಇಷ್ಟ.
’ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ’ ಅಂದ ಬಸವಣ್ಣನವರ ಮನಸ್ಸಿನಲ್ಲಿ ಬಹುಶಃ ಇದೇ ವಿಷಯವಿತ್ತು ಅಂತ ಕಾಣ್ತದೆ. ಮಾಡುವ ಕೆಲಸದಲ್ಲಿ ಮನಸ್ಸಿದ್ದರೆ ಕೆಲಸ ಖಂಡಿತ ತೃಪ್ತಿ ಕೊಡುತ್ತದೆ. ಎಷ್ಟೋ ಸಾರಿ ಹೊತ್ತಲ್ಲದ ಹೊತ್ತಿನಲ್ಲಿ ಎದ್ದು ಬರೆದಿದ್ದೇನೆ. ಓದಿದ್ದೇನೆ. ಅದು ಕೊಡುವ ತೃಪ್ತಿಯೇ ಬೇರೆ. ಮಧ್ಯರಾತ್ರಿಯ ಬುದ್ಧ ಹುಟ್ಟಿದ್ದು ಹಾಗೆ. ಜಗತ್ತಿನ ಇನ್ನೊಂದು ಮುಖ ಪರಿಚಯಿಸುವುದು, ಅದನ್ನು ಆಸ್ವಾದಿಸುವುದು ಉತ್ತಮ ಕೆಲಸ ಅಂತ ಅಂದುಕೊಂಡಿದ್ದೇನೆ.
ಸಂಬಳ ತರುವ ಕೆಲಸ ಬಿಟ್ಟು ನಿಮಗೆ ನೀವೇ ಬಾಸ್ ಆಗಿದ್ದರ ಬಗ್ಗೆ ನನಗೆ ಹೆಮ್ಮೆ ಅನಿಸುತ್ತದೆ. ಕೆಲವೊಮ್ಮೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಆಗದಿರಬಹುದು. ಅದಕ್ಕೇಕೆ ಬೇಸರ? ಒಮ್ಮೆ ನಿಮ್ಮ ಅಮ್ಮನನ್ನು ನೆನಪಿಸಿಕೊಳ್ಳಿ. ಎಲ್ಲ ಸರಿಹೋಗುತ್ತದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಪಲ್ಲವಿ,
ನಾವು ಏನೇ ಕೆಲಸ ಮಾಡಿದರೂ/ಮಾಡುತ್ತಿದ್ದರೂ, ಎಲ್ಲೇ ಕೆಲಸ ಮಾಡಿದರೂ/ಮಾಡುತ್ತಿದ್ದರೂ, ನಮ್ಮ ಕೆಲಸದಲ್ಲಿ ಪ್ರಾಮಾಣಿಕವಾಗಿ ಇರಬೇಕು.
>>ಅಪ್ಪನ ಚಿಕ್ಕ ಬಿಸಿನೆಸ್ಗೆ ಒಂದಿಷ್ಟು ಸಹಾಯ ಮಾಡ್ತೀನಿ, ಅಷ್ಟೇ.
ನೀವೇ ಹೇಳಿರುವಂತೆ, ನಿಮ್ಮ ತಂದೆಯವರ ಬಿಸಿನೆಸ್ ನಲ್ಲಿ ಸಹಾಯ ಮಾಡಿದರೂ ಅದು ಕೆಲಸವೇ. ಅದನ್ನೇ ಪ್ರಾಮಣಿಕವಾಗಿ ಮುಂದುವರಿಸಿ. ಅದನ್ನು ನೀವು ಮಾಡ್ತಾ ಇದ್ದೀರಾ, ಮುಂದೆಯೂ ಮಾಡ್ತೀರಾ ಅಂತ ನಂಗೆ ಅನ್ಸುತ್ತೆ...
ಆದ್ರೆ, ನಿಮಗೆ ಏನು ಸರಿ ಅಂತ ಅನ್ಸುತ್ತೋ ಅದನ್ನೇ ಮಾಡಿ...
ಒಟ್ಟಿನಲ್ಲಿ ನಿಮ್ಮ ಬದುಕಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿರುವವರು ನೀವೇ... ಬೇರೆ ಯಾರೂ ಅಲ್ಲ... ನಾವೇನಿದ್ದರೂ ಸಲಹೆ ನೀಡಬಹುದು, ಆದ್ರೆ ಫೈನಲ್ ಡಿಸಿಷನ್ ಮಾತ್ರ ನಿಮ್ಮದೇ ಆಗಿರುತ್ತೆ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಕಚೇರಿ ಎಂಬ ನರಕ-೧
ಥ್ಯಾಂಕ್ಸ್ ಅನಿಲ್. ನಾವು ಮಾಡುವ ಕೆಲಸವನ್ನೇ ಶ್ರದ್ಧೆಯಿಂದ ಮಾಡಿದರೆ ಸಾಕು, ಜಗತ್ತಿಗೆ ನಮ್ಮ ಪಾಲನ್ನು ಸಲ್ಲಿಸಿದಂತೆ ಎಂದು ಅಪ್ಪ ಆಗಾಗ ಹೇಳ್ತಿರ್ತಾನೆ. ಅದರಲ್ಲಿ ನನಗೆ ನಂಬಿಕೆ ಇದೆ. ನನ್ನ ಮಿತಿಯಲ್ಲಿ ಅದನ್ನು ಪರೀಕ್ಷಿಸಿ ನೋಡಿ ಸತ್ಯ ಎಂದು ಕಂಡುಕೊಂಡಿದ್ದೇನೆ.
ಸಲಹೆಗಳು ಸಾವಿರಾರು ಇರಲಿ, ನಿರ್ಧಾರ ಮಾತ್ರ ನಮ್ಮದೇ ತಾನೆ? ನಾವೆಲ್ಲ ಬದುಕುವುದೇ ಹೀಗೆ. ಮನಸ್ಸಿಗೆ ತಿಳಿದಂತೆ, ಹೊಳೆದಂತೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಪಲ್ಲವಿ.... ಇದೆಲ್ಲಾ ಕಾಮನ್ ಅಲ್ವಾ? ಈ ಎಲ್ಲವನ್ನೂ ನಾವೂ ಅನುಭವಿಸಿದ್ದೇವೆ. ಆದ್ರೂ ಮುಂದೆ ಏನು ಬರೀತಿಯಾ ಅನ್ನೋದರ ಬಗ್ಗೆ ಕುತೂಹಲ ಇದೆ ನೋಡೋಣ. ಅಂಥಾ ಏನ್ ದೊಡ್ಡ ಸವಾಲ್ ಅಲ್ಲಾ... ಆದ್ರೆ ಕೆಲಸ ಮಾಡಿ ನೋಡು.... ಅದನ್ನ ಬೇಕಾದ್ರೆ ಸವಾಲು ಎನ್ನಬಹುದು. - ಶ್ರೀದೇವಿ ಕಳಸದ
ಉ: ಕಚೇರಿ ಎಂಬ ನರಕ-೧
---------ಆದ್ರೆ ಕೆಲಸ ಮಾಡಿ ನೋಡು.... ಅದನ್ನ ಬೇಕಾದ್ರೆ ಸವಾಲು ಎನ್ನಬಹುದು------
"ಅದರಲ್ಲೂ, ನಾನು ಮಾಡೋ ಕೆಲಸ ಮಾಡಿ ನೋಡು. ಅದು ದೊಡ್ಡ ಸವಾಲು ಅನ್ನಬಹುದು" ಎಂಬುದು ಎಲ್ಲರ ಅಂಬೋಣ
ಉ: ಕಚೇರಿ ಎಂಬ ನರಕ-೧
ನಿಜ ವಿಕಾಸ್. ಯದ್ ಭಾವಂ, ತದ್ ಭವತಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ನಿಜ ಶ್ರೀದೇವಿ, ಇದೆಲ್ಲಾ ಕಾಮನ್. ಹೀಗಾಗಿ, ಬರೆಯಲು ನನಗೆ ಸಾಧ್ಯವಾಗಿದೆ.
ಆದರೆ, ನನ್ನ ಅನುಭವ ಇತರರಿಗಿಂತ ವಿಶಿಷ್ಟ ಅನ್ನೋದರ ಬಗ್ಗೆ ನನಗೆ ಅಂತಹ ನಂಬಿಕೆ ಇಲ್ಲ. ಕೆಲವರು ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು ಸುಮ್ಮನಿರುತ್ತಾರೆ. ಅಷ್ಟೇ ವ್ಯತ್ಯಾಸ.
ಯಾರಿಗೆ ಗೊತ್ತು, ಮುಂದೆ ಹೊರಗೆ ಹೋಗಿ ಕೆಲಸ ಮಾಡುವ ಸಂದರ್ಭಗಳೂ ಬರಬಹುದು. ಆಗ ಮಾಡಿದರಾಯ್ತು ಬಿಡು. ಉಪನಿಷತ್ತಿನಲ್ಲಿ ಹೇಳಿದಂತೆ (ಹಾಗೆ ಓದಿದ ನೆನಪು), ಒಂದು ಹಿಡಿ ಮಣ್ಣನ್ನು ಅರಿತುಕೊಂಡರೆ, ಇಡೀ ಭೂಮಂಡಲವನ್ನೇ ಅರ್ಥ ಮಾಡಿಕೊಳ್ಳಬಹುದು. ಹಾಗೆ, ಒಂದಿಷ್ಟು ವ್ಯಕ್ತಿಗಳ ಮನಃಸ್ಥಿತಿ ಅರ್ಥವಾದರೆ, ಯಾರ ಜೊತೆಗಾದರೂ ಸುಲಭವಾಗಿ ವ್ಯವಹರಿಸಬಹುದು.
ಹಾಗೆ ವ್ಯವಹರಿಸುವ ಸಾಮರ್ಥ್ಯ ನನ್ನಲ್ಲಿದೆ ಎಂದು ಭಾವಿಸಿಕೊಂಡಿದ್ದೇನೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಯಾಕ್ರಿ ಅಷ್ಟು ಮನಸ್ಸಿಗೆ ಹಚ್ಕೋತಿರಾ? ನೋಡ್ರಿ ’ಕೆಲಸದ ಗಡಿಬಿಡಿಯಲ್ಲಿ ಬರಿಲಿಕ್ಕೆ ಸಮಯ ಸಿಗಲ್ಲ’ ಅಂದ್ರೆ, ಅವರು ಅದನ್ನ ಪ್ರಮಾಣಿಕವಾಗಿ ನಂಬಿರಬಹುದು. ನೀವು ಅದನ್ನ ಸವಾಲು ಅಂತ ಯಾಕೆ ತಿಳೀತಿರ? ನೀವೂ ಬೇಕಾದ್ರೆ ಹೇಳಿ ನನಗೆ ಬರೆಯೊದು ಓದೋದರ ನಡುವೆ ಕೆಲಸಕ್ಕೆ ಹೋಗೊಕ್ಕೆ ಮನಸ್ಸು ಬರ್ತಾ ಇಲ್ಲ ಅಂತ... ನೀವು ನಿಮಗೆ ಸರಿ ಅನಿಸಿದ್ದನ್ನ ಮಾಡ್ರಿ, ಸುಮ್ ಸುಮ್ನೆ ಸಣ್ಣ ಸಣ್ಣ ವಿಷಯ ಮನಸ್ಸಿಗೆ ಹಚ್ಗೊಬ್ಯಾಡ್ರಿ.
ಶಿಲ್ಪ
ಭವಿಶ್ಯ ನಮ್ಮ ಕೈಯಲ್ಲಿಯೆ ಇದೆ
ಉ: ಕಚೇರಿ ಎಂಬ ನರಕ-೧
ಹಾಗೇನೂ ಇಲ್ಲ ಶಿಲ್ಪಾ. ಕೆಲಸಕ್ಕೆ ಹೋಗುವುದು, ಹೋಗದಿರುವುದು ಎರಡಕ್ಕೂ ಅಂತಹ ವ್ಯತ್ಯಾಸ ಇಲ್ಲ. ನಾನು ಮನೇಲೇ ಕೂತು ಉತ್ಪಾದಕ ಕೆಲಸ ಮಾಡುವುದೂ ಒಂದು ಉತ್ತಮ ಕೆಲಸವೇ. ಅನಿವಾರ್ಯತೆ ಹಾಗೂ ಮನಃಸ್ಥಿತಿ ನಮ್ಮ ಕೆಲಸದ ಗುಣ ನಿರ್ಧರಿಸುತ್ತವೆ. ಅದೊಂದು ಸವಾಲು ಎಂದೇನೂ ನಾನು ಭಾವಿಸಿಲ್ಲ. ಶ್ರೀದೇವಿ ತಮ್ಮ ಅನಿಸಿಕೆ ಹೇಳಿದ್ದಾರೆ. ನಾನು ನನ್ನ ಅನಿಸಿಕೆ ಬರೆದಿದ್ದೇನೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಪಲ್ಲವಿಯವರೆ,
ನೀವು ಹಾಕಿರುವ ಚಿತ್ರದ ಹಾಗೆ, ಕಚೇರಿ ಕೆಲಸ ನಮ್ಮನ್ನು ಒಮ್ಮೆ ಇರುವೆ, ಒಮ್ಮೆ ಬೆರಳಿನ ಜಾಗದಲ್ಲಿ ನಿಲ್ಲಿಸುತ್ತೆ. ಮೇಲಿದ್ದರೂ, ಕೆಳಗಿದ್ದರೂ ಮನಸ್ಸಿನ ಸಮತೋಲನ ಕಾಪಾಡಿಕೊಂಡು ಕೆಲಸ ಮಾಡಬೇಕು. ಆಫೀಸಿನಲ್ಲಿ productivity ಯಲ್ಲದೆ ಬೇರೆ ಭಾವನೆಗಳಿಗೆ ಅವಕಾಶವಿಲ್ಲ. ಅಲ್ಲಿ ಜೀತದಾಳಿನ ತರಹ ದುಡಿದು ಬಂದು ಮನೆಯಲ್ಲಿ ಕೂತು ಕತೆ, ಕವನ ಅಂತ ಬರೆಯಲು ಸಾಧ್ಯವೆ ಇಲ್ಲ. ಮೂಡ್ ಇರುವುದಿಲ್ಲ, ಸಮಯ ಸಿಗುವುದಿಲ್ಲ, ಸುಸ್ತಾಗಿರುತ್ತೆ, ಏನೂ ಯೋಚಿಸದೆ ಟಿ.ವಿ. ನೋಡುತ್ತ ಆಯಾಸ ಪರಿಹರಿಸಿಕೊಳ್ಳೋಣ ಅನ್ನಿಸತ್ತೆ. ನಾನು ಎಷ್ಟೋ ಬರೆಯಬೇಕೆಂದುಕೊಂಡು ಕೊನೆಗೆ ಸಮಯದ ಅಭಾವದಿಂದ ಬರೆಯಲು ಆಗಿಲ್ಲ. ಅಥವ ಒಮ್ಮೊಮ್ಮೆ ನಾನು ಯೋಚಿಸಿದ ವಿಷಯದ ಎಳೆ ನನಗೇ ಮರೆತು ಹೋಗುತ್ತೆ
ನನ್ನ ಬದುಕಿನಲ್ಲೂ ನಿಮ್ಮ ತರಹದ carefree ದಿನಗಳಿದ್ದವು. ನಾನೂ ಅವನ್ನು ನನ್ನ ರೀತಿಯಲ್ಲಿ ಅನುಭವಿಸಿದೆ, ಸವಿದೆ. ಈಗ ನನ್ನದು ಬೇರೊಂದು ಜೀವನದ ಘಟ್ಟ. ಇರಲಿ. ನೀವು ಏನು ಮಾಡಿದರೂ ನಿಮಗೆ ಇಷ್ಟವಾದದನ್ನು ಮಾತ್ರ ಮಾಡಿ, ಸ್ವಸಂತೋಷಕ್ಕಾಗಿ ಮಾಡಿ. ಈಗ ಕಳೆದ ದಿನಗಳು ಮತ್ತೆ ಬರದು. ಇದನ್ನು ಮಾತ್ರ ಖಚಿತವಾಗಿ ಹೇಳಬಲ್ಲೆ.
~ಕಲ್ಪನ
ಉ: ಕಚೇರಿ ಎಂಬ ನರಕ-೧
ಮತ್ತೊಂದು ವಿಷಯ ಗಮನಿಸಿದ್ದೀರ? ಇಲ್ಲಿ ನಿಯಮಿತವಾಗಿ ಹೆಚ್ಚು ಬರೆಯುವವರ ಲಿಸ್ಟ್ ಮಾಡಿದರೆ ಹೀಗಿರುತ್ತೆ(ನನ್ನ ಪ್ರಕಾರ).
೧.ಸಿಂಗಲ್ ಗಂಡುಗಳು
೨.middle-aged ಅಥವ ವಯಸ್ಸಾದ ಗಂಡಸರು
೩.ಸಿಂಗಲ್ ಹೆಣ್ಣುಗಳು
೪. middle-aged ಅಥವ ವಯಸ್ಸಾದ ಹೆಂಗಸರು
ಇದು ಏನು ಹೇಳುತ್ತೆ ?
~ಕಲ್ಪನ
ಉ: ಕಚೇರಿ ಎಂಬ ನರಕ-೧
ಹ್ಹ ಹ್ಹ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಕಚೇರಿ ಎಂಬ ನರಕ-೧
ಹಾಗಾದರೆ, ಇದರ ಹೊರತಾಗಿ ಉಳಿದವರಾದರೂ ಯಾರು? ಬಹುಶಃ ನಿಮ್ಮ ಪಟ್ಟಿ ಎಲ್ಲರನ್ನೂ ಕವರ್ ಮಾಡಿದಂತಿದೆ. ಅಂದರೆ ಎಲ್ಲರೂ ಸಂಪದಕ್ಕೆ ಬರೆಯುತ್ತಿದ್ದಾರೆ. ನಾಡಿಗ್ ಅವರು ಖುಷಿಯಾಗುತ್ತಾರೆ ಬಿಡಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಕಲ್ಪನಾ ಅವರೇ,
ನಿಮ್ಮ ಪ್ರಕಾರ ಮಹೇಶರು ಸದ್ಯದಲ್ಲೇ ಕಾಣೆ ಆಗಲಿದ್ದಾರೆ ಅಂತಲೋ?
--ಶ್ರೀ
ಉ: ಕಚೇರಿ ಎಂಬ ನರಕ-೧
ಹ್ಹ ಹ್ಹ.. ಮುಕ್ತ..ಮುಕ್ತ...
ಉ: ಕಚೇರಿ ಎಂಬ ನರಕ-೧
ಒಂದು ಸರಳ ಸೂತ್ರ ಇದೆ ಕಲ್ಪನಾ. ಯಾವುದೇ ಕೆಲಸ ಇರಲಿ, ಅದನ್ನು ಶ್ರದ್ಧೆಯಿಂದ ಮಾಡಿದಾಗ ಅಪಾರ ತೃಪ್ತಿ ಸಿಗುತ್ತದೆ. ಅದು ಮನೆಕೆಲಸವೇ ಆಗಿರಬಹುದು, ಬರವಣಿಗೆಯೇ ಆಗಿರಬಹುದು, ಹೊರಗಿನ ಕೆಲಸವೇ ಆಗಿರಬಹುದು. ಮನಸ್ಸು ತೊಡಗಿಸಿಕೊಂಡು ಮಾಡಿದಾಗ ನಿಜಕ್ಕೂ ಕೆಲಸ ಎಂದು ಅನ್ನಿಸದೇ ರಂಜನೆಯಾಗುತ್ತದೆ. ಕೆಲವು ನಮ್ಮ ಅಭಿರುಚಿಗೆ ಒಗ್ಗದಿರಬಹುದು. ಆದರೆ, ಅದನ್ನೇ ಬೇಸರಪಟ್ಟುಕೊಂಡು ಮಾಡುವುದಕ್ಕಿಂತ ಮನಃಪೂರ್ವಕ ಮಾಡುವುದು ಉತ್ತಮ. ಕಷ್ಟವಾಗುತ್ತದೆ ನಿಜ. ಆದರೆ, ಬೇಸರಪಟ್ಟುಕೊಂಡರೆ ಇನ್ನಷ್ಟು ಕಷ್ಟವಾಗುತ್ತದೆ.
ನೀವು ಹೇಳಿದಂತೆ ಇವು ನನ್ನ ಜೀವನದ ಕೇರ್ಫ್ರೀ ದಿನಗಳು. ತುಂಬ ದಿನ ಹೀಗೆ ಇರಲು ಆಗಲಿಕ್ಕಿಲ್ಲ. ಆದರೆ, ಇವತ್ತು ಆನಂದವಾಗದೇ, ಮಾಡುವ ಕೆಲಸದಲ್ಲಿ ಮನಸ್ಸು ತೊಡಗಿಸಿಕೊಳ್ಳದೇ ಇದ್ದರೆ, ಮುಂದೊಂದು ದಿನ ಬರಬಹುದಾದ ಆನಂದವನ್ನೂ ಆಸ್ವಾದಿಸುವುದು ಆಗಲಿಕ್ಕಿಲ್ಲ. ಹಾಗಂತ ಅಂದುಕೊಂಡೇ ನನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕಚೇರಿ ಎಂಬ ನರಕ-೧
ಪಲ್ಲವಿ ಅವರೇ ನಿಮ್ಮ ಬ್ಲಾಗ್ ಗಳನ್ನೆಲ್ಲ ಓದಿದೆನು. ನೀವು ತುಂಬ ಚೆನ್ನಾಗಿ ಬರೆಯುತ್ತೀರಿ. ನಾನೂ ಕರ್ನಾಟಕ ಸರಕಾರಕ್ಕೆ ಕೆಲಸ ಮಾಡಿದ್ದೇನೆ. ನೀವು ಕಚೇರಿ ಬಗ್ಗೆ ಬರೆದದ್ದೆಲ್ಲಾ ಅರ್ಥವಾಗುತ್ತದೆ. ನೀವು ಖಿನ್ನತೆ ಬಗ್ಗೆ ಬರೆದ ಲೇಖನ ಕೂಡ ತುಂಬ ಅರ್ಥ ಪೂರ್ಣ ವಾಗಿದೆ.
ನಾನು ಇಂದು ಮೊದಲ ಸಾರಿಗೆ ಕನ್ನಡ ದಲ್ಲಿ ಪ್ರತಿಕ್ರಿಯೆ ಬರೆದಿರುವೆನು. ಬರೆಯಲು ತುಂಬ ಕಷ್ಟ ವೆನಿಸಿತು. ಕನ್ನಡ ಬರೆದು ಎಷ್ಟೋ ವರುಷಗಳಾಗಿತ್ತು. ಆದರೂ ಕನ್ನಡ ಬರೆಯಲು ಸಂತೋಷವಾಗುತ್ತದೆ ಇಂತಿ ತಮ್ಮ ವಿಶ್ವಾಸಿ.
ಚಾರು ಸ್ಮಿತಾ
ಉ: ಕಚೇರಿ ಎಂಬ ನರಕ-೧
ಸ್ಮಿತಾ, ಮೊದ ಮೊದಲು ಸ್ವಲ್ಪ ಕಷ್ಟವಾಗುತ್ತದೆ ನಂತರ ಆರಾಮಾಗಿ ಕನ್ನಡದಲ್ಲಿ ಟೈಪಿಸಬಹುದು. ಇಷ್ಟು ವರುಷವಾದರೂ ತಪ್ಪಿಲ್ಲದೇ ಬರೆದದ್ದನ್ನು ನೋಡಿ ಖುಷಿಯಾಯಿತು.
ಸಂಪದದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಿ. ಧನ್ಯವಾದಗಳು.
**************************
http://vikasavada.blogspot.com/
**************************
ಉ: ಕಚೇರಿ ಎಂಬ ನರಕ-೧
ಎಷ್ಟೋ ದಿನಗಳ ನಂತರ ಬರೆದರೂ ನಿಮ್ಮ ಕನ್ನಡ ಕುಂದಿಲ್ಲ, ಕಂದಿಲ್ಲ. ಬರ