ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಬೃಹತ್ ಇಟ್ಟಿಗೆ

ಹಗರಟಗಿಯ ಬೃಹತ್ ಇಟ್ಟಿಗೆ

ಹಗರಟಗಿ-೩೦೦ ಎಂದು ಶಾಸನಗಳಲ್ಲಿ ಪ್ರಸಿದ್ಧವಾದ ಇಂದಿನ ಹಗರಟಗಿ ಪ್ರಸ್ತುತ ಗುಲ್ಬರ್ಗ ಜಿಲ್ಲೆಯ ಸುರಪುರ ತಾಲೂಕಿನ ಒಂದು ಸಣ್ಣ ಹಳ್ಳಿ. ಹಿಂದೊಮ್ಮೆ ಸುತ್ತಮುತ್ತಲಿನ ಗ್ರಾಮಗಳನ್ನು ತನ್ನ ವ್ಯಾಪ್ತಿಯಲ್ಲಿಟ್ಟುಕೊಂಡು ಕಲ್ಯಾಣದ ಚಲುಕ್ಯರ ಕಾಲದಲ್ಲಿ ಮೆರೆದಿದ್ದ ಆಡಳಿತ ಘಟಕ. ಇಲ್ಲಿ ಪಂಚ ಪಾಂಡವರ ಹೆಸರಿನಲ್ಲಿ ನಿರ್ಮಿಸಲಾದ ಐದು ದೇವಾಲಯಗಳಿವೆ. ನೂರೊಂದು ಭಾವಿಗಳು ಹಾಗೂನೂರೊಂದು ದೇಗುಲಗಳಿದ್ದವೆಂದು ಸ್ಥಳಿಯರು ಅಭಿಮಾನದಿಂದ ಹೇಳುತ್ತಾರೆ.

ಹಗರಟಗಿಯ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಅರ್ಜುನನ ದೇಗುಲದ ಆಚೀಚೆ ಹೊಲಗಳಲ್ಲಿ ಕಣ್ಣಾಡಿಸಿದರೆ ಭೂಮಿಯ ಮೇಲ್ಪದರಿನಲ್ಲಿಯೆ ದೊರೆಯುವ ಬೃಹತ್ ಇಟ್ಟಿಗ್ರ್ಗಳು ಕುತೂಹಲ ಕೆರಳಿಸುತ್ತವೆ.

೧೮ ಇಂಚು ಉದ್ದ ,೯ ಇಂಚು ಅಗಲ ಹಾಗೂ ೩ ಇಂಚು ಎತ್ತರದ ಇಟ್ಟಿಗೆಯ ತೂಕ ಹತ್ತು ಕಿಲೋ ಭಾರವಿದೆ. ಆಧುನಿಕರು ಬಳಸುವ ಇಂದಿನ ಇಟ್ಟಿಗೆಗಳಿಗಿಂತ ಐದು ಪಟ್ಟು ದೊಡ್ಡದಾಗಿರುವ ಈ ಬೃಹತ್ ಇಟ್ತಂಗಿ ಕಾಲರಾಯನ ಎಲ್ಲ ಹೊಡೆತ ಒತ್ತಡ ತಾಳಿಕೊಂಡು ಇನ್ನೂ ಗಟ್ಟಿಮುಟ್ಟಾಗಿ ಉಳಿದಿದೆ.

ಪ್ರಮಾಣ ಬದ್ಧ ರೀತಿಯಲ್ಲಿ ರೂಪಿಸಿದ ಈ ಇಟ್ಟಂಗಿಯನ್ನು ಕಟಿಯಾಗುವಂತೆ ಚೆನ್ನಾಗಿ ಸುಡಲಾಗಿದೆ. ಬಾರಿಸಿದರೆ ಖನ್ ಖನ್ ಸದ್ದು ಬರುವಷ್ಟು ಗಟ್ಟಿಮುಟ್ಟಾಗಿದೆ. ಬೆಣಚು ಗಲ್ಲಿನ ವಾಸ್ತುಶಿಲ್ಪದ ಈ ನೆಲೆವೀಡಿನಲ್ಲಿ ಇಂತಹ ಇಟ್ಟಿಗೆಗಳು ದೊರೆಯುತ್ತಿರುವದೊಂದು ಸೋಜಿಗ !
ಪ್ರಾಚೀನ ಭಾರತದ ಪುರಾತನ ಸಂಸ್ಕೃತಿಯ ಸಿಂಧೂ ಬಯಲಿನ ನಾಗರಿಕತೆ, ಬೆಳಗಾವಿಯ ಬಳಿಯ ಶಾತವಾಹನರ ಕಾಲದ ವಡಗಾಂವ ಹಾಗೂ ಮಾಧವಪುರಗಳಲ್ಲಿ ದೊರೆತಿರುವ ಇಟ್ಟಿಗೆಗಳ ಸರಿಸುಮಾರು ಅಳತೆಯನ್ನು ಇವು ಹೋಲುತ್ತಿದ್ದು ಸಂಶೋಧಕರಿಗೆ ಸಂಮೃದ್ಧ ಗ್ರಾಸವನ್ನೊದಗಿಸಲಿವೆ.

ಪ್ರಾಕ್ತನ ಶಾಸ್ತ್ರಜ್ಞರು ಉತ್ಖನನ ಕಾರ್ಯ ಕೈಕೊಂಡರೆ ಇಲ್ಲಿ ಇಂತಹ ಇಟ್ಟಿಗೆಗಳಿಂದ ರೂಪಿತಗೊಂಡ ವಾಸ್ತು ನಿರ್ಮಿತಗಳು ಬೆಳಕಿಗೆ ಬರಬಹುದಾಗಿದೆ.
ಈ ಆಪರೂಪದ ಸಂಶೋಧನ ಮಾಹಿತಿಯನ್ನು ಇತಿಹಾಸ ಇತಿಹಾಸ ಮತ್ತು ನಾದಿನ ಪರಂಪರೆಯ ಬಗೆಗೆ ತೀವ್ರ ಆಸಕ್ತಿ ಹೊಂದಿರುವ ತಾಳಿಕೋಟಿಯ ಶ್ರೀ ಖಾಸ್ಗತೇಶ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳಾದ ಪ್ರೊ. ಶೇಷಾಚಲ ಹವಾಲ್ದಾರ, ಪ್ರೊ. ಚಂದ್ರಗೌಡ ಕುಲಕರ್ಣಿ , ಪ್ರೊ.ಎ. ಪಿ. ನಾಂದಣಿ ಹಾಗೂ ಅನಿಲ್ ಇರಾಜ ಇವರು ನೀಡಿದ್ದಾರೆ.

0
~.~
Syndicate content