ಹಂಸ ನಾದ
ಹಂಸ ನುಡಿದರೆ, ಹಂಸನಾದ!
ನವರಾತ್ರಿಯ ಏಳನೇ ದಿನ
ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಹುಪಾಲು ಭೂಮಿಗೆ ನೀರುಣಿಸುತ್ತವೆ. ಇಂತಹ ಮಹಾತಾಯಿ ಕಾವೇರಿಗೆ ಇಂದು ಮೊದಲು ನಮಿಸೋಣ.
ಇವತ್ತು ಈ ಮೊದಲ ಆರು ದಿನಕ್ಕಿಂತ ಸ್ವಲ್ಪ ಬೇರೆ. ಬೇರೆ ಸಂಗೀತಗಾರರು ಹಾಡಿದ, ದೇವಿಯ ಬಗ್ಗೆಯ ರಚನೆಯ ಕೊಂಡಿಗಳನ್ನು ಕೊಡುವ ಬದಲು ಇವತ್ತು ಒಂದು ಬದಲಾವಣೆ ಮಾಡಿದ್ದೇನೆ. ಕನ್ನಡದ ಮೂರು ಕವಿಗಳು ಸರಸ್ವತಿಯ ಬಗ್ಗೆ ಮಾಡಿರುವ ಸ್ತುತಿಯನ್ನು, ಹವ್ಯಾಸಿ ಸಂಗೀತಾಭ್ಯಾಸಿಯೊಬ್ಬರ ಕಂಠದಲ್ಲಿ ಕೇಳಿಸುವೆ. ಇದಕ್ಕೆ ಕಾರಣ, ಕನ್ನಡಕ್ಕೂ-ಕಾವೇರಿಗೂ ಇರುವ ಬಿಡಿಸದ ನಂಟು. ಹಾಗಾಗಿ, ಕಾವೇರಿ ಸಂಕ್ರಮಣದ ದಿನ ಒಂದಲ್ಲ, ಮೂರು ಕನ್ನಡ ರಚನೆಗಳು ಇವತ್ತು ಇಲ್ಲಿ ಕೇಳಿ ಬರುತ್ತಿವೆ. ಇವಕ್ಕೆ ಹಿನ್ನಲೆ ವಾದ್ಯಗಳ ಅಲಂಕಾರವಿಲ್ಲ. ಆದರೂ ಪರವಾಗಿಲ್ಲ, ಎನ್ನುವ ಭಾವನೆ ನನ್ನದು.
ಮೊದಲಿಗೆ ಕನ್ನಡದ ಮೊದಲ ಕಾವ್ಯ ಕವಿರಾಜ ಮಾರ್ಗದಿಂದ ಆಯ್ದ ಸರಸ್ವತೀ ಸ್ತುತಿಯಾದ ಒಂದು ಕಂದಪದ್ಯ:
ಶ್ರೀ ವಿಶದವರ್ಣೆ ಮಧುರಾ
ರಾವೋಚಿತೆ ಚತುರ ರುಚಿರ ಪದರಚನೆ ಚಿರಂ
ದೇವಿ ಸರಸ್ವತಿ ಹಂಸೀ
ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್
ಇದನ್ನು ಹಾಡಿರುವುದನ್ನು ಇಲ್ಲಿ ಕೇಳಬಹುದು.
http://boomp3.com/m/841f5e96fb86
ಅಂದ ಹಾಗೆ, ಈ ವಲಜಿ ರಾಗವೂ, ಕರ್ನಾಟಕ ಸಂಗೀತಕ್ಕೆ, ಮುತ್ತಯ್ಯ ಭಾಗವತರ ಕೊಡುಗೆಯೇ. ಅವರ ಬಗ್ಗೆ ಕೆಲವು ದಿನಗಳ ಹಿಂದೆ ಬರೆದಿದ್ದೆ.
ಈಗ, ಎರಡನೆಯದಾಗಿ, ಒಂದು ಷಟ್ಪದಿ. ಕುಮಾರವ್ಯಾಸ ಭಾರತದ ಪೀಠಿಕಾ ಸಂಧಿಯಿಂದ ಸರಸ್ವತಿಯ ಪ್ರಾರ್ಥನೆ:
ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನ ರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೇ
ಶೌರಿ ಸುರಪತಿ ಸಕಲ ಮುನಿವರ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆಮ್ಮ ಜಿಹ್ವೆಯಲಿ
ಇದನ್ನು, ಕರ್ನಾಟಕದ ಸಾಂಪ್ರದಾಯಿಕ ಗಮಕ ಕಲಾಶೈಲಿಯಲ್ಲಿ ಕೇಳಿ:
ಮೂರನೆಯದಾಗಿ, ಕನಕದಾಸರು ಮಾಡಿರುವ, ಮಾತಿನ ದೇವತೆ ಶಾರದೆಯ ಮೇಲಿನ ಒಂದು ದೇವರನಾಮ:
ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣ ಕಮಲಂಗಳ ದಯಮಾಡು ದೇವೀ || ಪಲ್ಲವಿ||
ಶಶಿಮುಖದ ನಸುನಗೆಯ ಬಾಲೇ!
ಎಸೆವ ಕರ್ಣದ ಮುತ್ತಿನ ಓಲೇ
ನಸುವ ಸುಪಲ್ಲ ಗುಣಶೀಲೇ ದೇವೀ
ಬಿಸಜಾಕ್ಷಿ ಎನ್ನ ಹೃದಯದಲಿ ನಿಂದು ||ಚರಣ ೧||
ರವಿ ಕೋಟಿ ತೇಜ ಪ್ರಕಾಶೇ ಸದಾ
ಕವಿ ಜನ ಹೃತ್ಕಮಲ ವಾಸೇ
ಅವಿರಳಪುರಿ ಕಾಗಿನೆಲೆಯಾದಿ ಕೇ-
ಶವನ ಸುತನಿಗೆ ಸನ್ನುತ ರಾಣಿವಾಸೇ || ಚರಣ ೨||
ಇದನ್ನು ನೀವು ಇಲ್ಲಿ ಕೇಳಬಹುದು:
ವರವ ಕೊಡು - ಕನಕದಾಸರ ರಚನೆ - ರಾಗ: ರಂಜನಿ
ಇಷ್ಟು ದಿವಸದ ಸಂಪ್ರದಾಯವನ್ನು ಮುರಿಯದೆ, ಇವತ್ತಿನ ಸ್ವಾತಿ ತಿರುನಾಳ್ ಮಹಾರಾಜರ ನವರಾತ್ರಿ ಕೃತಿ ಯಾವುದು ಎನ್ನುವುದನ್ನೂ ಹೇಳಿಬಿಡುತ್ತೇನೆ. ಅದು ಶುದ್ಧಸಾವೇರಿ ರಾಗದಲ್ಲಿರುವ ಜನನಿ ಪಾಹಿ ಸದಾ ಎಂಬ ರಚನೆ. ಅದನ್ನು ನೀವು ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.
-ಹಂಸಾನಂದಿ

- hamsanandi ರವರ ಬ್ಲಾಗ್
- Printer-friendly version
- Login or register to post comments
- 817 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನವರಾತ್ರಿಯ ಏಳನೇ ದಿನ
ಹಂಸಾನಂದಿಗಳೇ, ಇಂದೂ ಕೂಡ ನಿಮ್ಮ ಬರಹವನ್ನು ಎದುರು ನೋಡುತ್ತಲೇ ಆಫೀಸಿಗೆ ಬಂದೆ. ಈ ದಿನ ಒಂದು ಒಳ್ಳೆಯ ಆರಂಭ ಸಿಕ್ಕಿತೆನಗೆ. ನನ್ನಿ. ಹಾಗೆಯೇ,
ಇವರು ಯಾರೇ ಆಗಿರಲಿ(ನೀವೇ ಅಂತ ನನ್ನ ಅನುಮಾನ) ಅವರಿಗೂ ನನ್ನ ನನ್ನಿಗಳನ್ನು ತಿಳಿಸಿ.
ಹಾಡಲ್ಲದೆ, ಈ ಎಳೆಯ ಮತ್ತೆರೆಡು ಅಂಶಗಳನ್ನು ನನ್ನನ್ನು ಆಕರ್ಷಿಸಿದವು.
೧. ಕನಕದಾಸರು, ಸರಸ್ವತಿಯನ್ನು "ಶಶಿಮುಖದ ನಸುನಗೆಯ ಬಾಲೇ" ಎಂದಿರುವುದು. ಇತ್ತೀಚೆಗೆ ನೀವೇ ಅಲ್ಲವೇ ಸರ್ವಶುಕ್ಲಾ ಸರಸ್ವತೀ! ಎಳೆಯಲ್ಲಿ ವಿಜ್ಜಿಕೆಯ ಬಗ್ಗೆ ತಿಳಿಸುತ್ತಾ, ಸರಸ್ವತಿಯ ಬಣ್ಣದ ಬಗ್ಗೆ ಪ್ರಸ್ತಾಪ ಮಾಡಿದ್ದು.
೨. ಕವಿರಾಜ ಮಾರ್ಗದಿಂದ "ಶ್ರೀ ವಿಶದವರ್ಣೆ ಮಧುರಾರಾವೋಚಿತೆ ಚತುರರುಚಿರ ಪದರಚನೆ ಚಿರಂದೇವಿ ಸರಸ್ವತಿ ಹಂಸೀ ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್" ಎಂಬಲ್ಲಿ ಕೂರ್ತು ಪದ ಗಮನಿಸಿ. ನಾನು ಕೂರ್ ಬೇಕೇ ಕೂರ್ ಎಂಬ ಎಳೆಯಲ್ಲಿ "ಕೂರ್ತು" ಪದದ ಪ್ರಸ್ತಾಪ ಮಾಡಿದ್ದೆ. ಕೂರ್ತು ಎಂದರೆ ಬರೀ ಕಾಲು ಮಡಿಸಿ ಕುಳಿತುಕೊಳ್ಳುವ ಕ್ರಿಯೆಯಲ್ಲ. ಕೂರ್ ಎಂದರೆ ಪ್ರೀತಿ, ಮಮತೆ ಎಂಬ ಅರ್ಥಗಳೂ ಇವೆ. ಈ ಪದ್ಯದಲ್ಲಿ ಕೂರ್ತು -> ಪ್ರೀತಿಯಿಂದ ಎಂಬ ವಿವರಣೆ ಕರಾರುವಾಕ್ಕಾಗಿ ಸೇಱುತ್ತದೆ.
ಉ: ನವರಾತ್ರಿಯ ಏಳನೇ ದಿನ
ಹೌದು ಸುನಿಲರೆ, ನೀವು ಹೇಳುವ ಹಾಗೆ ಕೂರ್ತು ಎನ್ನುವ ಪದದ ಅರ್ಥಗಳು ಇಲ್ಲಿ ಸೊಗಸಾಗಿ ವ್ಯಕ್ತವಾಗಿವೆ.
-ಹಂಸಾನಂದಿ
ಉ: ನವರಾತ್ರಿಯ ಏಳನೇ ದಿನ
"ಮೂರನೆಯದಾಗಿ, ಕನಕದಾಸರು ಮಾಡಿರುವ, ಮಾತಿನ ದೇವತೆ ಶಾರದೆಯ ಮೇಲಿನ ಒಂದು ದೇವರನಾಮ:"
ಕನಕದಾಸರ ಕೃತಿ ಎಂದಾಗ, ನಾಮಾಂಕಿತ ಬಳಕೆ ಹೇಗಿದೆ ಎಂದು ಕುತೂಹಲ ದಿಂದ ನೋಡಿದೆ...
" ಕಾಗಿನೆಲೆಯಾದಿ ಕೇ-
ಶವನ ಸುತನಿಗೆ ಸನ್ನುತ ರಾಣಿವಾಸೇ"
ಇದನ್ನು ಓದಿದಾಗ ಪುರಂದರ ದಾಸರ ಕೃತಿ - 'ಶರಣೆಂಬೆ ವಾಣಿ, ಪೊರೆಯೆ ಕಲ್ಯಾಣಿ' ನೆನಪಿಗೆ ಬಂತು...
ಈ ಕೃತಿಯಲ್ಲಿ
ಪುರಂದರ ದಾಸರು ತಮ್ಮ ನಾಮಾಂಕಿತವನ್ನು ಬಳಸಲು ಸರಸ್ವತಿಯನ್ನು 'ಪುರಂದರ ವಿಠ್ಠಲನ ಸೋದರ ಸೊಸೆ' ಎಂದು ಕರೆದಿದ್ದರೆ...
--ಶ್ರೀ
ಉ: ನವರಾತ್ರಿಯ ಏಳನೇ ದಿನ
ಹೌದು - ಆದರೆ ಸೋದರ ಸೊಸೆ ಹೇಗೆ ಸರಿಹೋಗುತ್ತೋ ತಿಳಿಯುತ್ತಿಲ್ಲ. ಸೊಸೆ ಎನ್ನುವುದೇ ಸರಿಹೋಗುತ್ತಲ್ಲವೇ?
ಮುತ್ತುಸ್ವಾಮಿ ದೀಕ್ಷಿತರು, ತಮ್ಮ ಕಲಾವತಿ ರಾಗದ ಕಲಾವತಿ ಕಮಲಾಸನ ಯುವತಿ ಎಂಬ ರಚನೆಯಲ್ಲಿ, ಸರಸ್ವತಿಯನ್ನು ’ಮುರಾರಿ ಸ್ನುಶಾ’ - ವಿಷ್ಣುವಿನ ಸೊಸೆ ಎಂದು ಕರೆದದ್ದು ನೆನಪಿಗೆ ಬಂತು.
-ಹಂಸಾನಂದಿ