ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಅಂತರ್ಜಾಲ ಎಲ್ಲರಿಗೂ ಗೊತ್ತಿರುವಂತೆ ತೀರಾ ಆಧುನಿಕ ಮಾಧ್ಯಮ . ಆದರೆ ದಿನದಿಂದ ದಿನಕ್ಕೆ ಅದು ಪಡೆದುಕೊಳ್ಳುತ್ತಿರುವ ಸಾಹಿತ್ಯಕ ಆಯಾಮವಂತೂ ಆಶ್ಚರ್ಯಪಡುವಂತಿದೆ . ಸಾಹಿತ್ಯ ಪ್ರಪಂಚವನ್ನು ಸಾರ್ವತ್ರಿಕ ಮತ್ತು ಮುಕ್ತವಾಗಿಸುವಲ್ಲಿ ಅಂತರ್ಜಾಲದ ಸಾಧ್ಯತೆಗಳು ಹೊಸ ಜಗತ್ತನ್ನೇ ತೆರೆದಿವೆ . ವ್ಯಕ್ತಿಯೊಬ್ಬನ ಅನುಭವ ಅಭಿಪ್ರಾಯಗಳೇ ಸಾಹಿತ್ಯದ ಪರಿ ಭಾಷೆಯಲ್ಲಿ ವ್ಯಕ್ತವಾಗುತ್ತವೆ ಎನ್ನುವುದಾದರೆ ಪ್ರತಿಯೊಬ್ಬ ಸಾಮಾನ್ಯನಲ್ಲೂ ಒಬ್ಬ ಸಾಹಿತಿ ಇದ್ದೇ ಇರುತ್ತಾನೆ . ಅವನು ಪ್ರಕಟಗೊಳ್ಳಲು ಸಾರ್ವತ್ರಿಕ ಆಯಾಮ ದೊರೆತಾಗ ಏನಾಗಬಲ್ಲದೆಂಬುದೇ ಪ್ರಚಲಿತ ಅಂತರ್ಜಾಲದ ವಿಸ್ಮಯಪೂರ್ವಕ ದರ್ಶನ .
ಕನ್ನಡದ ಮಟ್ಟಿಗೆ ’ಸಂಪದ’ ತೀರಾ ಮುಕ್ತವಾದ ಅಷ್ಟೇ ಆರೋಗ್ಯಕರ ವ್ಯವಸ್ಥೆಯಿಂದ ಕೂಡಿದ ತಾಣ . ಕನ್ನಡದಲ್ಲಿ ಇಷ್ಟು ಮುಕ್ತ ವ್ಯವಸ್ಥೆ ಇರುವ ತಾಣ ಬೇರೆ ಯಾವುದಾದರೂ ಇದೆಯೋ ಇಲ್ಲವೋ ಸದ್ಯಕ್ಕೆ ನನಗೆ ಗೊತ್ತಿಲ್ಲ . ಆದರೆ ಸಂಪದದ ಈ ಮುಕ್ತತೆಯ ಗುಣ ಎಲ್ಲಿಯೂ ದುರುಪಯೋಗವಾದ ಉದಾಹರಣೆಗಳು ನನಗೆ ಕಂಡು ಬಂದಿಲ್ಲ . ಕೆಲವು ಕನ್ನಡ ತಾಣಗಳಲ್ಲಿ ಬರುವ ಪ್ರತಿಕ್ರಿಯೆಗಳ ಭಾಷೆ ಮತ್ತು ಮನೋಭಾವಗಳ ಅಸಹ್ಯ ಪ್ರದರ್ಶನಗಳನ್ನು ಕಂಡು ಮನಸ್ಸು ಆಘಾತಗೊಳ್ಳುವ ವೇಳೆಗೆ , ಇಷ್ಟೊಂದು ಮುಕ್ತತೆಯ ಸಂಪದದಲ್ಲಿ ಬರೆಯುವವರು ತಾವೇ ಹೇರಿಕೊಂಡಿರುವ ಸ್ವಯಂ ಶಿಸ್ತು ಮತ್ತು ಸಂಯಮ ತುಂಬಾ ಆಶ್ಚರ್ಯವನ್ನೂ , ಸಂತಸವನ್ನೂ ತರುತ್ತದೆ .
ಇಲ್ಲಿ ಎಲ್ಲ ಬಗೆಯ ಬರಹಗಾರರಿದ್ದಾರೆ . ಯುವ ಮನಸ್ಸಿನ ತುಂಟತನವಿದೆ ಆದರೆ ಅಶ್ಲೀಲವಿಲ್ಲ . ಸಾಮಾನ್ಯ ಬರಹಗಾರರಿಂದ ಪರಿಣಿತರವರೆಗೂ ಇದ್ದಾರೆ .ಎಡವುತ್ತಾ ನಡೆಯುವ ಹೊಸಬರಿದ್ದಾರೆ . ಯಾವ ಮಗುವೂ ಎಡವುತ್ತಲೇ ನಡೆಯುವುದನ್ನು ಕಲಿಯುತ್ತದೆ ; ಯಾರಿಗೆ ಗೊತ್ತು ? ಇಂದು ಎಡವುತ್ತಾ ಬೀಳುತ್ತಾ ನಡೆಯುವ ಮಗು , ನಾಳಿನ ಅದ್ಭುತ ಓಟಗಾರನಾಗಿಬಿಡಬಹುದು !
ನಿರ್ವಾಹಕರ ನಿಯಂತ್ರಣದಲ್ಲಿಯೇ ಲೇಖನಗಳು ಪ್ರಕಟವಾಗುವ ಅನೇಕ ತಾಣಗಳಲ್ಲಿ ಕಂಡುಬರುವ ಲೇಖನಗಳ ನೀರಸತೆ , ಏಕತಾನತೆ , ಆತ್ಮರತಿಗಳನ್ನು ಕಂಡ ಮೇಲೆ ಮುಕ್ತ ತಾಣ ಎಷ್ಟೊಂದು ಉಪಯುಕ್ತ ಎನ್ನುವುದು ಮನವರಿಕೆಯಾಗದಿರದು . ಮುಕ್ತ ತಾಣದಲ್ಲಿ ಲೇಖನವೊಂದು ತನ್ನೆಲ್ಲಾ ಅಭಿಪ್ರಾಯಗಳೊಡನೆ ಪ್ರಕಟವಾದ ತಕ್ಷಣ , ಅಲ್ಲಿಯೇ ಪ್ರತಿಕ್ರಿಯೆಗಳ ರೂಪದಲ್ಲಿ ಪರ ವಿರೋಧಗಳು ಪ್ರಕಟವಾಗತೊಡಗುತ್ತವೆ .ಇದು ಲೇಖಕನೊಬ್ಬನಿಗೆ ಬಲು ದೊಡ್ಡ ಲಾಭ , ಅವನ ಮನೋಭಾವದ ಓರೆ ಕೋರೆಗಳನ್ನೂ , ವಿಷಯವೊಂದರ ವಿವಿಧ ಮುಖಗಳನ್ನೂ ಪ್ರತಿಕ್ರಿಯೆಗಳು ಲೇಖಕನೆದುರೇ ವಿಶದವಾಗಿ ಬಿಚ್ಚಿಡತೊಡಗುತ್ತವೆ . ಇದು ಲೇಖಕನನ್ನು ಜಾಗೃತಗೊಳಿಸುವುದಲ್ಲದೆ ಅವನನ್ನೇ ಅವನು ಪುನರ್ವಿಮರ್ಶಿಸಿಕೊಳ್ಳುವ ; ವಿಶ್ಲೇಷಿಸಿಕೊಳ್ಳುವ ಅವಕಾಶಗಳನ್ನು ತೆರೆಯುತ್ತದೆ . ಆದರೆ ಪರ ವಿರೋಧ ಎರಡನ್ನೂ ಮಂದಹಾಸದಿಂದ ಸ್ವೀಕರಿಸುವ ಸ್ವಭಾವ ಲೇಖಕನಿಗಿದ್ದರೆ ಅವನು ಬೆಳೆಯಲು ಅದೇ ಸಹಕಾರಿ .
ಇನ್ನೂ ಬರೆಯಬಹುದು ಸದ್ಯಕ್ಕೆ ಇಷ್ಟು ಸಾಕು .

- csomsekraiah ರವರ ಬ್ಲಾಗ್
- Login or register to post comments
- 371 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಹೌದು ಸಂಪದದಂತಹ ತಾಣವಿರುವುದು ಕನ್ನಡಿಗರ ಅದೃಷ್ಟ. ಎಚ್ ಪಿ ನಾಡಿಗ್ ಅವರಿಗೆ ಅಭಿನಂದನೆಗಳು.
*ಅಶೋಕ್
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಹೌದು, ಮಲ್ಲೇಶ್ವರದಿಂದ ಮಾರತ್ತಹಳ್ಳಿಗೆ ವಲಸೆ ಬಂದು ಕನ್ನಡಿಗರಲ್ಲದವರೊಂದಿಗೆ ದಿನಕಳೆಯುವ ನಮ್ಮಂತವರಿಗೆ ’ಸಂಪದ’ ಒಂದು ಒಳ್ಳೆಯ ಚರ್ಚಾಕೂಟ. ಮೊದಲ ಸಲ ರೈಲು ಹತ್ತಿದೋರು, ಸಖತ್ತಾಗಿ ರೈಲು ಓಡಿಸೋರು, ಆಕಾಶ ತೋರಿಸೋರು, ಸಂಗೀತ ಗುನುಗೋರು, ನಂದೇ ಪುರಾಣ ಎಲ್ರೂ ಕೇಳಿ ಅನ್ನೋರು, ಇಂಗಲ್ ಇಂಗೇ ಮಾತಾಡಿ ಅನ್ನೋರು, ದೇಶ ಸುತ್ಸೋರು, ಕೋಶ ಓದ್ಸೋರು, ಒಳ್ಳೇ ಲೇಖನಕ್ಕೂ ಮಗುಮ್ಮಾಗಿರೋರು, ಒಂಥರಾ ಇರೋವಕ್ಕೆ ಜೊಲ್ಲು ಸುರಿಸೋವ್ರು, ಮುಂಗಾಣ್ಕೆಯೋರು, ಮುಂಗೋಪದವರು, ಜ್ಞಾನಿಗಳು, ಬುದ್ಧಿಜೀವಿಗಳು, ಅಬ್ಬೇಪಾರಿಗಳು ಎಲ್ರೂ ಇಲ್ಲಿ ಬತ್ತಾರೆ. ಅಬ್ಬ ಎಷ್ಟೊಂದು ವಿಷಯಗಳು ಇಲ್ಲಿ ಬಂದೋಯ್ತವೆ ಅನ್ತೀರಾ! ಸಂಪದದಲ್ಲಿ ಎಲ್ಲಾ ಸಿಗುತ್ತೆ. ಅಪ್ರಬುದ್ಧತೆಗೂ ಸಿಕ್ಕಾಪಟ್ಟೆ ಜಾಗ ಇದೆ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಕೊಂಕಾಡೋರೂ ಇದಾರೆ ಅನ್ನಿ.. ಅದು ಒಬ್ಬೊಬ್ಬರಿಗೆ ಒಂದೊಂದರ ಬಗ್ಗೆ ಸರಿ ಬರಲ್ಲ, ಕೆಲವರಿಗೆ ಸಕ್ಕದ ಅಂದರೆ ಒಗ್ಗಲ್ಲ, ಕೆಲವರಿಗೆ ಅಚ್ಚಕನ್ನಡ ಮೈಗಾಗುವದಿಲ್ಲ, ಕೆಲವರಿಗೆ ಕೆಲವರ ಪಾಪೆ ನೋಡಿದರೆ ಆಗಲ್ಲ, ಕೆಲವರಿಗೆ ಕೆಲವರ ಬರಹ ಇಸ್ಟ ಆಗಲ್ಲ, ಅವರು ಏನು ಬರೆದರೂ ಅದಕ್ಕೊಂದು ಕೊಂಕು, ಒಬ್ಬೊಬ್ಬರ ಕೊಂಕಿನ ಕಡುತನ(concentration) ಬೇರೆ ಬೇರೆ.

-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಸಮಾಧಾನ ಮಾಡ್ಕೊಳ್ಳಿ ಗೌಡ್ರೇ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಅಸಮಾಧಾನ ಮೊದಲು ನಿಮ್ಮದ್ದಲ್ವ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಛೆ, ನನ್ನ ಅಸಮಾಧಾನ ಏನೂ ಇಲ್ಲಪ್ಪ. ನನ್ನದು ನೇರ ಮಾತು ಅಷ್ಟೇ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ನಿಜ ಸರ್. ಸಂಪದ ನಿಜಕ್ಕೂ ಮುಕ್ತ ತಾಣ. ನೀವು ಹೇಳಿದಂತೆ ಇಲ್ಲಿಯ ಸದಸ್ಯರು ಸ್ವಯಂ ನಿಯಂತ್ರಣ ಹೇರಿಕೊಂಡೇ ಬರೆಯುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಅಶೋಕಕುಮಾರ್ ಹೇಳಿದಂತೆ, ಹರಿಪ್ರಸಾದ ನಾಡಿಗ್ ಅವರ ಈ ಕೆಲಸ ಅಭಿನಂದನಾರ್ಹ.
ಯಾವುದೇ ಅಭಿವ್ಯಕ್ತಿ ಬಾಹ್ಯ ನಿಯಂತ್ರಣಕ್ಕೆ ಒಳಪಟ್ಟರೆ ಅದರ ಸತ್ವ ಉಡುಗುತ್ತದೆ. ಕನ್ನಡದ ಬಹುತೇಕ ಇತರ ತಾಣಗಳಲ್ಲಿ ಈ ದೋಷವಿದೆ. ಅಲ್ಲಿ ಬರೆದಿದ್ದನ್ನು, ಬೇಕೆನಿಸಿದರೆ ಓದಬಹುದಷ್ಟೇ. ಆದರೆ, ಪ್ರತಿಕ್ರಿಯೆ ನೀಡಲು ಹೋದರೆ ನೂರೆಂಟು ಅಡಚಣೆಗಳು ಎದುರಾಗುತ್ತವೆ. ಪ್ರತಿಕ್ರಿಯೆ ತಕ್ಷಣ ಪ್ರಕಟವಾಗುವುದಿಲ್ಲ. ಅದನ್ನು ತಿರುಚಲಾಗುತ್ತದೆ. ಭಾಷೆ ಅಷ್ಟೇ ಅಲ್ಲ, ಭಾವ ಕೂಡ ಬದಲಾಗಿ ಅಚ್ಚಾಗುತ್ತದೆ. ಒಂಚೂರು ಟೀಕಿಸಿದರೂ ಅದು ಪ್ರಕಟವಾಗಲಾರದು.
ಈ ಕಾರಣಕ್ಕಾಗಿಯೇ ಸಂಪದ ತುಂಬ ಜನರಿಗೆ ಇಷ್ಟವಾಗಿರುವುದು. ದಂತಗೋಪುರದಲ್ಲಿ ಕೂತ ಕೆಲವರಿಗೆ ಇಂಥ ಮುಕ್ತ ವಾತಾವರಣ ಇಷ್ಟವಾಗಲಿಕ್ಕಿಲ್ಲ. ಹಾಗಂತ, ಅವರ ಸಲುವಾಗಿ ಸಂಪದದ ಮೂಲ ಆಶಯಗಳು ಬದಲಾಗಬೇಕಿಲ್ಲ. ಹೀಗಿರುವುದೇ ಚೆನ್ನ. ಹೀಗಿದ್ದರೇ ಉತ್ತಮ.
ಸಕಾಲಿಕ ಬರಹ. ಧನ್ಯವಾದಗಳು.
- ಚಾಮರಾಜ ಸವಡಿ
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಈ ಪ್ರತಿಕ್ರಿಯೆಗಳೇ ಹೇಳುತ್ತವೆ ಸಂಪದದ ಉಪಯುಕ್ತತೆಯನ್ನು , ತಿಳಿ ಹಾಸ್ಯವಾಗಿ ಬರೆದ ಸಿಮರಿಯಾ ಜೋಸೆಫ್ ರ ಪ್ರತಿಕ್ರಿಯೆ ಇಷ್ಟವಾಯಿತು . ಪ್ರತಿಕ್ರಿಯಿಸಿದ ಅಶೋಕ್ ಕುಮಾರ್, ಮನಹ್ ಪಠಲ , ಸುನಿಲ್ ಜಯಪ್ರಕಾಶ್ , ಸಂಗನಗೌಡ , ಚಾಮರಾಜ್ ಎಲ್ಲರಿಗೂ ನನ್ನಿ
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಸಂಪದದಲ್ಲಿ ಹಲವಾರು ಬಾರಿ ಕಾಮೆಂಟ್ ಗಳು ಮಾಯಾ ಆಗೋದನ್ನ ಗಮನಿಸಿದೀನಿ...
ಇದು ಸರ್ವರ್ problem'ಓ ಅಥವಾ ನಿರ್ವಾಹಕರು ತೆಗೀತಾರೋ ಗೊತ್ತಿಲ್ಲ...
--ಶ್ರೀ
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ಹೌದು, ಬಹುಶ: ಬೇಕೆಂದೇ ತೆಗೆಯಲಾಗುತ್ತದೆ- ನನ್ನ ಅನುಭವಕ್ಕೂ ಬಂದಿದೆ. ಹಾಗಾಗಿರುವುದು ಬಹು ಅಪರೂಪ.
ನಿರ್ವಾಹಕರ ಗಮನಕ್ಕೆ ತನ್ನಿ ಎನ್ನುವ ಸೌಲಭ್ಯ ಇದೆ. ಇದನ್ನು ಯಾರಾದರೂ ಬಳಸಿದಾಗ ನಿರ್ವಾಹಕರು ಕಿತ್ತೆಸೆಯಲೂ ಬಹುದು.
*ಅಶೋಕ್
ಉ: ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ
ನಿಜ. ಕೆಲವೊಮ್ಮೆ ತೀರ ತೆಗೆದುಹಾಕಲೇಬೇಕಾದ ಕಾಮೆಂಟುಗಳನ್ನು ತೆಗೆದುಹಾಕಬೇಕಾಗುವುದು. ಜೊತೆಗೆ ಇನ್ನೂ ಪ್ರಿಂಟ್ ಮೀಡಿಯದಿಂದ ಅಂತರ್ಜಾಲಕ್ಕೆ transition ಹೊಂದುತ್ತಿರುವ ಸಂವೇದನೆ ಹಲವರಲ್ಲಿ ಇನ್ನೂ ಇರುವುದರಿಂದ ಕೆಲವೊಮ್ಮೆ ಕೆಲವು ಪ್ರತಿಕ್ರಿಯೆಗಳು ಎಲ್ಲರಿಗೂ ಸರಿಹೋಗುವುದಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa