ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಪೆಟ್ರೋಲ್ ಬೆಲೆಯೇರಿಕೆ ವಿರುದ್ಧ ತೀವ್ರ ಪ್ರತಿಭಟನೆ
(ನಗಾರಿ ತನಿಖಾ ಬ್ಯೂರೋ)
ರೋಟಿ, ಕಪಡಾ ಔರ್ ಮಕಾನ್ ಜೊತೆಗೆ ಇನ್ನೊಂದು ಮೂಲಭೂತ ಆವಶ್ಯಕತೆಯಾಗಿರುವ ಪೆಟ್ರೋಲಿನ ಬೆಲೆ ಜ್ವರದ ಹಾಗೆ ಏರುತ್ತಿರುವುದನ್ನು ನಾಡಿನ ಸಮಸ್ತ ಯುವತಿಯರು ಒಕ್ಕೊರಲಿನಿಂದ ಟೀಕಿಸಿದ್ದು, ನಿಧಾನಿ ಪ್ರಧಾನಿ ಹಾಗೂ ಪಂಚೆದಂಬರಂ ಬೆಲೆ ಇಳಿಸುವಲ್ಲಿ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ವ್ಯಾಪಕ ಪ್ರತಿಭಟನೆಯನ್ನು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಮಿಸ್ ಮೊನಿಶಾ,“ನಮ್ಮ ಪ್ರೊಟೆಸ್ಟು ಆ ಲೆಫ್ಟಿಸ್ಟ್ಗಳ ಹಾಗೆ ಇರೋದಿಲ್ಲ. ಅವರದೇ ಗೌರ್ನಮೆಂಟು ಇಟ್ಕೊಂಡು ಪಾರ್ಲಿಮೆಂಟಿನ ಒಳಗೆ ರೇಟು ರೈಸ್ ಮಾಡೋಕೆ ಓಕೆ ಮಾಡಿ ಆಮೇಲೆ ಔಟ್ ಸೈಡ್ ಬಂದು ಪ್ರೊಟೆಸ್ಟ್ ಮಾಡುವುದು ವೆರಿ ಡರ್ಟಿ. ನಾವು ಹಾಗೆ ಪ್ರೊಟೆಸ್ಟ್ ಮಾಡೋದಿಲ್ಲ.” ಎಂದು ಹೇಳಿದ್ದು ಕೆಂಪು ಪಕ್ಷದವರ ಕಣ್ಣು ಕೆಂಪು ಮಾಡಿದ್ದು ವರದಿಯಾಗಿದೆ.
ಈ ನಡುವೆ ನಿರುದ್ಯೋಗಿ ಟ್ಯಾಬಲಾಯ್ಡ್ ಒಂದು ಸ್ಫೋಟಕ ಸತ್ಯವನ್ನು ಬಯಲಿಗೆಳೆದು ಬತ್ತಲುಗೊಳಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸುವುದರಲ್ಲಿ ಯಶಸ್ವಿಯಾಗಿದೆ. ಪ್ರತಿಭಟನೆ ಮಾಡಲು ತುದಿಗಾಲ ಮೇಲೆ ನಿಂತಿರುವ ಯುವತಿಯರು ಹಾಗೂ ಟೀನೇಜ್ ಹುಡುಗಿಯರ್ಯಾರಿಗೂ ಪೆಟ್ರೋಲಿನಿಂದ ಓಡಿಸಬಹುದಾದ ವಾಹನ ಓಡಿಸಲು ಬರುವುದಿಲ್ಲ ಹಾಗೂ ಅವರ ಬಳಿ ಅಂಥ ವಾಹನಗಳ್ಯಾವೂ ಇಲ್ಲ. ಹಾಗಾದರೆ ಇವರು ಪ್ರತಿಭಟನೆ ಮಾಡುತ್ತಿರುವುದು ಯಾವುದಕ್ಕೆ? ಎಂದು ಪ್ರಶ್ನಿಸಿ ಪ್ರಶ್ನಾರ್ಥಕ ಚಿಹ್ನೆಯ ಪಕ್ಕ ನಾಲ್ಕು ಆಶ್ಚರ್ಯ ಸೂಚಕ ಚಿಹ್ನೆಯನ್ನು ಇಟ್ಟಿತ್ತು. ನಾಲ್ಕು ಆಶ್ಚರ್ಯ ಸೂಚಕ ಚಿಹ್ನೆಗಳ ಮುಲಾಜಿಗಾದರೂ ಆಶ್ಚರ್ಯ ಪಡುವುದು ತಮ್ಮ ಧರ್ಮ ಎಂದು ಭಾವಿಸಿದ ಓದುಗರು ಮೂಗಿನ ಮೇಲೆ ಬೆರಳಿಟ್ಟರು.
ಈ ವರದಿಯ ಬೆನ್ನುಹತ್ತಲು ನಿರ್ಧರಿಸಿ ನಗೆ ಸಾಮ್ರಾಟರು ಹಾಗೂ ಅವರ ಚೇಲ ಕುಚೇಲ ಸುದ್ದಿ ‘ಶಿಕಾರಿ’ಗೆ ಹೊರಟರು. ಮೊದಮೊದಲು ನಗೆ ಸಾಮ್ರಾಟರು ಆ ಯುವತಿಯರು ಪರೋಪಕಾರದ ಬುದ್ಧಿಯಿಂದಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ತಮ್ಮ ಸಹಚರರಾದ ಯುವಕರಿಗೆ ತೊಂದರೆಯಾಗಬಾರದು, ವಾಹನಗಳಲ್ಲಿ ಓಡಾಡುವ ಅಸಂಖ್ಯಾತ ಮಧ್ಯವರ್ಗದವರಿಗೆ ಹೊರೆಯಾಗಬಾರದು ಎಂಬ ಕಳಕಳಿಯನ್ನು ಹೊಂದಿದ್ದಾರೆ ಎಂಬ ನಂಬಿಕೆಯಿತ್ತು. ಅದಕ್ಕಾಗಿ ಆ ಹುಡುಗಿಯರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನೂ ಯಾರೂ ಇಲ್ಲದ ಜಾಗಗಳಲ್ಲಿ ಹೇಳಿದ್ದರು.
ಆದರೆ ತನಿಖೆ ಮುಗಿಸಿಕೊಂಡು ಬಂದ ಸಾಮ್ರಾಟರು ಬೆವೆತು ಹೋಗಿದ್ದ ಪರಿಯನ್ನು ಕಂಡು ನಗೆ ನಗಾರಿಯ ಇಡೀ ಕಛೇರಿಯೇ ದಿಗಿಲಾಯಿತು. ಸದ್ಯ ತಾವು ಆ ಹುಡುಗಿಯರನ್ನು ಯಾರೂ ಇಲ್ಲದ ಜಾಗದಲ್ಲಿ ಹೊಗಳಿದ್ದರಿಂದ ಬಚಾವಾದೆ ಎಂದುಕೊಂಡು ತಮ್ಮ ಅದೃಷ್ಟವನ್ನು ನೆನೆದರು. ಪೆಟ್ರೋಲು ರೇಟು ಐದು ಹತ್ತು ರೂಪಾಯಿಗಳಷ್ಟು ಜಾಸ್ತಿಯಾಗುತ್ತಿರುವುದರಿಂದಾಗಿ ಹುಡುಗರಿಗೆ ಲೇಡಿಸ್ ಕಾಲೇಜು, ಹಾಸ್ಟೆಲ್ಲುಗಳ ಬಳಿ ಬೀಟ್ ಹಾಕಲು ಭಾರೀ ತೊಂದರೆಯಾಗುತ್ತಿದೆ. ಅಲ್ಲದೆ ಗರ್ಲ್ ಫ್ರೆಂಡುಗಳನ್ನು ತಮ್ಮ ಸ್ವಂತ ಇಲ್ಲವೆ ಗೆಳೆಯರಿಂದ ಕಸಿದು ತಂದ ಬೈಕುಗಳ ಮೇಲೆ ಕೂರಿಸಿಕೊಂಡು ಲೋಕಸಂಚಾರ ಮಾಡಿಸುತ್ತಿದ್ದ ಹುಡುಗರೆಲ್ಲಾ ಈಗ ರಸ್ತೆಯ ಕೊನೆಯಲ್ಲಿ ಗರ್ಲ್ ಫ್ರೆಂಡ್ ಕಂಡರೆ ಸಾಕು ಹೆಲ್ಮೆಟ್ಟಿಲ್ಲದ ಆಸಾಮಿ ಟ್ರಾಫಿಕ್ ಪೋಲಿಸ್ ಮಾಮನನ್ನು ಕಂಡಾಗ ಬೈಕು ಪಕ್ಕಕ್ಕೆ ಹಾಕಿ ವಾಕಿಂಗ್ ಮಾಡುತ್ತಾ ಬರುವಂತೆ ಬೈಕು, ಸ್ಕೂಟರುಗಳನ್ನು ರಸ್ತೆಯ ಪಕ್ಕಕ್ಕೆ ದಬ್ಬಿ ನಡೆದು ಬಂದುಬಿಡುತ್ತಿದ್ದಾರೆ.
ಹತ್ತು ಮೀಟರು ದೂರ ಹೋಗಬೇಕಾದರೂ ಬೈಕು ತರುತ್ತಿದ್ದ ಹುಡುಗರೆಲ್ಲಾ ನಾಲ್ಕು ಮೈಲಿ ಬೇಕಾದರೆ ಕಾಲಲ್ಲೇ ಸುತ್ತಿಯೇನು ಎಂದು ಆಲೋಚಿಸುತ್ತಿರುವುದರ ಹಿಂದೆ ಪೆಟ್ರೋಲು ಬೆಲೆ ಹೆಚ್ಚಳ ನೇರವಾಗಿ ಕಾರಣವಾಗಿದೆ. ಹೀಗೆ ಹುಡುಗರು ನಮ್ಮನ್ನು ತಮ್ಮ ಬೈಕುಗಳಲ್ಲಿ ಕೂರಿಸಿಕೊಂಡು ತಿರುಗಾಡಿಸದೆ ನಮ್ಮ ಕಾಲನ್ನೇ ಬಳಸಿ ನಾವು ನಡೆಯುವಂತೆ ಮಾಡುತ್ತಿರುವುದರಿಂದ ನಮ್ಮ ದೇಹದಿಂದ ಹೆಚ್ಚು ಹೆಚ್ಚು ಕ್ಯಾಲರೀಸ್ ಖರ್ಚಾಗುತ್ತಿದೆ. ಹೀಗೆ ಖರ್ಚಾಗಿಹೋದ ಕ್ಯಾಲರಿಗಳನ್ನು ತುಂಬಿಕೊಳ್ಳುವುದಕ್ಕಾಗಿ ನಾವು ಹೆಚ್ಚು ಹೆಚ್ಚು ತಿನ್ನಲು ಶುರುಮಾಡಿ ನಮ್ಮ ಡಯಟ್ ನೇಮ ನಿಷ್ಠೆ ತಪ್ಪಿಹೋಗಿದೆ. ಹೀಗೇ ಆದರೆ ನಾವು ಭವಿಷ್ಯದ ‘ವಿಶ್ವ ಸುಂದರಿ’ಯರಾಗೋದು ಹೇಗೆ? ನಾವು ವಿಶ್ವ ಸುಂದರಿಯರಾಗದಿದ್ದರೆ ದೇಶದ ಹೆಸರು ಹೇಗೆ ಬೆಳಗೀತು? ದೇಶ ಹೇಗೆ ಉದ್ಧಾರವಾದೀತು? ನಮ್ಮ ದೇಶದ ಲಕ್ಷಾಂತರ ಮಂದಿ ಬಡವರು, ದುಃಖಿಗಳ ಏಳಿಗಾದರೂ ನಾವು ವಿಶ್ವ ಸುಂದರಿಯರಾಗಬೇಕು...
ನಗೆ ಸಾಮ್ರಾಟರು ಆಗಲೇ ಅಲ್ಲಿಂದ ಕಾಲ್ಕಿತ್ತಿದ್ದರು!

- Login or register to post comments
- 238 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: