ದಾವೂದ್ ಇಬ್ರಾಹಿಂ ಬಂಧನ......ನಂತರ
ಪಾಕಿಸ್ಥಾನದ ನಾಯಕರು ತಲೆ ರೋಸಿ ಹೋಗಿದ್ದರು ,ರಾಷ್ಟ್ರದಲ್ಲಿ ದಿನ ನಿತ್ಯವೆನ್ನುವಂತೆ ಬಾಂಬು ದಾಳಿಗಳು , ಮಾದಕ ದ್ರವ್ಯಗಳ , ಆಯುಧಗಳ , ಅಳತೆ ಇಲ್ಲದ ಕಳ್ಳ ಸಾಗಾಣಿಕೆ ಇದು ಹೀಗೆಯೇ ಮುಂದುವರಿದರೆ ರಾಷ್ಟ್ರವೂ ಉಳಿಯುವುದಿಲ್ಲ ,ಪ್ರಪಂಚದ ದೃಷ್ಟಿಯಲ್ಲಿ ದೇಶದ ಘನತೆಯೂ ಮಣ್ಣೂಗೂಡುತ್ತದೆ , ಎಂಬುದು ಅವರಿಗೆ ಸ್ಪಷ್ಟವಾಯಿತು .
ಇದೆಲ್ಲದರ ಮೂಲವನ್ನು ಪತ್ತೆ ಹಚ್ಚಲು ಅವರು ಒಂದು ರಹಸ್ಯ ತನಿಖೆ ಆರಂಭಿಸಿದರು ,ಫಲಿತಾಂಶ ಅವರನ್ನು ದಂಗುಬಡಿಸಿತ್ತು ,ಈ ವಿದ್ರೋಹಿ ಚಟುವಟಿಕೆಗಳಲ್ಲಿ ಪಾಕೀಸ್ಥಾನೀ ರಾಷ್ಟ್ರೀಯರ ಸಂಖ್ಯೆ ತುಂಬಾ ಕಡಿಮೆ ಇತ್ತು . ಬಹುತೇಕರು ಪಾಕೀಸ್ಥಾನದಲ್ಲಿ ಆಶ್ರಯ ಪಡೆದಿದ್ದ ವಿದೇಶೀಯರೇ ಆಗಿದ್ದರು .ಅದರಲ್ಲೂ ದಾವೂದ್ ಇಬ್ರಾಹಿಂ ಎಂಬ ಭಾರತೀಯ ಮೂಲದ ವ್ಯಕ್ತಿಯದೇ ಕಾನೂನು ಬಾಹಿರ ಚಟುವಟಿಕೆಗಳ ಸಿಂಹ ಪಾಲು ಇರುವುದು ಅವರಿಗೆ ಮನವರಿಕೆಯಾಯಿತು .
ಇದನ್ನು ಪರಿಹರಿಸಿಕೊಳ್ಳಲು ಅವರು ಧೃಢ ನಿರ್ಧಾರ ಮಾಡಿದರು ದಾವೂದ್ ನನ್ನು ಬಂಧಿಸಿ ಜೈಲಿನಲ್ಲಿಟ್ಟರು .ಮಾಮೂಲಿನಂತೆ ಅಲ್ಲಲ್ಲಿ ಗಲಭೆಕೋರರ , ಗೂಂಡಾಗಳ ಗಲಾಟೆಗಳು ನಡೆದವಾದರೂ ಸರ್ಕಾರ ಅದಕ್ಕೆ ಸೊಪ್ಪು ಹಾಕಲಿಲ್ಲ . ಅವರಲ್ಲಿ ಬುದ್ದಿವಂತ ಮುತ್ಸದ್ದಿಯೊಬ್ಬ , ಈ ತಲೆ ನೋವನ್ನು ತಾವು ಅನುಭವಿಸುವುದಕ್ಕಿಂತಾ ಭಾರತಕ್ಕೇ ವರ್ಗಾಯಿಸುವುದು ಬುದ್ದಿವಂತಿಕೆ ಎಂದು ಸಲಹೆ ನೀಡಿದ .
’ಹೀಗೆ ಹೀಗೆ ದಾವೂದ್ ನನ್ನು ಬಂಧಿಸಿದ್ದೇವೆ , ಕೋರ್ಟಿಗೆ ಹಾಜರು ಪಡಿಸಲು ನಮ್ಮ ನೆಲದಲ್ಲಿ ಅವನ ಅಪರಾಧಗಳು ಕಾಣಿಸುತ್ತಿಲ್ಲ ,ಭಾರತದಲ್ಲಿ ಅವನ ವಿರುದ್ದ ಉಗ್ರ ಸ್ವರೂಪದ ಅಪರಾಧದ ದಾಖಲೆಗಳಿವೆಯೆಂದು ತಿಳಿದು ಬಂದಿದೆ, ಭಾರತ ಕೋರುವುದಾದರೆ ಭಾರತಕ್ಕೆ ಅವನನ್ನು ಹಸ್ತಾಂತರಿಸುತ್ತೇವೆ ’ಎಂಬ ಅರ್ಥದ ಸಂದೇಶ ಭಾರತೀಯ ವಿದೇಶಾಂಗ ಇಲಾಖೆಗೆ ಬಂದು ತಲುಪಿದಾಗ , ಇಡೀ ದೇಶ ಕುಣಿದು ಕುಪ್ಪಳೀಸುವುದೊಂದೇ ಬಾಕಿ ಇತ್ತು .ನೆರೆಯ ರಾಷ್ಟ್ರಕ್ಕೆ ಇಂತಹ ಸದ್ಬುದ್ದಿಯನ್ನು ಕೊಟ್ಟ ಆ ಭಗವಂತನನ್ನು ಎಷ್ಟು ಕೊಂಡಾಡಿದರೂ ತೀರದಾಗಿತ್ತು .
ಸತತ ಸಂಪರ್ಕದ ನಂತರ ದಾವೂದನ ಹಸ್ತಾಂತರದ ದಿನ ನಿಗದಿಯಾಗಿಯೇ ಬಿಟ್ಟಿತು , ಅವನನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತಂದ ಪಾಕಿಸ್ಥಾನದ ಭದ್ರತಾ ಅಧಿಕಾರಿಗಳು , ವಿದ್ಯುಕ್ತವಾಗಿ ಅವನನ್ನು ಭಾರತೀಯ ಅಪರಾಧ ತನಿಖಾ ದಳಕ್ಕೆ ಹಸ್ತಾಂತರ ಮಾಡಿ, ಅವನನ್ನು ಒಪ್ಪಿಸಿದ ದಾಖಲೆಗಳಿಗೆ ಸಹಿ ಪಡೆದು ಹೋದರು .
ಅತ್ಯಂತ ಬಿಗಿ ಭದ್ರತೆಯೊಡನೆ ಅವನನ್ನು ದೆಹಲಿಯ ಜೈಲಿನಲ್ಲಿಡಲಾಯಿತು . ಮಹಾ ರಾಷ್ಟ್ರ ಪೋಲೀಸರು ಮುಂಬಯಿಯಲ್ಲಿಯೇ ಅವನ ಪಾತಕ ಜಗತ್ತು ವಿಸ್ತೃತವಾಗಿರುವುದರಿಂದ ಮುಂಬೈ ಪೋಲೀಸರ ವಶಕ್ಕೆ ಅವನನ್ನು ನೀಡಲು ಕೋರಿಕೆ ಸಲ್ಲಿಸಿದರು . ನಂತರ ಅನೇಕ ರಾಜ್ಯಗಳು ತನಿಖೆಗಾಗಿ ಅವನನ್ನು ವಶಕ್ಕೆ ಪಡೆಯಲು ಅರ್ಜಿಗಳನ್ನು ಸಲ್ಲಿಸಿದವು . ಅವನ ಬಂಧನ ಮಾನವ ಹಕ್ಕುಗಳಿಗನುಗುಣವಾಗಿ ನಡೆದಿದೆಯೇ? ಜೈಲಿನಲ್ಲಿ ಅವನನ್ನು ನಡೆಸಿಕೊಳ್ಳುತ್ತಿರುವ ರೀತಿ ಸಮರ್ಪಕವಾಗಿದೆಯೇ ? ಎಂದೆಲ್ಲಾ ಭಾರತೀಯ ಒಳ್ಳೆಯ ಮನಸ್ಸುಗಳು ತನಿಖೆಯನ್ನು ಆರಂಭಿಸಿದವು, ಇದೆಲ್ಲದರಿಂದ ತಲೆ ಚಿಟ್ಟು ಹಿಡಿದ ಕೇಂದ್ರ ಸರ್ಕಾರ ಅವನಿಗಾಗಿ ಒಂದು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ , ಎಲ್ಲರ ಅಹವಾಲುಗಳನ್ನು ಆ ನ್ಯಾಯಲಯಕ್ಕೆ ಸಲ್ಲಿಸುವಂತೆ ಸೂಚಿಸಿ ಕೈ ತೊಳೆದುಕೊಂಡಿತು . ಅಷ್ಟರಲ್ಲಿ ರಾಷ್ಟ್ರದ ಸುಪ್ರಸಿದ್ದ ವಕೀಲರೊಬ್ಬರು ಅವನ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು , ಯಥಾ ಪ್ರಕಾರ ಭಾರತೀಯ ತನಿಖಾ ಸಂಸ್ಥೆಗಳು ಇದನ್ನು ಬಲವಾಗಿ ವಿರೋಧಿಸಿ ವಾದ ಮಂಡಿಸಿದರು .
ಎಲ್ಲವನ್ನೂ ಆಲಿಸಿದ ನ್ಯಾಯಾಲಯ ದಾವೂದ್ ಇಬ್ರಾಹಿಮ್ ನ ಅಪರಾಧಗಳು ಮೇಲು ನೋಟಕ್ಕೆ ಸಾಬೀತಾಗಿರುವುದರಿಂದ , ಅವನ ಕೃತ್ಯಗಳು ರಾಷ್ಟ್ರ ವಿದ್ರೋಹದ ಪರಿಧಿಯಲ್ಲಿ ಬರುವುದರಿಂದ ಜಾಮೀನು ಸಾಧ್ಯವಿಲ್ಲವೆಂದು ತೀರ್ಪು ನೀಡಿತು .
ನಂತರ ಅವನ ಅಂತಸ್ತಿಗನುಗುಣವಾಗಿ , ವಿಶೇಷ ಜೈಲನ್ನು ನಿರ್ಮಿಸಿ , ಎಲ್ಲಾ ವಿಧವಾದ ಸಕಲ ಸವಲತ್ತುಗಳೊಡನೆ ಅವನ ಜೈಲಿನ ದಿನಗಳು ಕಳೆದು ಹೋಗಲು ಎಲ್ಲಾ ಏರ್ಪಾಟುಗಳೂ ನಡೆದವು . ವರ್ಷಾನುಗಟ್ಟಲೆ ಕೇಸು ನಡೆದರೂ ತನಿಖಾ ಸಂಸ್ಥೆಗಳಿಗೆ ಅವನ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ದಾಖಲೆಗಳ ಅಭಾವದಿಂದ ಆರೋಪ ಪಟ್ಟಿ ಸಲ್ಲಿಸಲು ಅವರು ವಿಫಲರಾದರು .ಕೆಲವು ಉತ್ಸಾಹಿ ಯುವ ಅಧಿಕಾರಿಗಳು ಅವನ ಮೇಲೆ ದಾಖಲಾಗಿದ್ದ ಅಪರಾಧಗಳಿಗೆ ಸಂಬಂಧಪಟ್ಟ ಫೈಲುಗಳನ್ನು ಪಡೆಯಲು ಅನೇಕ ಕಛೇರಿಗಳಿಗೆ ಎಡತಾಕಿದರಾದರೂ ಆಶ್ಚರ್ಯಕಾರಕವಾಗಿ ಅನೇಕ ಫೈಲುಗಳು ಕಾಣೆಯಾಗಿದ್ದುದು ಅವರ ಉತ್ಸಾಹಕ್ಕೆ ತಣ್ಣೀರು ಬೀಳಲು ಕಾರಣವಾಯಿತು .
ಈ ವೇಳೆಗೆ ಅನವಶ್ಯಕವಾಗಿ ವ್ಯಕ್ತಿಯೊಬ್ಬನನ್ನು ಬಂಧನದಲ್ಲಿ ಮುಂದುವರಿಸುವುದನ್ನು ಪ್ರತಿಭಟಿಸಿದ ಭಾರತೀಯ ಚಿಂತನಶೀಲ ಮನಸ್ಸುಗಳು , ಅವನ ಬಿಡುಗಡೆಗೆ ಗಲಭೆ ಶುರು ಮಾಡಿದವು . ಕೋರ್ಟುಗಳು ತನಿಖಾಧಿಕಾರಿಗಳಿಗೆ ಛೀಮಾರಿ ಹಾಕಿದ್ದೇ ಬಂತು ,ಅಧಿಕಾರಿಗಳು ನ್ಯಾಯಾಲಯದಿಂದ ಉಗಿಸಿಕೊಂಡು ,ಏನೂ ಆಗಿಲ್ಲವೆಂಬಂತೆ ಹೊರ ಬಂದು ಮುಗುಳ್ನಕ್ಕರು . ಯಥಾ ಪ್ರಕಾರ ಅಪರಾಧ ಸಾಬೀತು ಪಡಿಸಲು ವಿಫಲರಾದ ಅಧಿಕಾರಶಾಹಿಯನ್ನು ತೆಗಳಿದ ನ್ಯಾಯಾಲಯ ಆಪಾದನೆಗಳು ಸ್ಥಿರಪಡದ ಕಾರಣವನ್ನು ಕೊಟ್ಟು ದಾವೂದನನ್ನು ಬಿಡುಗಡೆ ಮಾಡಿತು .
ಅವನು ಜೈಲಿನಿಂದ ಹೊರ ಬರುವ ದಿನ ಸಾವಿರಾರು ಅಭಿಮಾನಿಗಳು ಹಾರ ತುರಾಯಿಯೊಂದಿಗೆ ಅವನನ್ನು ಸ್ವಾಗತಿಸಲು ಕಾದಿದ್ದರು , ಮುಂದೆ ಯಥಾ ಪ್ರಕಾರ ಭಾರತೀಯ ಪ್ರಜೆಯಾಗಿದ್ದ ಇಬ್ರಾಹಿಂ ಸಾಹೇಬರು ಚುನಾವಣೆಗೂ ನಿಂತು ಗೆದ್ದೂ ಬಂದರು; ಕೇಂದ್ರದಲ್ಲಿ ಮಂತ್ರಿಯೂ ಆದರು . ಅವರ ಮೊದಲಿನ ಎಲ್ಲ ದಂಧೆಗಳೂ ಈಗ ಗೌರವಯುತವಾಗಿ, ನಿರಾತಂಕವಾಗಿ ಝಡ್ + ಭದ್ರತೆಯೊಡನೆ ಸಾಗುತ್ತಲೇ ಇವೆ, ಇಬ್ರಾಹಿಂ ಸಾಹೇಬರು ಮೀಸೆಯ ಆಡಿಯಲ್ಲಿ ನಗುತ್ತಲೇ ಇದ್ದಾರೆ . ( ಈ ಲೇಖನ ಸಿದ್ದವಾಗಿ ಒಂದು ವಾರವಾಗಿತ್ತು , ಅಪ್ ಲೋಡ್ ಮಾಡಲು ಸಮಯ ದೊರಕಿರಲಿಲ್ಲ . ಇಂದಿನ ಪ್ರಜಾವಾಣಿಯಲ್ಲಿ ದಾವೂದನ ಬಗ್ಗೆ ಪಾಕೀಸ್ಥಾನದ ನಿಲುವಿನಲ್ಲಾದ ಬದಲಾವಣೆಯ ವರದಿಯನ್ನು ನೋಡಿ ನಗು ಬಂತು )

- Login or register to post comments
- 647 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
ಸೋಮಣ್ಣನವರೆ,
ನೂರಕ್ಕೆ ನೂರು- ನೀವು ಬರೆದಂತೆ ನಡೆಯುತಿತ್ತು.
ವೀರಪ್ಪನ್ ಅನ್ನು ಜೀವಂತ ಹಿಡಿದಿರುತ್ತಿದ್ದರೆ, ಈ ಚುನಾವಣೆಯಲ್ಲಿ ೩ ಪಕ್ಷದವರೂ ಅವನನ್ನು ಸೇರಿಸಲು ನಾ ಮುಂದು ತಾ ಮುಂದು ಎಂದು ಪ್ರಯತ್ನಿಸುತ್ತಿದ್ದರು.ಹೇಗೂ ಕೋಟಿಗಟ್ಟಲೆ ಹಣ ಅವನ ಬಳಿ ಇತ್ತು.
ಜೈಲಿನಿಂದಲೇ ಇಲಕ್ಶನ್ ಗೆ ನಿಂತು, ಮುಂದಿನ ಸಂಪುಟದಲ್ಲಿ ಅರಣ್ಯ ಮಂತ್ರಿ/ಗೃಹ ಮಂತ್ರಿ/ಮುಖ್ಯಮಂತ್ರಿ(!?) ಆಗುತ್ತಿದ್ದನೋ ಏನೋ..
-ಗಣೇಶ.
ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
ಪ್ರೀತಿಯ ಗಣೇಶ್ ’ನಡೆಯುತ್ತಿತ್ತು ’ ಅಲ್ಲ ’ನಡೆದೀತು ಮುಂದೆ’ ಯೋಚಿಸಬೇಡಿ , ನಾವಿರುವ ಭಾರತದಲ್ಲಿ ಯಾವುದೂ ಅಸಂಭವವಲ್ಲ.