ಶ್ರೀಬಸವೇಶ್ವರರ ವಚನಗಳು
ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯೂ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯೂ !!
ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು?
ಮನದಾ ಕೋಪ ತನ್ನರಿವಿನಾ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ !!
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ!
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ!
ಕೂಟಕ್ಕೆ ಸ್ರೀಯಾಗಿ ಕೂಡಿದಳು ಮಾಯೆ!
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ?
ಈ ಮಾಯೆಯ ಕಳವೊಡೆ ಎನ್ನಳವಲ್ಲ;
ನೀವೇ ಬಲ್ಲಿರಿ ಕೂಡಲಸಂಗಮದೇವಾ!!
ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ !!
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ
ಮನ ನಿಮ್ಮದೆಂದ ಬಳಿಕ ಬೇರೆ ಮನವಿಲ್ಲ
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ
ಇಂತೀ ತ್ರಿವಿಧವೂ ನಿಮ್ಮದೆಂದರಿದ ಬಳಿಕ ಎನಗೆ ಬೇರೆ
ವಿಚಾರವುಂಟೆ ಕೂಡಲಸಂಗಮದೇವಾ!!
ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ!!
ತಂದೆ ನೀನು ತಾಯಿ ನೀನು
ಬಂಧು ನೀನು ಬಳಗ ನೀನು
ನೀನಲ್ಲದೆ ಮತ್ತಾರೂ ಇಲ್ಲವಯ್ಯಾ
ಕೂಡಲಸಂಗಮದೇವಾ
ಹಾಲಲ್ಲದ್ದು ನೀರಲ್ಲದ್ದು ನಿಮ್ಮ ಧರ್ಮ!!

- Login or register to post comments
- 545 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಶ್ರೀಬಸವೇಶ್ವರರ ವಚನಗಳು
ನಿಮ್ಮ ಹತ್ತಿರಾ ಸಮಗ್ರ ವಚನಗಳು ಉ೦ಟೋ ?? ನ೦ಗೇ ಒ೦ದು ವಚನ ಬೇಕಾಗಿತ್ತು.
ಉ: ಶ್ರೀಬಸವೇಶ್ವರರ ವಚನಗಳು
ಮುರಳೀಧರ್ ಯಾವ ವಚನ ಎಂದು ಹೇಳಿ ಪ್ರಯತ್ನಿಸೋಣ
ಉ: ಶ್ರೀಬಸವೇಶ್ವರರ ವಚನಗಳು
ಬೀದಿ ನಾಯಿಯ ಕಣ್ಣ ಮೂಲಕ ಜಗವ ನೋಡು ಅ೦ತಾ ಒ೦ದು ವಚನವಿದೆಯ೦ತೆ .. ಯಾರೋ ಬಸವಣ್ಣನವರು ಬರೆದದ್ದು ಅ೦ತಾ ಹೇಳಿದ್ದರು.
ಅದಕ್ಕೆ ಚೆಕ್ ಮಾಡ್ ಬೇಕಿತ್ತು...
ಉ: ಶ್ರೀಬಸವೇಶ್ವರರ ವಚನಗಳು
ಪ್ರತಿಕ್ರಿಯೆಗೆ ಧನ್ಯವಾದ.
ಸಮಗ್ರ ವಚನಗಳು ನನ್ನ ಹತ್ತಿರ ಇದೆ, ಹುಡುಕಿ ತಿಳಿಸುವೆ ಮುರಳಿಯವರೆ.
ಇಂತಿ ನಿಮ್ಮ,
ಸುಶೀಲ್.
ಉ: ಶ್ರೀಬಸವೇಶ್ವರರ ವಚನಗಳು
ನೀವು ತಿಳಿಸಿದ ರೀತಿಯ ವಚನ ನನ್ನ ಕಣ್ಣಿಗೆ ಬಿದ್ದಿಲ್ಲ , ಆಸಕ್ತಿದಾಯಕವಾಗಿದೆ , ಹುಡುಕುತ್ತೇನೆ , ನನಗೆ ಮೊದಲು ಸಿಕ್ಕರೆ ನಿಮಗೆ ತಿಳಿಸುತ್ತೇನೆ . ನಿಮಗೆ ಸಿಕ್ಕರೆ ತಿಳಿಸಿ .
ಉ: ಶ್ರೀಬಸವೇಶ್ವರರ ವಚನಗಳು
ಉ: ಶ್ರೀಬಸವೇಶ್ವರರ ವಚನಗಳು
ತನಗಾದ ಲಾಭವೇನು?ಅವರಿಗಾದ ನಷ್ಟವೇನು?
ಎಂದು ಅರ್ಥೈಸಬಹುದು.
-ಸುಶೀಲ್.
ಉ: ಶ್ರೀಬಸವೇಶ್ವರರ ವಚನಗಳು
ವಚನಸಾಹಿತ್ಯ ಸಂಪೂರ್ಣವಾಗಿ ಶಿಷ್ಟ ಸಾಹಿತ್ಯ. ದಾಸರ ಸಾಹಿತ್ಯದಂತೆ ಸಂಪೂರ್ಣ ಆಡುಮಾತಲ್ಲ. ಆದರೆ ಶರಣರು ಎಲ್ಲಾ ಜನ ಮಾತಾಡುವ ಕನ್ನಡ ಭಾಷೆಯನ್ನೇ ಆಯ್ಕೆ ಮಾಡಿಕೊಂಡರು. ಹಾಗಾಗಿ ಶಿಷ್ಟ ಸಾಹಿತ್ಯವಾದ್ದಱಿಂದ ಆ ಕಾಲದಲ್ಲಿ ’ರ’ ಮತ್ತು ’ಱ’ ನಡುವೆ ಉಚ್ಚಾರ ಭೇದವಿತ್ತು.
ಇಲ್ಲಿ ಉದಾಹರಿಸಿರುವ ವಚನಗಳಲ್ಲಿ ಕೆಲವು ತಪ್ಪುಗಳನ್ನು ಹೇೞುತ್ತಿದ್ದೇನೆ. ಇದನ್ನು ಎಲ್ಲಾ ಕನ್ನಡಿಗರೂ ಗಮನಿಸಬೇಕು.
’ತನ್ನರಿವಿನಾ’ ತಪ್ಪು ಸರಿಯಾದ ರೂಪ ’ತನ್ನಱಿವಿನ’
’ತಾನರಿದವಂಗೆ’ ಬದಲು ’ತಾನಱಿದವಂಗೆ’
’ಬೇರೆ’ ಬದಲು ’ಬೇಱೆ’
’ನಿಮ್ಮನರಿದವಂಗೆ’ ಬದಲು ’ನಿಮ್ಮನಱಿದವಂಗೆ’
’ನಿಮ್ಮದೆಂದರಿದ’ ಬದಲು ’ನಿಮ್ಮದೆಂದಱಿದ’
ಉ: ಶ್ರೀಬಸವೇಶ್ವರರ ವಚನಗಳು
ಈ ಹಿಂದೆ ತಿಳಿಸಿದ ತಪ್ಪೋಲೆಯಲ್ಲಿ ’ತನ್ನಱಿವಿನ’ ಎಂಬುದಱ ಬದಲು ’ತನ್ನಱಿವಿನಾ’ ಎಂದು ಓದಿಕೊಳ್ಳಿ.
ಉ: ಶ್ರೀಬಸವೇಶ್ವರರ ವಚನಗಳು
ಆದರೆ ಇಂದು ಓದೋರಿಗೆ ನೆಱವಾಗಲೀ ಅಂತ ಹೀಗೆ ಬರೆದಿರಬೋದು..
=====================================
ಮಾಯ್ಸ!
ಉ: ಶ್ರೀಬಸವೇಶ್ವರರ ವಚನಗಳು
'ನೆಱವು’ ತಪ್ಪು. ’ನೆರವು’. ’ರ’ಕ್ಕೆ ಬದಲಾಗಿ ’ಱ’ ಬೞಸಬಹುದೆಂಬ ಕಲ್ಪನೆಯಿದ್ದರೆ ಅದು ತಪ್ಪು. ಬಸವೇಶ್ವರರ ಮೂಲವಚನಗಳಲ್ಲಿ ’ರ’ ಮತ್ತು ’ಱ’ ಸ್ಪಷ್ಟವಾಗಿ ಭೇದವಿದೆ. ’ೞ’ ಮತ್ತು ’ಳ’ ಗಳ ಭೇದದ ಗೊಡವೆಯೇ ಬೇಡೆಂದ ಹರಿಹರ ಕವಿ ’ಱ’ ಮತ್ತು ’ರ’ ಗಳ ವಿಷಯದಲ್ಲಿ ಅಂತಹ ನಿಲುವು ತಳೆಯಲಿಲ್ಲ. ಅಂದರೆ ಆ ಕಾಲದ ಶರಣರು ಹಾಗೂ ಇತರ ಕವಿಗಳಿಗೆ ’ರ’ ಮತ್ತು ’ಱ’ ಗಳ ನಡುವಿನ ಉಚ್ಚಾರ ವ್ಯತ್ಯಾಸ ಹಾಗೂ ಬೞಕೆಯಲ್ಲಿ ಸ್ಪಷ್ತ ಕಲ್ಪನೆಯಿತ್ತು.
ಉ: ಶ್ರೀಬಸವೇಶ್ವರರ ವಚನಗಳು
ಹೋ..
ನೆಱ ಅಂತ ಒಂದು ಒರೆ ಇದೆ ಅಲ್ವ?
ನೆಱೆತು
=====================================
ಮಾಯ್ಸ!
ಉ: ಶ್ರೀಬಸವೇಶ್ವರರ ವಚನಗಳು
ನೆಱೆ=ತುಂಬಾ ನೆಱೆ ನಂಬಿದೆ ನಿನ್ನ ಇತ್ಯಾದಿ. ನೆಱೆ=ಪ್ರವಾಹ ನೀರು ತುಂಬಿ ಬಂದಾಗ. ಆದರೆ ನೆರೆ ಅಂದರೆ ಒಟ್ಟಾಗು ಎಂದರ್ಥ. ನೆರವು ಅಂದರೆ ಸಹಾಯ ಮಾಡುವುದಕ್ಕೆ ಒಂದು ಕಡೆ ಸೇರು ಅರ್ಥಾತ್ ನೆರವು=ಗುಂಪು ನೆರೆಯವನು ಪಕ್ಕದವನು ನೆರವಾದರೆ ಮಾತ್ರ. ಇಲ್ಲದಿದ್ದರೆ ಹೊಱೆ ಅಷ್ಟೆ. ನೆರೆಹೊಱೆ ಹಾಗೆ ಬಂದಿರಬಹುದು. ನಮಗೆ ಬೇಕಾದಾಗ ಅವನ ನೆರವು. ಅವನಿಗೆ ನಮ್ಮ ಅವಶ್ಯಕತೆಯಿದ್ದಾಗ ನಮಗವ ಹೊಱೆಯೂ ಆಗಬಹುದು. ಆಗ ನಾವವನಿಗೆ ನೆರೆ.
ಉ: ಶ್ರೀಬಸವೇಶ್ವರರ ವಚನಗಳು
ನೆರೆಗೂದಲು.. ಇಲ್ಲಿ ಯಾವ ನೆರೆ/ಱೆ?
=====================================
ಮಾಯ್ಸ!
ಉ: ಶ್ರೀಬಸವೇಶ್ವರರ ವಚನಗಳು
ಆಗೇನು? ಚೇಗೇನು? ಆಗು ಅಂದರೆ ನಮಗೆಲ್ಲ ಗೊತ್ತಿರುವಂತೆ ನಮಗಾಗುವುದು ಅಂದರೆ ಲಾಭ. ತ್ಯಾಗ->ಚಾಗ->ಚೇಗ ಬಿಡಬೇಕಾಗಿ ಬರುವಂಥದ್ದು. ಅಂದರೆ ನಷ್ಟ. ಚಾಗ ಹೇಗೆ ಚೇಗ ಆಯ್ತೆಂದರೆ ಬೇಡ<->ಬ್ಯಾಡ ಆಗುವಂತೆ ತ್ಯಾಗ<->ತ್ಯೇಗ ಚ್ಯಾಗ<->ಚೇಗ ಅಂದರೆ ತ್ಯಾಗ. ಅಂದರೆ ಚೇಗ ಅಂದರೆ ಚಾಗ -> ತ್ಯಾಗ