ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ

ಜುಂಪಾ ಲಾಹಿರಿಯವರ ಹೊಸ ಪುಸ್ತಕ

May 1, 2008 - 11:34am — narendra
Jhumpa Lahiri

ಹುಟ್ಟುವಾಗಲೇ ಮಗು ತೀರಿಕೊಂಡಿತ್ತು ಎನ್ನುವ ಆಘಾತದ ಬಳಿಕ ಅವರ ನಡುವೆ ಬರೀ ಮೌನ ಮಂಜುಗಡ್ಡೆಯಂತೆ ಬೆಳೆದು ನಿಂತಿದೆ. ಯಾವುದೂ ಈಗ ಈ ಸಂಬಂಧವನ್ನು ಮತ್ತೊಮ್ಮೆ ಅರ್ಥಪೂರ್ಣಗೊಳಿಸಲಾರದು ಅಂತ ಇಬ್ಬರಿಗೂ ತೀವೃವಾಗಿಯೇ ಅನಿಸತೊಡಗಿದೆ. ಬೇರ್ಪಡುವ ತಯಾರಿಯಲ್ಲಿದ್ದಾರೆ. ಆಗ ಇದ್ದಕ್ಕಿದ್ದ ಹಾಗೆ ಪ್ರತಿ ರಾತ್ರಿ ಒಂದು ಗಂಟೆ ಕಾಲ ವಿದ್ಯುತ್ ಇರುವುದಿಲ್ಲ ಎನ್ನುವ ಪ್ರಕಟನೆ ಹೊರಬೀಳುತ್ತದೆ. ಆಗ, ಸಮಯ ಕಳೆಯುವುದಕ್ಕಾಗಿ, ಗಂಡ ಹೆಂಡತಿ ಎನ್ನುವ ಸಂಬಂಧದ ಹೊರೆಯಿಲ್ಲದೆ, ಪ್ರೀತಿಯನ್ನು - ಸಂಬಂಧವನ್ನು ಕಾಪಿಟ್ಟುಕೊಳ್ಳುವ ಆತಂಕಗಳಿಲ್ಲದೆ, ಕೇವಲ ಸ್ನೇಹಿತರಂತೆ ತಾವು ಇದುವರೆಗೂ ಪರಸ್ಪರರಿಂದ ಮುಚ್ಚಿಟ್ಟ ಸಂಗತಿಗಳನ್ನು ಯಾವ ಭಿಡೆಯಿಲ್ಲದೆ ಹೇಳಬಹುದಾದ ಒಂದು ಸಂದರ್ಭವನ್ನು ಇವರು ಸೃಷ್ಟಿಸಿಕೊಳ್ಳುತ್ತಾರೆ. ಅದು ಅವರಿಗೇ ಗೊತ್ತಾಗದ ಹಾಗೆ ತಮ್ಮ ನಡುವೆ ಅದುವರೆಗೆ ಅಗೋಚರವಾಗಿದ್ದ ಸಂಬಂಧದ ತಂತುವೊಂದರ ಅಸ್ಪಷ್ಟ ಅರಿವು ಮೂಡಿಸುತ್ತ ಹೋಗುತ್ತದೆ. ಆ ಕರೆಂಟಿಲ್ಲದ ಒಂದು ಗಂಟೆಗಾಗಿ ಇಬ್ಬರೂ ಗುಪ್ತವಾಗಿ ಕಾತರಿಸತೊಡಗುತ್ತಾರೆ!

ಹೌದು, ಇದು ಜುಂಪಾಲಾಹಿರಿಯ Interpreter of Maladies ಸಂಕಲನದ ಒಂದು ಕಥೆ. ಈಗಷ್ಟೇ ಇವರ Unaccustomed Earth ಹೆಸರಿನ ನೀಳ್ಗಥೆಗಳ ಸಂಕಲನ ಹೊರಬಿದ್ದಿದೆ. ಮನುಷ್ಯ ಸಂಬಂಧಗಳು, ಅವನ ಭಾವನೆಗಳು ಕ್ರಮೇಣ ಅರ್ಥಕಳೆದುಕೊಳ್ಳುವುದನ್ನು, ಸಡಿಲಗೊಳ್ಳುವುದನ್ನು ಮೌನವಾದ ತಲ್ಲಣಗಳಲ್ಲಿ ಗುರುತಿಸುತ್ತಲೇ ಅವುಗಳಿಂದ ಆತ ಬಿಡುಗಡೆ ಪಡೆಯುವ ಹಂತದಲ್ಲಿ ಅಥವಾ ಬಿಡುಗಡೆ ಪಡೆದ ನಂತರ ಉಳಿಯುವ ಶಿಲ್ಕು ಏನಿದೆ ಅದರಲ್ಲಿ ಆ ಸಂಬಂಧಗಳ, ಭಾವನೆಗಳ ಪ್ರಾಮಾಣಿಕತೆಯನ್ನು ಅರಸುವ ಕತೆಗಳು, ಬೇರೆ ಹೊಸ ಸಂಬಂಧದ ಹುರುಪಿನ ಆಳದಲ್ಲಿ ಹಳೆಯ ಸಂಬಂಧದ ನೆರಳುಗಳನ್ನು ಕಾಣುವ ಕಥೆಗಳು, ನಡುವಯಸ್ಸಿನಲ್ಲಿ ಸಂಬಂಧಗಳು ಪಡೆದುಕೊಂಡ ಅನಿವಾರ್ಯ ಆಕಾರ ವಿಕಾರಗಳನ್ನು ಮೌನವಾಗಿ ಚಿತ್ರಿಸುತ್ತ ಅವರ ಅಥವಾ ಎಳೆಯರ ಹೊಸ ಸಂಬಂಧಗಳನ್ನು ನಿರೂಪಿಸುವ ಕಥೆಗಳು ಇಲ್ಲಿವೆ. ಹೆಚ್ಚಾಗಿ ಇಲ್ಲಿ ಗಂಡು ಹೆಣ್ಣು ಸಂಬಂಧಗಳೇ ಪ್ರಾಮುಖ್ಯ ಪಡೆದಂತಿದೆಯಾದರೂ ತಂದೆ ಮಗಳು, ತಾಯಿ ಮಗ, ಅಕ್ಕ ತಮ್ಮ, ಕೇವಲ ಇಬ್ಬರು ಬಾಡಿಗೆದಾರರ ನಡುವಿನ ಸಂಬಂಧದ ಎಳೆಗಳು ಕೂಡ ಸಮಾನಾಂತರ ಗತಿಯಲ್ಲಿ ಕತೆಯ ಇನ್ನೊಂದು ಪಾತಳಿಯಲ್ಲಿ ತನ್ನ ಹುಟ್ಟು, ಬೆಳವಣಿಗೆ, ಕುಸಿತ ಅಥವಾ ಮಿಡಿತ ದಾಖಲಿಸುತ್ತ ಹೋಗುತ್ತವೆ ಎಂಬುದನ್ನು ಗಮನಿಸಬಹುದು. ಈ ಎಲ್ಲ ಕತೆಗಳು ಅಮೆರಿಕೆಯಲ್ಲಿ ಅಥವಾ ವಿದೇಶದಲ್ಲಿ ನಡೆಯುತ್ತವೆ, ಭಾರತದ ಬಂಗಾಳಿ ನೆರಳು ಎಷ್ಟೇ ಗಾಢವಾಗಿ ಹರಡಿದ್ದರು ಕತೆಯ ನಡೆ ಭಾರತದ ನೆಲದಲ್ಲಿಲ್ಲ.

ತಾಯಿ ತೀರಿದ ನಂತರ ನಿವೃತ್ತನಾಗಿರುವ ತಂದೆ ಟೂರುಗಳಲ್ಲಿ ಮುಳುಗುತ್ತಾನೆ. ಮಗಳು ರೂಮಾ ತನ್ನ ದೂರದ ಮನೆಯಲ್ಲಿ ಒಬ್ಬಳೇ ತನ್ನ ಮಗುವಿನೊಂದಿಗೆ ಕುಳಿತು ನೌಕರಿಯ ನಿಮಿತ್ತ ಹೆಚ್ಚಾಗಿ ಮನೆಯ ಹೊರಗೇ ಇರುವ ಗಂಡ ಮತ್ತು ಸದಾ ತಿರುಗಾಟದ ಹುಚ್ಚು ಹತ್ತಿಸಿಕೊಂಡಿರುವ ತಂದೆಯ ಬಗ್ಗೆ ಯೋಚಿಸುತ್ತಾಳೆ. ಮುದುಕನಾಗಿರುವ ಒಂಟಿ ಜೀವ ತಂದೆಗೆ ತಮ್ಮೊಂದಿಗೇ ಇರು ಎನ್ನಬೇಕೆ, ಮನೆ ಸಾಕಷ್ಟು ದೊಡ್ಡದಿದ್ದರೂ ಆತನ ಇರುವು ತನ್ನ ಕುಟುಂಬಕ್ಕೆ ಕಿರಿಕಿರಿ ಎನಿಸಲಾರದೇ ಎನ್ನುವ ವಿಚಾರಗಳಲ್ಲಿ ಅವಳಲ್ಲೇ ದ್ವಂದ್ವ ಇದೆ. ತಂದೆಯ ಬಗ್ಗೆ ಅವಳಲ್ಲಿ ಪ್ರೀತಿ, ಅನುಕಂಪ, ದ್ವೇಷ, ಸಿಟ್ಟು ಎಲ್ಲವೂ ಇರುವಂತಿದೆ. ಅದಕ್ಕೆಲ್ಲ ಅವನು ತಾಯಿಯನ್ನು ನಡೆಸಿಕೊಳ್ಳುತ್ತಿದ್ದ ರೀತಿ ಕಾರಣವೇ ಎಂದರೆ ಅದೂ ಅವಳಿಗೆ ಸ್ಪಷ್ಟವಿಲ್ಲ. ತಂದೆಯ ಸ್ವತಂತ್ರ ಮನೋವೃತ್ತಿಯೇ, ಎಂದೂ ಹೆಂಡತಿ ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆತು ನಡೆದುಕೊಳ್ಳದೇ ಇದ್ದ ಹಿನ್ನೆಲೆಯೇ. ಹೌದಾದರೆ ಅವನೀಗ ಬದಲಾಗಿದ್ದಾನೆ! ಇನ್ಯಾರೋ ಒಂಟಿ ಮುದುಕಿಯನ್ನು ಪ್ರೀತಿಸುತ್ತಿದ್ದಾನೆ! ಇನ್ನೂ ಜೀವಂತವಾಗಿರುವ ಅವನ ತೋಟಗಾರಿಕೆಯ ಹುಚ್ಚು, ಮಗುವಿನೊಂದಿಗೆ ಅವನು ಬೆರೆತ ರೀತಿ, ಬೆಂಗಾಲಿಯ ಕಂಪನ್ನು ಅವನು ಇನ್ನೂ ಅನುಭವಿಸುತ್ತಿರುವ ರೀತಿ ಎಲ್ಲವೂ ಅವಳಿಗೆ ಅಚ್ಚರಿಹುಟ್ಟಿಸಿದ ಹಾಗೆಯೇ ಅವನ ತಿರುಗಾಟದ ಹುಚ್ಚು ಕೂಡ ಅವಳಿಗೆ ಇದನ್ನೆಲ್ಲ ಊಹಿಸುವಂತೆ ಮಾಡುತ್ತದೆ. ತಂದೆ ಅವಳ ಜೊತೆಗಿರಲು ಬಯಸುತ್ತಿಲ್ಲ. ಅವನು ತನ್ನ ಒಂಟಿ ರೂಮಿನ ಅಪಾರ್ಟ್‌ಮೆಂಟ್‌ನಲ್ಲೇ ತಾನು ಸುಖಿ ಎನ್ನುತ್ತಾನೆ. ಇದು ಕೂಡಾ ರೂಮಾಗೆ ನಿರಾಳವೆನಿಸುವುದಿಲ್ಲ. ಹಾಗೆಯೇ ಅವನಿಗೂ ತನ್ನ ಹೊಸದಾದ ಪ್ರೀತಿಯಲ್ಲಿ ಅಂಥ ಭರವಸೆಗಳೇನಿಲ್ಲ, ಗೊತ್ತು. ಸ್ವತಂತ್ರ ಮನೋವೃತ್ತಿ ಮತ್ತು ಪ್ರೀತಿಗಾಗಿ ಇನ್ನೊಂದು ಜೀವಕ್ಕೆ ಅವಲಂಬಿಸುವುದು ಎರಡರ ನಡುವೆ ಅವನಿಗೂ ಗೊಂದಲಗಳಿರುವಂತಿದೆ. ವಿಚಿತ್ರವೆಂದರೆ ರೂಮಾಳ ದಾಂಪತ್ಯದಲ್ಲಿ ಕೂಡ ಅಸುಖಿ ಭಾವನೆ ಹುಟ್ಟಿಸುವ ಅಗೋಚರ ಗೋಡೆಗಳ ಅಸ್ತಿತ್ವ ಇರುವುದರ ಅರಿವೂ ಅವಳಿಗಿದೆ. ಒಂದು ಪರಕೀಯ ಭಾವ, ಎಲ್ಲ ಇದ್ದೂ ಏನೋ ಇಲ್ಲದ ಮತ್ತು ಆ ಏನೋ ಎಂಬುದು ಎಂದಿಗೂ ಯಾರಿಗೂ ದಕ್ಕಿರಲಾರದು ಎಂಬ ಅರಿವಿನೊಂದಿಗೇ ಈ ಕತೆ ಒಂದು ತಾದ್ಯಾತ್ಮ ರೂಪಿಸಿಕೊಂಡಿದೆ.

A Choice of Accommodation ಸಂಕಲನದ ಇನ್ನೊಂದು ಉತ್ತಮ ಕತೆ. Unaccustomed Earth ಮತ್ತು ಈ ಹೆಸರಿಗೆ ಇರುವ ಅಂತರ್ಗತ ಸಂಬಂಧವನ್ನು ನೋಡಿ. ಇಲ್ಲಿನ ಕತೆಯೂ ಸಂಬಂಧಗಳು ಕ್ರಮೇಣ ಪಡೆದುಕೊಳ್ಳುವ ರೂಪಾಂತರಗಳ ಕುರಿತೇ ಧೇನಿಸುವುದಾದರೂ ಇಲ್ಲಿ ಅದು ಹೆಚ್ಚು ಪಾಸಿಟಿವ್ ಆಗಿದೆ. ಸಂಬಂಧಗಳ ಆಳದ ಪ್ರಾಮಾಣಿಕ ಅಗತ್ಯಗಳಲ್ಲಿ ಹೆಚ್ಚು ವಿಶ್ವಾಸವಿಟ್ಟಿದೆ. ಆದರೆ ಈ ಪಾಸಿಟಿವ್ ಚಲನೆಯ ನಂತರ ಮತ್ತೆ ಈ ಸಂಬಂಧದ ಬಗ್ಗೆ ಹೊಸದಾಗಿ ಯೋಚಿಸುವುದು ಕೂಡ ಈ ಗಂಡು ಹೆಣ್ಣುಗಳಿಗೆ ಸಾಧ್ಯವಿದೆ, ಆ ಸಂಭವನೀಯತೆ ತೆರೆದೇ ಇದೆ! ಹೀಗೆ ಜುಂಪಾ ಅವರ ಕತೆಗಳಲ್ಲಿ ಸಂಭವನೀಯ ಸಂಬಂಧವೊಂದರ ಅಥವಾ ಸಂಭವನೀಯ ಬಿಡುಗಡೆಯೊಂದರ ಹಿನ್ನೆಲೆಯಲ್ಲಿ ಇರುವ ಸಂಬಂಧಗಳ ಗಟ್ಟಿತನ, ಪ್ರಾಮಾಣಿಕತೆ ಸಿದ್ಧಗೊಳ್ಳುತ್ತ ಹೋಗುತ್ತದೆ. ಪರ್ಯಾಯವೊಂದರ ನಿಕಷಃ ಬಹುಷಃ ಈ ಸಂಬಂಧಗಳ ಆಯುಷ್ಯ ನಿರ್ಧಾರಕ್ಕೆ ಅನಿವಾರ್ಯವೇನೋ ಎನ್ನುವಷ್ಟು ಅದರ ಬಳಕೆಯಿದೆ ಈ ಕತೆಗಳಲ್ಲಿ. ಆದರೆ ಈ ಆಯುಷ್ಯ ನಿರ್ಧಾರದ ಹಪಹಪಿಕೆಯನ್ನು, ಅಗತ್ಯವನ್ನು ಅನುಮಾನದಿಂದ ಕಾಣಬೇಕು. ಸ್ವತಃ ಶಾಶ್ವತನಲ್ಲದ ಮನುಷ್ಯ ಸದಾ ಸಂಬಂಧಗಳ, ಭಾವನೆಗಳ ಕ್ಷಣಭಂಗುರತೆಯ ಬಗ್ಗೆ, ನಶ್ವರತೆಯ ಬಗ್ಗೆ ಹಪಹಪಿಸುತ್ತಿರುವುದನ್ನು ಬಿಡುವುದಿಲ್ಲ ಎನ್ನುವುದು ಸತ್ಯ. ಅವನಿಗೆ ಈ ಹಪಹಪಿಗಳಿಂದ ಮುಕ್ತಿಯಿಲ್ಲ. ಇದನ್ನು ಕುರಿತು ಯೋಚಿಸಬೇಕು.

ಹಾಗೆಯೇ ಅಮೆರಿಕಕ್ಕೆ ಸೀಮಿತವಾದ ವಸ್ತುವಲ್ಲ ಇದು. ಗಂಡು ಹೆಣ್ಣು ಸಂಬಂಧ, ಮದುವೆ, ವಿಚ್ಛೇದನ, ಮರುಮದುವೆ, ಲಿವಿಂಗ್ ಇನ್, ಲೈಂಗಿಕ ಪರಿಶುದ್ಧತೆಯ ಪರಿಕಲ್ಪನೆಗಳು ಇವತ್ತು ಇಲ್ಲಿಯೂ ಬದಲಾಗಿವೆ. ಸರಿಬರದಿದ್ದರೆ ಬಿಟ್ಟುಬಿಡುವ ಒಂದು ಅಘೋಷಿತ ನಿರ್ಧಾರದೊಂದಿಗೇ ಅರೇಂಜ್ಡ್ ಎನಿಸಿಕೊಳ್ಳುವ ಮದುವೆಗಳು ನಡೆಯುವ ದಿನಗಳಿವು. ಸಹಜವಾಗಿಯೇ ಸಹಜೀವನದ ಲಾಭ ನಷ್ಟ, ಅಗತ್ಯ ಅನಿವಾರ್ಯತೆ, ಅನುಕೂಲ ಕಿರಿಕಿರಿಗಳ ಕುರಿತ ನಮ್ಮ ನಿರೀಕ್ಷೆಗಳು ಹಿಂದಿನಂತಿಲ್ಲ. ತೀರ ವೈಯಕ್ತಿಕ ಅನಿಸುವ ಸಂಗತಿಗಳೆಲ್ಲ ಕ್ರಮೇಣ ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಬದಲಾದ ಜೀವನದ ರೀತಿ ನೀತಿಗಳು ಮತ್ತು ಬದಲಾಗದ ಮನುಷ್ಯನ ಆಳದ ಅಗತ್ಯಗಳು, ಹಪಹಪಿಕೆಗಳು - ಈ ಎರಡರ ಸಂಘರ್ಷ ಉಂಟು ಮಾಡುವ ಒಂದು ವಿಕ್ಷಿಪ್ತ ಮನಸ್ಥಿತಿಯನ್ನು ಕುರಿತು ಈ ಕತೆಗಳು ನಮ್ಮನ್ನು ಎಚ್ಚರಿಸುತ್ತವೆ. ಈ ಕತೆಗಳಲ್ಲಿ ಬರುವ ಹೆಚ್ಚಿನ ಪಾತ್ರಗಳು ಈ ದೇಶದಿಂದ ಒಂದಲ್ಲಾ ಒಂದು ಕಾರಣಕ್ಕೆ ಅಮೆರಿಕಕ್ಕೆ ಹೋಗಿ ಅಲ್ಲಿ ನೆಲೆನಿಂತವು. ಹಿನ್ನೆಲೆ ಭಾರತದ್ದು. ಭಾರತದ ಸಾಂಪ್ರದಾಯಿಕ ದಾಂಪತ್ಯದ, ಏಕಪತ್ನೀ ವ್ರತದ, ಸುದೀರ್ಘ ನಿಷ್ಠೆಯ ಒಂದು ಮಾದರಿಯನ್ನು ಬೆನ್ನಿಗಿಟ್ಟುಕೊಂಡೇ ಇವು ಎಳೆಯರ ಗಂಡು ಹೆಣ್ಣು ಸಂಬಂಧಗಳನ್ನು ಚಿತ್ರಿಸುವುದು ವಿಶೇಷ. ಈ ಎಳೆಯರ ಸಂಬಂಧಗಳು ಹೆಚ್ಚಾಗಿ ಭಾರತೀಯ ಮತ್ತು ವಿದೇಶೀ ವ್ಯಕ್ತಿಗಳ ನಡುವೆಯೇ ರೂಪುಗೊಳ್ಳುವುದು ಇನ್ನೊಂದು ವಿಶೇಷ. ಇಬ್ಬರೂ ಕಾಕತಾಳೀಯವಾಗಿ ಭಾರತೀಯರೇ ಆಗಿರುವ ಸಾಧ್ಯತೆಗಳಿಲ್ಲವೆಂದಲ್ಲ. ಅಂದ ಮಾತ್ರಕ್ಕೆ ಪರಂಪರಾನುಗತ ಮದುವೆ ಎಂಬ ಸಂಸ್ಥೆ ಮತ್ತು ಅಮೆರಿಕ ವಾಸದ ಆಧುನಿಕತೆಯಿಂದ ತೆರೆದುಕೊಂಡ ಗಂಡು ಹೆಣ್ಣು ಸಂಬಂಧದ ಹೊಸ ಹೊಸ ಸಾಧ್ಯತೆಗಳ ಒಂದು ವ್ಯವಸ್ಥೆ ಎರಡನ್ನು ಈ ಕತೆಗಳು ತೂಗಿ ನೋಡುತ್ತವೆ ಎಂದೇನೂ ಅಲ್ಲ. ಜುಂಪಾ ಅವರಿಗೆ ಗಂಡು ಹೆಣ್ಣು ಸಂಬಂಧಕ್ಕೆ ಪರಂಪರೆಯ ಅಥವಾ ಆಧುನಿಕತೆಯ ಚೌಕಟ್ಟು ನೀಡುವ ಸ್ಪರ್ಶಗಳು ಮುಖ್ಯವೇ ಹೊರತು ಅವೇ ಚೌಕಟ್ಟುಗಳು ಮೂಲಭೂತವಾಗಿ ಗಂಡು ಹೆಣ್ಣು ಸಂಬಂಧದ ವಿಚಾರದಲ್ಲಿ ಮನುಷ್ಯನ ದೈಹಿಕ ಮಾನಸಿಕ ಅಗತ್ಯ, ದೌರ್ಬಲ್ಯ, ನಿಯಂತ್ರಣಗಳನ್ನು ರೂಪಿಸುತ್ತವೆ ಎನ್ನುವ ಭ್ರಮೆಯಿಲ್ಲ. ಅವರು ಮನುಷ್ಯನನ್ನು ಕೇವಲ ಮನುಷ್ಯನನ್ನಾಗಿಯೇ ಕಾಣುತ್ತ ಹೋಗುತ್ತಾರಾದರೂ ಪರಂಪರೆ ಮತ್ತು ಆಧುನಿಕತೆ ಎರಡನ್ನೂ ಅಕ್ಕಪಕ್ಕದಲ್ಲಿಡುತ್ತಲೇ ಅದನ್ನು ಮಾಡುತ್ತಾರೆ, ಮತ್ತು ಅದರ ಮೂಲಕ ಮನುಷ್ಯನನ್ನು ಇನ್ನಷ್ಟು ಆಳವಾಗಿ ತಿಳಿಯುವುದಕ್ಕೆ ಪ್ರಯತ್ನಿಸುತ್ತಾರೆ.

Only Goodness ತುಂಬ ಕಾಡುವ ಕತೆ. ಇಲ್ಲಿ ಗಂಡು ಹೆಣ್ಣು ದಾಂಪತ್ಯದ ಸಂಬಂಧಕ್ಕಿಂತ ದಾರಿತಪ್ಪಿದ ತಮ್ಮನ ಬದುಕಿನ ದುರಂತ ಮುಖ್ಯವಾಗುತ್ತದೆ. ಅದಕ್ಕೆ ಎಲ್ಲೋ ತಾನು ಕಾರಣವಿರಬಹುದೆ ಎಂಬಂಥ ಅಕ್ಕನ ಸೂಕ್ಷ್ಮ ಗಿಲ್ಟ್‌ನೊಂದಿಗೇ ನಿರೂಪಿಸಲ್ಪಡುವ ಈ ಕತೆ ದ್ವೇಷದ ಆಳದಲ್ಲಿ ಮಿಡಿಯುವ ಪ್ರೀತಿಯಂಥ ಒಂದು ಭಾವದಿಂದ ಕಲಕುತ್ತದೆ. ವಿಪರೀತ ಕುಡಿತದ ಚಟಕ್ಕೆ ಬಿದ್ದ ರಾಹುಲ್ ಕೊನೆಗಾದರೂ ಸರಿಹೋದ ಎನಿಸುವಾಗಲೇ ಅವನೆಂದಿಗೂ ಸರಿಹೋಗಲಿಕ್ಕಿಲ್ಲ ಎನ್ನುವ ಅನುಮಾನವನ್ನು ಹುಟ್ಟಿಸುತ್ತಾನೆ, ಮತ್ತೆ ಮತ್ತೆ ಅವನನ್ನು ದ್ವೇಷಿಸುವುದಲ್ಲದೆ ಇನ್ನೇನೂ ಸಾಧ್ಯವಿಲ್ಲ ಅನಿಸುವಂತೆ ಮಾಡುತ್ತಾನೆ. ಆದರೆ ಒಡಹುಟ್ಟಿದ ಅಕ್ಕನಿಗೆ ಗೊತ್ತಿದೆ, ಅವನು ಅವನಾಗಿಲ್ಲ ಎನ್ನುವುದು. ಆದರೆ ಆಕೆ ಏನನ್ನೂ ಬದಲಿಸಲಾರದ ಅಸಹಾಯಕಿ. ಇವನಿಂದಾಗಿಯೇ ದೂರವಾಗಬಹುದಾದ ಗಂಡನನ್ನು ಉಳಿಸಿಕೊಳ್ಳುವುದೇ ಅವಳಿಗೆ ಸಮಸ್ಯೆಯಾಗಿದೆ ಈಗ. ಎಲ್ಲಾ ಸಂಬಂಧಗಳು ಬಿರುಕು ಬಿಡುತ್ತ ಹೋಗಿವೆ ಈ ಕತೆಯಲ್ಲಿ, ಉದ್ದಕ್ಕೂ. ಆದರೆ ಬಿರುಕು ಕಾಣಿಸಿಕೊಳ್ಳುತ್ತಿರುವಾಗಲೇ ಆಳದ ತಂತುಗಳು ಎಷ್ಟು ಬಿಗಿಯಾಗಿವೆ ಎನ್ನುವುದರ ಅರಿವನ್ನು ಹುಟ್ಟಿಸುವುದು ಜುಂಪಾರ ವೈಶಿಷ್ಯ.

Nobody's Business ತನ್ನ ನಿರೂಪಣೆಯ ನವಿರುತನದಿಂದಾಗಿ ಮತ್ತು ಅದು ಹುಟ್ಟಿಸುವ ಕುತೂಹಲದಿಂದಾಗಿ ನಮ್ಮನ್ನು ಹಿಡಿದಿಡುವ ಕತೆ. ಅನಗತ್ಯ ಕುತೂಹಲ ಕೂಡ ಕಾಡುವ ವಿಸಂಗತಿಯಾಗಿ ಮನಸ್ಸಿನಲ್ಲಿ ಉಳಿಯುವ ಬಗೆ ಇಲ್ಲಿನ ಸೋಜಿಗ. ಸ್ಯಾಂಗ್ ಮತ್ತು ಫರೂಕ್ ನಡುವಣ ಸಂಬಂಧ ಬೇರೆ ಇನ್ನಿಬ್ಬರನ್ನು ಅವರವರದೇ ರೀತಿಯಲ್ಲಿ, ಅವರವರದೇ ದೌರ್ಬಲ್ಯಕ್ಕಾಗಿ ನೋಯಿಸುವುದು ಇಲ್ಲಿನ ಕೌತುಕ. ಈ ಇಬ್ಬರಲ್ಲಿ ಒಬ್ಬಳು ಫರೂಕನ ಪ್ರೇಮಿ. ಇನ್ನೊಬ್ಬ ಸ್ಯಾಂಗ್‌ಳನ್ನು ಗುಪ್ತವಾಗಿ ಇಷ್ಟಪಡುತ್ತಿದ್ದಾನೆ. ಸ್ಯಾಂಗ್-ಫರೂಕ್ ಸಂಬಂಧ ಕೆಡಲಿ ಎಂದು ಇಬ್ಬರೂ ಹಾರೈಸುವಂತೆ ಕಂಡರೂ ಅದು ನಿಜಕ್ಕೂ ಕೆಟ್ಟಾಗ ಕಂಗೆಡುವುದು ಇಲ್ಲಿನ ಸಂಕೀರ್ಣ ಹಂದರಕ್ಕೆ ಸಾಕ್ಷಿ.

ಮುನ್ನೂರಕ್ಕೂ ಹೆಚ್ಚು ಪುಟಗಳ ಈ ಪುಸ್ತಕದ ಎರಡನೆಯ ಭಾಗವನ್ನು ಪೂರ್ತಿಯಾಗಿ ಮೂರು ಕತೆಗಳ ಮೂಲಕ ಆವರಿಸಿರುವ ಹೇಮಾ ಮತ್ತು ಕೌಶಿಕ್ ಕತೆ ಜುಂಪಾ ಅವರ ಕಥನ ಕ್ರಮವನ್ನು ಅರಿಯುವುದಕ್ಕೆ ಹೆಚ್ಚು ಸಹಾಯಕವಾಗುವಂತಿವೆ. ಜುಂಪಾ ತಮ್ಮ ಪಾತ್ರಗಳ ಒಳಗುಟ್ಟುಗಳನ್ನು ಎಂದೂ ಸಂಭಾಷಣೆಗಳಲ್ಲಿ ಅನಾವರಣಗೊಳಿಸುವುದಿಲ್ಲ ಎನ್ನುವುದು ಕುತೂಹಲಕರ. ಕತೆಯ ಉದ್ದಕ್ಕೂ ಅವರು ತಮ್ಮ ಪಾತ್ರಗಳ ಬಾಹ್ಯ ಚಟುವಟಿಕೆಗಳನ್ನು ನಿರೂಪಿಸುತ್ತಲೇ ಅದನ್ನು ಮಾಡುವಲ್ಲಿ ನಿರ್ವಹಿಸುವ ಆಯ್ಕೆಗಳ ಸೂಕ್ಷ್ಮದಿಂದಲೇ ನಮಗೆ ಆ ಪಾತ್ರಗಳ ಚಾರಿತ್ರ್ಯವನ್ನು ಕಟ್ಟಿಕೊಡುವುದು ವಿಶೇಷ. ಇದರಲ್ಲಿ ಕಥಾನಕದ ಅಂಶ ಎಷ್ಟು ಮತ್ತು ಕಥಾನಕದ ನಿರೂಪಣೆಗೆ ಅಗತ್ಯವಿರುವ ಒಂದು ವಾತಾವರಣ, ಭಾವ, ಘಟ್ಟ ಮೂರನ್ನೂ ನಿರ್ವಹಿಸುವ ಅಂಶ ಎಷ್ಟು ಎನ್ನುವುದನ್ನು ಬಿಡಿಸಲಾಗದಷ್ಟು ತಾದ್ಯತ್ಮ ಇರುವುದು ಇವರ ಕತೆಗಳಿಗೆ ಪ್ರಾಮಾಣಿಕತೆಯ ಸ್ಪರ್ಶ ನೀಡಿದೆ. ಹಾಗಾಗಿಯೇ ನಮಗೆ ಕಥಾನಕಕ್ಕಿಂತ ವಿವರಗಳ ನಡುವೆ ಪಾತ್ರಗಳನ್ನು ಅರಿತುಕೊಳ್ಳುವ ಒಂದು ಪ್ರಕ್ರಿಯೆ ಹೆಚ್ಚು ಮುಖ್ಯವಾಗಿ ಬಿಡುತ್ತದೆ. ದೈನಂದಿನ ವಿವರಗಳ ಮೂಲಕ ವ್ಯಕ್ತಿಯನ್ನು ಅರಿಯುವ ಈ ಪ್ರಕ್ರಿಯೆ ಸಾಕಷ್ಟು ಅಸ್ಪಷ್ಟತೆಯನ್ನು, ಬಿಟ್ಟ ಪದಗಳನ್ನು ಕೊನೆಗೂ ಉಳಿಸಿಬಿಡುವುದರಿಂದ ಕೆಲವು ಪಾತ್ರಗಳು ಸ್ಕೆಚೀ ಆಗಿಯೇ ತಮ್ಮ ಪರಿಣಾಮಕಾರತ್ವವನ್ನು ನಮ್ಮ ಮೇಲೆ ಉಂಟುಮಾಡುತ್ತವೆ. ಹಾಗಾಗಿಯೇ ಓದುಗ ಇದರಲ್ಲಿ ಇನ್ನಿಲ್ಲದ ಆಸ್ಥೆಯಿಂದ ತೊಡಗಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇಲ್ಲಿ ಜುಂಪಾರ ಪಾತ್ರಗಳ ಅಂತರಂಗದ ತುಮುಲಗಳು, ಹಪಹಪಿಕೆಗಳು, ಅಭೀಪ್ಸೆ-ಆಸೆಗಳು, ನಿರೀಕ್ಷೆಗಳು ನಮಗೆ ಮುಖ್ಯವಾಗುತ್ತವೆ. ಬದುಕು ಅವನ್ನೆಲ್ಲ ಕಟ್ಟಿ ಕೊಡುತ್ತದೆಯೇ ಇಲ್ಲವೇ ಎನ್ನುವುದು ಕಥಾನಕದ ಅಂಶವಾದರೂ ಅದರಾಚೆಗೂ ಈ ಪಾತ್ರಗಳು ನಮ್ಮನ್ನು ಆವರಿಸುತ್ತವೆ. ನಮ್ಮೊಂದಿಗೆ ಉಳಿಯುತ್ತವೆ. ಜುಂಪಾರ ಕಥಾನಕದ ಶಕ್ತಿ ಇರುವುದೇ ಇಲ್ಲಿ ಅನಿಸುತ್ತದೆ.

ನಿಜ, ಇಲ್ಲಿನ ಕತೆಗಳಲ್ಲಿ ಸಾಮಾಜಿಕ - ತಾತ್ವಿಕ ಅರ್ಥಪೂರ್ಣತೆಯ ಪ್ರಭಾವಳಿಯಾಗಲೀ, ಮನುಕುಲವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಮಕಾಲೀನ ಬದುಕಿನ ಸಮಸ್ಯೆಗಳ ಹೊಳಹುಗಳಾಗಲೀ, ಗಂಡು ಹೆಣ್ಣು ಸಂಬಂಧಗಳಾಚೆಯ ಇಶ್ಯೂಗಳ ನಿರ್ವಹಣೆಯಾಗಲೀ, ವ್ಯಕ್ತಿಗತ ನೆಲೆಯಾಚೆ ಚಾಚಿಕೊಳ್ಳುವ ಮಹತ್ವಾಕಾಂಕ್ಷೆಯ ವಸ್ತುವಾಗಲೀ ಇಲ್ಲ. ಇವು ನಮ್ಮ ನಿಮ್ಮ ಅಂತರಂಗವನ್ನು ನೇರವಾಗಿ ಉದ್ದೇಶಿಸಿರುವ ಕತೆಗಳು. ನಮ್ಮನ್ನು ಅಲ್ಲಿ ಕಲಕಬಲ್ಲ, ತನ್ನ ಪಾತ್ರಗಳ ತಲ್ಲಣ, ದುಗುಡ, ಹಪಹಪಿಕೆಗಳು ಮತ್ತು ಮೌನದ ಮೂಲಕ ನಮ್ಮನ್ನು ಕಾಡಬಲ್ಲ ಕತೆಗಳು.

Unaccustomed Earth - Jhumpa Lahiri, Random House, 333pp; Rs.450.    

  • ಪುಸ್ತಕ ವಿಮರ್ಶೆ
~.~
  • Login or register to post comments
  • 378 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 6, 2008 - 5:36pm — anivaasi

ಉ: ಜುಂಪಾ ಲಾಹಿರಿಯವರ ಹೊಸ ಪುಸ್ತಕ

anivaasi's picture

ನರೇಂದ್ರರೆ,
ಈ ಸಂಕಲನವನ್ನು ತಂದು ಓದಬೇಕೆಂಬ ಒತ್ತಡ ಮೂಡಿಸಿತು ನಿಮ್ಮ ಬರಹ. ತುಂಬಾ ಥ್ಯಾಂಕ್ಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 6, 2008 - 6:54pm — hpn

ಉ: ಜುಂಪಾ ಲಾಹಿರಿಯವರ ಹೊಸ ಪುಸ್ತಕ

hpn's picture

ನನಗೂ ಹಾಗೇ ಆಯ್ತು Smiling

ಕ್ರಾಸ್ವರ್ಡ್ ಗೆ ಹೋಗಿದ್ದೆ ಮೊನ್ನೆ - ಅಲ್ಲಿ ಡಿಸ್ಕೌಂಟ್ ಕೊಡೋದಿಲ್ಲ ಅಂತ ಸ್ನೇಹಿತ ಹೇಳಿದ ಮಾತು ನೆನಪಾಗಿ ವಾಪಸ್ ಬಂದೆ. ಇವತ್ತು strand ಪುಸ್ತಕಾಲಯಕ್ಕೆ ಹೋಗಿದ್ದೆ ಇದೇ ಪುಸ್ತಕ ನೋಡೋಣಾಂತ. ಜೇಬು ಖಾಲಿ ಇದ್ದದ್ದು ನೆನಪಾಗಿ ಸುಮ್ಮನೆ ಬಂದದ್ದಾಯಿತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 8, 2008 - 1:56am — nityapralaya

ಉ: ಜುಂಪಾ ಲಾಹಿರಿಯವರ ಹೊಸ ಪುಸ್ತಕ

nityapralaya's picture

Bahala chennagide annisutte, Odi matte bareyuve.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 8, 2008 - 10:06am — hpn

ಉ: ಜುಂಪಾ ಲಾಹಿರಿಯವರ ಹೊಸ ಪುಸ್ತಕ

hpn's picture

ಕನ್ನಡದಲ್ಲಿ ಬರೆಯಿರಿ
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬದುಕು ಮತ್ತು ಮನುಷ್ಯ ಸಂಬಂಧಗಳ ವಿಶ್ಲೇಷಣೆ
  • ಬಾಳೇ ಒಂದು ಗಿಡವಾದರೆ ಪ್ರೀತಿಯದರ ಗೊನೆ!
  • ಚೀನಾದ ಜನಸಾಮಾನ್ಯರು
  • ವಿವೇಕರ ಕಥಾಲೋಕ-2
  • ವಿವೇಕರ ಕಥಾಲೋಕ-3
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮಿಂಚಿನ ಸುದ್ದಿ : ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ. ಬೆಂಗಳೂರಿನ ನಾಗರಿಕರೆ, ಸಾವಧಾನರಾಗಿರಿ .
  • ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator