ರಾಘವೇಂದ್ರಪಾಟೀಲರ "ತೇರು" ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಹುಮಾನ
ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, ಐವತ್ತು ಸಾವಿರ ರೂ ಮತ್ತು ಪ್ರಶಸ್ತಿ ಫಲಕ, ಕನ್ನಡದ ಕಾದಂಬರಿ "ತೇರು" ಗೆ ಬಂದಿದೆ. ಇದನ್ನು ಬರೆದ ರಾಘವೇಂದ್ರಪಾಟೀಲರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಅಲ್ಲಿನ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ. ಜೀವಶಾಸ್ತ್ರ ಅವರ ಅಧ್ಯಯನ ವಿಷಯ. ಒಟ್ಟು ಹದಿಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೇ ಆನಂದಕಂದ ಗ್ರಂಥಮಾಲೆಯನ್ನು ನಡೆಸುತ್ತಿದ್ದಾರೆ. ಸಂವಾದ ಎಂಬ ಸಾಹಿತ್ಯ ಪತ್ರಿಕೆಯನ್ನು ಕಳೆದ ಎರಡು ದಶಕಗಳಿಂದ ಸಂಪಾದಿಸುತ್ತಿದ್ದಾರೆ. ಹಳ್ಳಿಯ ಆ ಶಾಲೆಯ ಮಕ್ಕಳಿಗಾಗಿ ಕಳೆದ ಮೂರು ವರ್ಷಗಳಿಂದ ರಂಗತರಬೇತಿ ಶಿಬಿರ ನಡೆಸುತ್ತಿದ್ದಾರೆ. ಈ ವರ್ಷದ ನಾಟಕೋತ್ಸವನ್ನು ನೋಡಿ ನನಗೆ ಬಹಳ ಸಂತೋಷ ಮತ್ತು ಹೆಮ್ಮೆ ಅನ್ನಿಸಿತು. ಸಾಹಿತ್ಯದಲ್ಲಿ ಒಳ್ಳೆಯ ಕೆಲಸಮಾಡಲು, ನಮ್ಮ ಜನರ ಬದುಕನ್ನು ಒಂದಿಷ್ಟು ಉತ್ತಮಗೊಳಿಸಲು ಅಪಾರ ಹಣ, ನಗರದ ಮಾಧ್ಯಮಗಳ ಪ್ರಚಾರ ಇವೆಲ್ಲಕ್ಕಿಂತ ನಮ್ಮ ಸುತ್ತಲಿನವರ ಬಗ್ಗೆ ಕಳಕಳಿ, ಮಾಡುವ ಕೆಲಸದಲ್ಲಿ ನಿಷ್ಠೆ ಮುಖ್ಯ ಅನಿಸಿತು. ಪಾಟೀಲರಿಗೆ ಬಂದ ಪ್ರಶಸ್ತಿ ಸಜ್ಜನರೊಬ್ಬರಿಗೆ ದೊರೆತದ್ದು ಇನ್ನೂ ಅಚ್ಚರಿ ಸಂತೋಷಗಳನ್ನು ಮೂಡಿಸಿತು.
ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನವರಾದ ಶ್ರೀ ಪಾಟೀಲರು ಕನ್ನಡದ ಗ್ರಾಮೀಣ ಬದುಕು ಬದಲಾಗುತ್ತಿರುವ ಪರಿಯನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಅವರ "ಲಯ" ಎಂಬ ಕತೆ, "ದೇಸಗತಿ" ಎಂಬ ಇನ್ನೊಂದು ಕತೆ ಹೆಚ್ಚು ಚರ್ಚಿತವಾಗಿವೆ. ಅವರ "ತೇರು" ಕಾದಂಬರಿ ಜಮೀನುದಾರಿಕೆ, ಧರ್ಮ, ನಂಬಿಕೆಗಳು, ರಾಜಕೀಯದ ಚಲನವಲನ, ಮನುಷ್ಯ ಸಂಬಂಧಗಳ ಅಚ್ಚರಿ ಇವನ್ನೆಲ್ಲ ಬಿಡಿಸಿಡುತ್ತದೆ. ಕತೆ ಹೇಳುವ ರೀತಿಯಲ್ಲೂ ಪಾಟೀಲರು ಮಹತ್ವದ ಪ್ರಯೋಗಗಳನ್ನು ಮಾಡಿದ್ದಾರೆ. ಆನಂದಕಂದ ಪ್ರಕಾಶನದಿಂದಲೇ ಪ್ರಕಟಗೊಂಡಿರುವ ಈ ಕಾದಂಬರಿ ಸಿಕ್ಕರೆ ಒಮ್ಮೆ ಓದಿ ನೋಡಿ. ಹಾಗೆಯೇ ಲಯ, ಮತ್ತು ದೇಸಗತಿ ಕತೆಗಳನ್ನೂ. ಮಾಹಿತಿ ತಂತ್ರಜ್ಞಾನದ ಲೋಕದಿಂದ ಹೊರತಾದ ಇನ್ನೊಂದ ವಾಸ್ತವದ ಜೀವಂತ ಚಿತ್ರಣ ಪಾಟೀಲರ ಕತೆಗಳಲ್ಲಿ ದೊರೆಯುತ್ತದೆ.

- Login or register to post comments
- 897 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಒಳ್ಳೆಯ ಮಾಹಿತಿ
ಇವತ್ತು ಬೆಳಿಗ್ಗೆ ಪತ್ರಿಕೇಲಿ ಓದಿದ್ ಮೇಲೆ ನಾನೇ ಡಿಸ್ಕಶನ್ ಫಾರಮ್ನಲ್ಲಿ ಹಾಕೋಣ ಅಂತಿದ್ದೆ, ಹಾಕಲಿಲ್ಲ. ಒಳ್ಳೇದಾಯ್ತು. ನೀವು ಅವರ ಬಗ್ಗೆ ಒಳ್ಳೆಯ ಮಾಹಿತಿ ನೀಡಿರುವಿರಿ.
ನಿಮ್ಮ ಅನುಮತಿ ಪಡೆಯದೆ ರಾ.ಪ. ರವರ ಬಗ್ಗೆ ನೀವು ಇಲ್ಲಿ ನೀಡಿರುವ ಮಾಹಿತಿಯನ್ನು ವಿಕಿಪೀಡಿಯಕ್ಕೆ ಸೇರಿಸಿರುವೆ. ನಿಮ್ಮ ಆಕ್ಷೇಪಣೆಯಿಲ್ಲವೆಂದು ತಿಳಿದಿರುತ್ತೇನೆ.
ಇವರಿರುವ ಮಲ್ಲಾಡಿಹಳ್ಳಿ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಹೋಗುವಾಗ ಸಿಗುವ ಮಲ್ಲಾಡಿ ಹಳ್ಳಿ ಅಲ್ವೆ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಅದೇ ಮಲ್ಲಾಡಿಹಳ್ಳಿ
ಹೊಳಲ್ಕೆರೆಯಿಂದ ಸುಮಾರು ಹತ್ತು ಕಿಮೀ. ಚಿಕ್ಕಜಾಜೂರು ರೇಲ್ವೆ ಸ್ಟೇಶನ್ನಿನಿಂದ ಹದಿಮೂರು ಕಿಮೀ. ಇದೆ. ಅಲ್ಲೇ ರಾಘವೇಂದ್ರಸ್ವಾಮಿಗಳು ತಮ್ಮ ಅನಾಥಾಲಯ, ಯೋಗಶಿಕ್ಷಣ ಕೇಂದ್ರ, ಆಯುರ್ವೇದ ಆಸ್ಪತ್ರೆ ಸ್ಥಾಪಿಸಿದ್ದು. ಅವರು ತಿರುಕ ಎಂಬ ಹೆಸರಿಟ್ಟುಕೊಂಡು ಜನರಿಂದ ಪಡೆದ ದೇಣಿಗೆಯಿಂದ ಈ ದೊಡ್ಡ ಸಂಸ್ಥೆ ನಿರ್ಮಿಸಿದ್ದಾರೆ. ಅವರಿಗೆ ನಾಟಕ, ಕಲೆಗಳಲ್ಲೂ ಆಸಕ್ತಿ ಇತ್ತು. ಆದುದರಿಂದಲೇ ಈಗ ಕಳೆದ ಮೂರು ವರ್ಷಗಳಿಂದ ತಿರುಕ-ರಂಗ ಎಂಬ ಹೆಸರಿನ ನಾಟಕೋತ್ಸವ ನಡೆಯುತ್ತಿದೆ. ಸಮಾಜಕ್ಕೆ ಉಪಕಾರಿಯಾದ ಇಂಥ ಸಂತರ ಬಗ್ಗೆ ಸಂಪದದಲ್ಲಿ ಮಾಹಿತಿ ಸಿಗುವಂತಾದರೆ ಚೆನ್ನ.
ತಿರುಕ
ನಮ್ಮ ಮನೆಯಲ್ಲಿ ಇವರ ಪ್ರಾಣಾಯಾಮ, ಮತ್ತು 'ಯೋಗಾಸನ ಕೈಪಿಡಿ' ಮತ್ತಿತರೇ ಪುಸ್ತಕಗಳಿವೆ. ನಮ್ಮ ತಾಯಿ ತಂದೆಗೆ ಇವರ ಬಗ್ಗೆ ಸಾಕಷ್ಟು ಗೊತ್ತಿರುವ ಹಾಗಿದೆ. ನಾವು ಸ್ವಲ್ಪ ವರ್ಷಗಳ ಕಾಲ ಚಿತ್ರದುರ್ಗದಲ್ಲೂ ಇದ್ದೆವು.
>ಸಮಾಜಕ್ಕೆ ಉಪಕಾರಿಯಾದ ಇಂಥ ಸಂತರ ಬಗ್ಗೆ ಸಂಪದದಲ್ಲಿ ಮಾಹಿತಿ ಸಿಗುವಂತಾದರೆ ಚೆನ್ನ.
ನಮ್ಮ ತಾಯಿಯವರಿಗೆ ಕೇಳಿ ನೋಡ್ತೀನಿ. ಅವರಿಗೆ ಗೊತ್ತಿರುವುದನ್ನ ಬರೆದುಕೊಡಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"