ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ವೇದಾಂತಿಯ ಹಾಡೂ ಕವಿಯೊಬ್ಬನ ಸಿದ್ಧಾಂತಗಳೂ...

March 23, 2008 - 2:42pm — narendra
ನಾರ್ಸಿಸಸ್ ಮತ್ತು ಗೋಲ್ಡಮಂಡ್

ಬದುಕು ಕೊಡುವುದು ಅನುಭವವನ್ನು ಮಾತ್ರ ಎನ್ನುವುದನ್ನು ಒಪ್ಪಿದರೂ, ಈ ಅನುಭವವೇ ನಮ್ಮನ್ನೆಲ್ಲ ಕಾಲ ಸಂದಂತೆ ಪ್ರಬುದ್ಧರನ್ನಾಗಿಸುವ ಸಂಗತಿ ಎನ್ನುವುದನ್ನು ಒಪ್ಪಿದರೂ, ಈ ಒಟ್ಟು ಪ್ರಕ್ರಿಯೆಯ ಉದ್ದೇಶವೇನೆಂಬುದು ಗೂಢವಾಗಿಯೇ ಉಳಿಯುತ್ತದೆ. ಸಾವಿನೊಂದಿಗೆ ಎಲ್ಲವೂ ಮುಗಿದು ಹೋಗುತ್ತದೆ, ದೇಹ ಪಂಚಭೂತಗಳಲ್ಲಿ ಲೀನವಾಗಿ ಪ್ರಕೃತಿಗೆ ಸಲ್ಲುತ್ತದೆ; ಅಲ್ಲಿಗೇ ಎಲ್ಲವೂ ಮುಗಿದು ಹೋಗುವುದಾದರೆ ಈ ಅನುಭವಗಳಿಗೆ ತೆರೆದುಕೊಂಡು ಪ್ರಬುದ್ಧರಾಗುವ ನಿರಂತರವೂ ಅಂತ್ಯವಿಲ್ಲದ್ದೂ ಆದ ಪ್ರಕ್ರಿಯೆಯ ಉದ್ದೇಶವಾದರೂ ಏನು? ಈಗ ಪುನರ್ಜನ್ಮದ ಪರಿಕಲ್ಪನೆ ತುಂಬ ಆಪ್ತವಾಗುತ್ತದೆ, ಆತ್ಮಕ್ಕೆ ಸಮಾಧಾನ ನೀಡಬಲ್ಲ ಸಂಗತಿಯಾಗುತ್ತದೆ.

ಅದೆಲ್ಲ ಇರಲಿ. ಈ ಪಕ್ವವಾಗುವುದಕ್ಕೆ ಎಷ್ಟೆಲ್ಲ ಹಾದಿಗಳಿವೆ. ಜಗತ್ತು ಮಿಥ್ಯೆ, ಹೆಣ್ಣು, ಹೊನ್ನು, ಮಣ್ಣು ಎಲ್ಲವೂ ಮಾಯೆ, ಈ ಭವದ ಮಾಯಾಜಾಲಕ್ಕೆ ಸಿಲುಕಿಕೊಳ್ಳದೆ, ನಿರ್ಮಮ, ನಿರ್ಲಿಪ್ತ, ನಿರ್ಗುಣ, ನಿರ್ವಿಕಾರ ಬದುಕನ್ನು ಸಾಧಿಸುವುದೇ ಭಗವಂತನನ್ನು ಸೇರುವುದಕ್ಕೆ ಇರುವ ಸರಿಯಾದ ಮಾರ್ಗ ಎನ್ನುತ್ತದೆ ಧಾರ್ಮಿಕ ಪರಂಪರೆ. ಇಲ್ಲ, ಜಗತ್ತು ಅದೇ ಭಗವಂತನ ಸೃಷ್ಟಿ, ಅದನ್ನು ನಿರಾಕರಿಸುವುದು ಅವನನ್ನೇ ನಿರಾಕರಿಸಿದಂತೆ, ಮನುಷ್ಯನ ದೇಹದ ರಚನೆಯೇ ಎಲ್ಲದರಿಂದಲೂ ದೂರವಾಗಿ, ನಿಸ್ಸಂಗತ್ವ, ಸಂಯಮ, ಸಂನ್ಯಾಸ, ತ್ಯಾಗಗಳಿಂದ ಅಲಂಕೃತಗೊಳ್ಳಲು ಆಗಿರುವಂಥದ್ದಲ್ಲ, ಎಲ್ಲವನ್ನೂ ಅನುಭವಿಸಿ ಮಾಗಬೇಕು, ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲವೂ ಪುರುಷಾರ್ಥಗಳೇ, ವೈರಾಗ್ಯ-ನಿರಾಕರಣ ಪ್ರಕೃತಿವಿರೋಧಿ ನೀತಿ ಎನ್ನುತ್ತದೆ ಇನ್ನೊಂದು ಪರಂಪರೆ. ಎಲ್ಲವನ್ನೂ ಅನುಭವಿಸು, ನಿಜವಾದ ಅರ್ಥದಲ್ಲಿ ಬದುಕು. ಅದೇ ಬದುಕಿನ ಸಫಲತೆ ಎಂಬುದು ಇಲ್ಲಿನ ತತ್ವ. ಯಾವುದು ಸರಿ? ಯಾವುದು ತಪ್ಪು? ಯಾಕೆ?

ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ (ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ) ಓದಿದಾಗ ಇಂಥ ನೂರಾರು ಪ್ರಶ್ನೆಗಳು ಮನಸ್ಸಿನಲ್ಲಿ ತೆರೆಗಳಂತೆ ಏಳುತ್ತವೆ.

ನಮ್ಮ ಕಾಳಿದಾಸನ ಕತೆಯಲ್ಲೂ ಇಂಥ ಒಂದು ದ್ವಂದ್ವದ ಕುರಿತ ಚರ್ಚೆ ಇದೆ. ಕಾಳಿದಾಸ ಕುರಿಗಳನ್ನು ಕಾಯುವ ಕುರುಬರಲ್ಲಿ ಸೇರಿಕೊಂಡು ಮಂದಬುದ್ಧಿಯವನಾಗುವುದಕ್ಕೂ ಮೊದಲು ಒಬ್ಬ ಅಧಿಕಪ್ರಸಂಗಿ ಆದರೆ ಜಾಣ ವಿದ್ಯಾರ್ಥಿಯಾಗಿದ್ದ. ಒಮ್ಮೆ ಗುರುಗಳು ಆಧ್ಯಾತ್ಮಿಕ ಸಾಧನೆಯ ಮಾರ್ಗ ಎಂದಿಗೂ ಕಲಾರಾಧಕರಿಗೆ ಎಟುಕುವಂಥದ್ದಲ್ಲ, ಹಾಗಾಗಿ ಅದು ಅವರಿಗೆ ನಿಷಿದ್ಧ ಎಂಬಂಥ ಮಾತನ್ನಾಡಿದಾಗ ಈತ ವಾದಿಸುತ್ತಾನೆ. ಒಬ್ಬ ಕಲಾವಿದ ಬದುಕಿನ ಎಲ್ಲ ಸುಂದರವಾದದ್ದರ, ಆನಂದಮಯವಾದದ್ದರ ಆರಾಧಕನಾಗಿ ಎಲ್ಲವನ್ನೂ ಅನುಭವಿಸಿ ಬದುಕಿನ ಮರ್ಮವನ್ನೂ, ಸೌಂದರ್ಯ, ಸುಖ ಮತ್ತು ರಸಗಳ ಕ್ಷಣಭಂಗುರತೆಯನ್ನೂ ಅರಿತು ಮಾಗುತ್ತಾನೆ. ಅದಕ್ಕಾಗಿ ಅವನಿಗೆ ವಿರಕ್ತಿಯನ್ನು ಬೋಧಿಸುವುದು ತರವಲ್ಲ ಎಂಬ ಅಭಿಪ್ರಾಯವಿದ್ದೀತೇ ಹೊರತು ಆಧ್ಯಾತ್ಮವೇ ಅಂಥವನಿಗೆ ನಿಷಿದ್ಧ ಎಂಬ ನೀತಿ ಶಾಸ್ತ್ರಕಾರರದ್ದಿರಲಿಕ್ಕಿಲ್ಲ ಎನ್ನುತ್ತಾನೆ. ಮುಂದೆ ಮಾತಿಗೆ ತನ್ನ ಸಹಪಾಠಿಗಳ ಜೊತೆ ಗುರುಗಳು ಹೇಳಿದ್ದನ್ನು ಕೇಳಿಕೊಂಡಿರುವ ಶಿಷ್ಯರು ಕುರುಬನ ಹಿಂದೆ ಹೋಗುವ ಕುರಿಗಳಂತೆ ಎನ್ನುತ್ತಾನೆ. ಈ ಮಾತಿನಿಂದ ಕುಪಿತನಾದ ಗುರು ಇವನಿಗೆ ತಾನು ಕಲಿತ ವಿದ್ಯೆಯನ್ನೆಲ್ಲ ಮರೆತುಹೋಗಿ ಒಬ್ಬ ದಡ್ಡ ಕುರುಬನಾಗಿರು ಎಂದು ಶಪಿಸುತ್ತಾನೆ. ಮುಂದಿನ ಕತೆ ಬಿಡಿ, ಎಲ್ಲರಿಗೂ ಗೊತ್ತಿರುವಂಥದೇ.

ಇಲ್ಲಿನ ನಾರ್ಸಿಸಸ್ ಆಯ್ದುಕೊಂಡ ಅಥವಾ ಅವನದ್ದೆಂದು ಅವನಿಗೆ ನೀಡಲಾದ ಬದುಕು ಸಂನ್ಯಾಸಿಯದ್ದು. ಗೋಲ್ಡಮಂಡ್ ತನ್ನದೂ ಅದೇ ಹಾದಿ ಎಂದು ತಪ್ಪು ತಿಳಿದು ಮಠಕ್ಕೆ ಬಂದಿರುತ್ತಾನೆ. ಆದರೆ ಇದೇ ನಾರ್ಸಿಸಸ್ ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ ಗೋಲ್ಡಮಂಡ್‌ನನ್ನು ಪ್ರಣಯದ, ಪ್ರೀತಿ-ಪ್ರೇಮದ, ಕಲೆ-ಸಂಗೀತದ, ಸಾವು-ನೋವಿನ, ಅನ್ಯಾಯ-ಅಕ್ರಮಗಳ ಬದುಕಿಗೆ ಅವನನ್ನು ದೂಡುತ್ತಾನೆ. ಇಬ್ಬರ ಬದುಕಿನ ಹಾದಿಗಳೂ ಬೇರೆಬೇರೆಯಾದರೂ ಅವು ಸಮಾನಾಂತರ ರೇಖೆಗಳಂತೆ ಸಾಗುತ್ತವೆ. ಗೋಲ್ಡಮಂಡ್ ತನ್ನ ಎಲ್ಲ ಲೋಲುಪತೆಯ ನಡುವೆಯೂ ಸಾಕ್ಷಿಪ್ರಜ್ಞೆಯನ್ನು ಕಳೆದುಕೊಳ್ಳುವುದಿಲ್ಲ. ತನ್ನದೇ ಉನ್ಮಾದವನ್ನು, ಅಶಾಂತಿಯನ್ನು, ಸುಖವನ್ನು, ದುಃಖವನ್ನು ಗಮನಿಸಬಲ್ಲ ಸೂಕ್ಷ್ಮಜ್ಞ್ತತೆಯನ್ನು ಸದಾ ಎಚ್ಚರವಾಗಿಟ್ಟುಕೊಂಡೇ ನಾರ್ಸಿಸಸ್‌ನ್ನು ಇನ್ನಿಲ್ಲದಂತೆ ಪ್ರೀತಿಸುತ್ತ ಬೆಳೆಯುತ್ತಾನೆ. ಇತ್ತ ನಾರ್ಸಿಸಸ್‌ಗೂ ಗೋಲ್ಡಮಂಡ್ ಕಲಿಸುತ್ತಿರುತ್ತಾನೆ, ತನ್ನ ಬದುಕಿನ ರೀತಿ-ನೀತಿಗಳಿಂದ. ಇಬ್ಬರೂ ಒಂದು ವಿಚಿತ್ರ ಸನ್ನಿವೇಶದಲ್ಲಿ ಮತ್ತೆ ಭೇಟಿಯಾಗುತ್ತಾರೆ. ವಿರಕ್ತಿಯ ಮತ್ತು ಮೋಹದ ಬದುಕನ್ನು ಅಳೆದು ತೂಗುತ್ತಾರೆ. ಕಲೆ ತನ್ನ ಅಭಿವ್ಯಕ್ತಿಗೆ ನೆಚ್ಚಿಕೊಳ್ಳುವ ಪ್ರತಿಮೆಗಳ ಬಗ್ಗೆ, ಬುದ್ಧಿ ನೆಚ್ಚಿಕೊಳ್ಳುವ ಶಬ್ದಗಳ ಬಗ್ಗೆ; ತಾಯಿ ಪ್ರೀತಿಯೂ, ಮೋಹವೂ, ಬದುಕೂ ಮತ್ತು ಸಾವೂ ಆಗಿರುವ ವಿಚಿತ್ರದ ಬಗ್ಗೆ; ತಂದೆ ಕೇವಲ ಬುದ್ಧಿ, ಜಾಣ್ಮೆ, ಮರುಭೂಮಿಯಾಗಿರುವುದರ ಬಗ್ಗೆ; ಹಕ್ಕಿಯಂತೆ ಹಾಡಲಾರದ-ಹಾರಲಾರದ ಮನುಷ್ಯನ ಮಿತಿಗಳ ಬಗ್ಗೆ, ಕಲ್ಪನೆಯ ಸ್ವಾತಂತ್ರ್ಯದ ಬಗ್ಗೆ; ಜಗತ್ತು ದಯಾಮಯ ದೇವರ ಸೃಷ್ಟಿಯಾಗಿರಬಹುದಾದ ಬಗ್ಗೆ ಅಥವಾ ಆಗಿಲ್ಲದಿರುವುದರ ಬಗ್ಗೆ; ದೇವರು ಇರುವ ಅಥವಾ ಇರದಿರುವ ಬಗ್ಗೆ ಚರ್ಚೆಯಾಗುತ್ತದೆ - ಯಾವುದೂ ನೇರವಾಗಿಯಲ್ಲ, ಒಣ ವಿದ್ವತ್ತಿನ ಪ್ರದರ್ಶನವಾಗಿಯಲ್ಲ. ಇಲ್ಲಿರುವುದು ನಿಶ್ಚಯವಾಗಿಯೂ ಒಂದು ಕಾದಂಬರಿ, ಪ್ರಬಂಧವಲ್ಲ.

ಕಾದಂಬರಿಯ ನಡುನಡುವೆ ನಡುನಡುವೆ ನಮ್ಮ ಕಂಬಾರರ (ಚಕೋರಿ, ಶಿಖರಸೂರ್ಯ) ಮಾತೃಪರಂಪರೆ, ಪಿತೃಪರಂಪರೆಯ ನೆನಪಾದರೆ ಅಚ್ಚರಿಯಿಲ್ಲ!

ಅನುವಾದ ಸಿಬಿಲ್ ಕಾದಂಬರಿಯಷ್ಟು ಕಲಾತ್ಮಕವಾಗಿದೆ ಅನಿಸುವುದಿಲ್ಲ ನಿಜ. ಆದರೆ ಡಿ.ಆರ್.ಮಿರ್ಜಿಯವರು ಕೃತಿಯ ಸೊಗಡನ್ನು ಉಳಿಸಿಕೊಡಲು ವಹಿಸಿದ ಶ್ರಮ ಎದ್ದು ಕಾಣುತ್ತದೆ. 1946ರ ನೊಬೆಲ್ ಪಾರಿತೋಷಕ ವಿಜೇತ ಕೃತಿಯನ್ನು ಐಬಿಎಚ್ ನವರು ಪ್ರಕಟಿಸಿದ್ದಾರೆ. ಇನ್ನೂರ ತೊಂಭತ್ತನಾಲ್ಕು ಪುಟಗಳ ಈ ಕಾದಂಬರಿಯ ಬೆಲೆ ನೂರ ಎಂಭತ್ತು ರೂಪಾಯಿಗಳು.

ಅನೇಕ ಒಳನೋಟಗಳಿಂದ ಬದುಕನ್ನು ಕೆಣಕುವ ಈ ಕೃತಿ ಓದಿ ಮುಗಿದ ಮೇಲೂ ಕಾಡಬಲ್ಲಷ್ಟು ಆಪ್ತ ವಿವರಗಳಲ್ಲಿ, ಆಕರ್ಷಕ ಘಟನೆಗಳಲ್ಲಿ ಮೈತಳೆದಿದೆ.

  • ಪುಸ್ತಕ ವಿಮರ್ಶೆ
~.~
  • Login or register to post comments
  • 262 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾರ್ಸಿಸಸ್ ಮತ್ತು ಗೋಲ್ಡಮಂಡ್
  • ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ
  • ಗಾಂಧಿ ಎಂಬ ರೂಪಕ, ಜೀವನವೆಂಬ ನಾಟಕ!
  • ವಿವೇಕರ ಕಥಾಲೋಕ-4
  • ಬದುಕೆಂಬುದು ಮಿಥ್ಯ... ಸತ್ಯ?
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
  • ಹಬ್ಬಗಳ ನಡುವೆ ಸಂಪದದ ಹಬ್ಬ
  • ಬಿಡುಗಡೆಯ ನಂತರದ ಬೇಡಿಗಳು (೩)
  • ಧಾರವಾಡದಲ್ಲಿ ಹುಟ್ಟಿ ಬಾಲ್ಟಿಮೋರ್‌ನಲ್ಲಿ ಹರಿದ ನಮ್ಮೆಲ್ಲರ ಶಾಲ್ಮಲಾ!
  • ಬಿಡುಗಡೆಯ ನಂತರದ ಬೇಡಿಗಳು (೨)
  • ‘ಮನೆ ಅಂಗಳದ ಕೈತೋಟ-ವಿಶ್ವ ದಿನಾಚರಣೆ’ (ಆಗಸ್ಟ್ ೨೬) ಇಂದು!
  • ಫೈರ್ಫಾಕ್ಸಿನಲ್ಲಿ ಉದಯವಾಣಿಯನ್ನು ಓದುವ ಬಗ್ಗೆ

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 4:44am
  • kannadakanda
    ಉ: ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
    August 29, 2008 - 4:24am
  • kannadakanda
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 4:13am
  • kalpana
    ಉ: ಆರದ ದೀಪ
    August 29, 2008 - 2:42am
  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 99 ಅತಿಥಿಗಳು ಆನ್ಲೈನ್ ಇರುವರು.


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator