ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಮಾಧ್ಯಮದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಇಂಥದೊಂದು ಪ್ರಸ್ತಾವನೆ ಇಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಗೊಂದಲದಲ್ಲಿಯೇ ವಿಷಯವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಪತ್ರಿಕೋದ್ಯಮ ತುಂಬ ವ್ಯಾಪಕವಾಗಿ ಬೆಳೆದಿದೆ. ನಾಗರಿಕರೇ ನೇರವಾಗಿ ವರದಿ ಮಾಡುವಂಥ ’ನಾಗರಿಕ ಪತ್ರಿಕೋದ್ಯಮ’ (citizen journalism) ಬಂದಾಗಿದೆ. ಕನ್ನಡದ ಮಟ್ಟಿಗೆ ಅದಿನ್ನೂ ಬರಬೇಕಾಗಿದೆ. ಮಾಧ್ಯಮದ ಅತಿರೇಕಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯೂ ನಡೆದಿದೆ. ಈ ಸಂದರ್ಭದಲ್ಲಿ, ಒಬ್ಬ ಓದುಗ ಅಥವಾ ನೋಡುಗರಾಗಿ ಮಾಧ್ಯಮದಲ್ಲಿ ಬರುತ್ತಿರುವ ವರದಿ, ಕಾರ್ಯಕ್ರಮಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯುವ ಪ್ರಯತ್ನ ಏಕೆ ಪ್ರಾರಂಭವಾಗಬಾರದು?
ಈ ವೃತ್ತಿಯಲ್ಲಿ ಇರುವವನಾಗಿದ್ದರಿಂದ, ಇದರ ಲೋಪದೋಷ ಹಾಗೂ ಸಾಮರ್ಥ್ಯಗಳ ಅರಿವು ನನಗೆ ಸ್ಪಷ್ಟವಾಗಿದೆ. ಆದರೆ, ವೃತ್ತಿಪರನಾಗಿ ಲೋಪಗಳನ್ನು ಅಥವಾ ಸಾಮರ್ಥ್ಯವನ್ನು ನೋಡುವುದಕ್ಕೂ, ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಜನರ ಮನಸ್ಸಿನಲ್ಲಿ ಏನಿದೆ ಎಂಬುದು ಕಂಠಪೂರ್ತಿ ವೃತ್ತಿಯಲ್ಲಿ ಮುಳುಗಿರುವವರಿಗೆ ಸುಲಭವಾಗಿ ಗೊತ್ತಾಗುವುದಿಲ್ಲ.
ನನ್ನ ವಿಚಾರ ಸ್ಪಷ್ಟವಾಗಲು ಒಂದೆರಡು ಉದಾಹರಣೆಗಳನ್ನು ಕೊಡುತ್ತೇನೆ.
ಯಾವುದೋ ಒಂದು ಕಾರ್ಯಕ್ರಮ ಬರುತ್ತಿರುತ್ತದೆ. ಅದರ ಆಶಯದ ಬಗ್ಗೆ ಕೆಲವರಿಗೆ ತಕರಾರು. ಅದನ್ನು ಪ್ರಸ್ತುತಪಡಿಸುವ ವಿಧಾನದ ಬಗ್ಗೆ ಕೆಲವರಿಗೆ ಬೇಸರ. ಬಳಸುವ ಭಾಷೆ, ವಿಷಯ ಮಂಡನೆಯ ಗುಣಮಟ್ಟ, ತೋರಿಸುವ ಚಿತ್ರಗಳು ಅಥವಾ ದೃಶ್ಯಗಳ ಬಗ್ಗೆ ಇನ್ನು ಕೆಲವರಿಗೆ ಅಸಮಾಧಾನ ಇರುತ್ತದೆ. ಇದನ್ನು ಸಂಬಂಧಿಸಿದವರಿಗೆ ತಲುಪಿಸುವುದು ಹೇಗೆ?
ಏಕೆಂದರೆ, ನಾನು ಪ್ರಸ್ತುತಪಡಿಸುವುದು ತುಂಬ ಚೆನ್ನಾಗಿದೆ ಎಂದೇ ಮಾಧ್ಯಮದ ಬಹಳಷ್ಟು ದಡ್ಡರು ಭಾವಿಸಿಕೊಂಡಿರುತ್ತಾರೆ. ಅವರ ಮೆದುಳಿಗೆ ವಾಸ್ತವ ಇಳಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಸಹೋದ್ಯೋಗಿಗಳ ಅಭಿಪ್ರಾಯವನ್ನು ಅವರು ಅಸೂಯೆ ಎಂದೋ, ಅತಿ ಬುದ್ಧಿವಂತಿಕೆ ಎಂದೋ ತಿರಸ್ಕರಿಸುವ ಸಂದರ್ಭಗಳು ದಿನಾ ನಡೆಯುತ್ತಿರುತ್ತವೆ.
ಇಂತಹ ಅಭಿಪ್ರಾಯಗಳು ಓದುಗ/ನೋಡುಗರಿಂದ ಬಂದರೆ ಅದಕ್ಕೊಂದು ಮೌಲ್ಯ ಇರುತ್ತದೆ. ಹಕ್ಕೊತ್ತಾಯ ಇರುತ್ತದೆ ಎಂದು ನಾನು ಭಾವಿಸಿಕೊಂಡಿದ್ದೇನೆ. ಸಹೋದ್ಯೋಗಿಗಳು ಹೇಳುವುದಕ್ಕೂ, ಸಾರ್ವಜನಿಕರು ಹೇಳುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಅಂತಹ ಕೆಲಸವನ್ನು ಜವಾಬ್ದಾರಿಯುತ ಸಂಪದ ಸದಸ್ಯ/ಸದಸ್ಯೆಯರು ಮಾಡಲು ಮುಂದಾಗಬೇಕು ಎಂಬುದು ನನ್ನ ಆಶಯ.
ನಾನು ಬಲ್ಲಂತೆ ಸಾಂಸ್ಕೃತಿಕ ವರದಿಗಾರಿಕೆಯ ಹದವೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ಸಾಹಿತ್ಯ, ಸಂಸ್ಕೃತಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಬಹುಶಃ ಕನ್ನಡ ಟಿವಿ ಚಾನೆಲ್ಗಳ್ಯಾವವೂ ಸರಿಯಾಗಿ ವರದಿ ಮಾಡುತ್ತಿಲ್ಲ. ಅಥವಾ ಈಗಿರುವ ವ್ಯಕ್ತಿಗಳಿಗೆ ಅಂತಹ ವರದಿಗಾರಿಕೆ ಮಾಡುವುದು ಹೇಗೆಂಬುದು ಗೊತ್ತಿಲ್ಲ. ಕನಿಷ್ಟಪಕ್ಷ ಇಂಗ್ಲಿಷ್ ಅಥವಾ ಹಿಂದಿ ಚಾನೆಲ್ಗಳನ್ನು ನೋಡಿಯಾದರೂ, ಅವುಗಳ ಉತ್ತಮಾಂಶಗಳನ್ನು ನಕಲು ಮಾಡಿದರೆ ಕನ್ನಡಕ್ಕೆ ಎಷ್ಟೋ ಉಪಕಾರವಾಗುತ್ತದೆ. ಆದರೆ, ಅಹಂ ಅಥವಾ ದಡ್ಡತನಗಳಿಂದಾಗಿ ಅದೂ ಸಾಧ್ಯವಾಗುತ್ತಿಲ್ಲ. ನಾವು ಮಾಡುವುದೇ ಸರಿ ಎಂಬ ಭ್ರಮೆ ನೋಡುಗರ ಹಕ್ಕೊತ್ತಾಯ ಕಸಿದುಕೊಂಡಿದೆ.
ಕನ್ನಡವನ್ನು ಸರಿಯಾಗಿ ಬರೆಯಲು ಬಾರದ, ಒಳ್ಳೆಯ ಬರವಣಿಗೆಯನ್ನು ಸಾಧಿಸಲು ಆಗದ ತುಂಬ ಜನ ಇಂತಹ ಕ್ಷೇತ್ರಗಳನ್ನು ತುಂಬಿಕೊಂಡಿದ್ದಾರೆ. ಅವರ ವಿಷಯ ಮಂಡನೆಯಂತೂ ದೇವರಿಗೇ ಪ್ರೀತಿ. ಇಂಥ ದಡ್ಡರು ನಡೆಸಿಕೊಡುವ ಕಾರ್ಯಕ್ರಮಗಳನ್ನು ಇನ್ನೂ ಎಷ್ಟು ದಿನ ಅಂತ ಸಹಿಸಿಕೊಳ್ಳುವುದು? ಈ ಕಾರ್ಯಕ್ರಮ ಹೀಗಿದ್ದರೇ ಚೆನ್ನ, ಇದು ಸರಿಯಾಗಿರಲಿಲ್ಲ ಎಂಬ ಸಲಹೆಗಳು ನೋಡುಗರಿಂದ ಬರುವಂತಾದರೆ ಹಾಗೂ ಇವನ್ನೆಲ್ಲ ಒಂದು ಸೂಕ್ತ ವೇದಿಕೆ ಅಥವಾ ಅಂಕಣದಡಿ ನಿಯಮಿತವಾಗಿ ಪ್ರಕಟಿಸುವಂತಾದರೆ ಕಾರ್ಯಕ್ರಮಗಳ ಗುಣಮಟ್ಟದ ಮೇಲೆ ನಿಗಾ ಇಡಬಹುದು ಎಂಬುದು ನನ್ನ ಅನಿಸಿಕೆ.
ಮೊದಲೇ ಹೇಳಿದಂತೆ, ಮಾಧ್ಯಮದಲ್ಲಿ ಇರುವ ವ್ಯಕ್ತಿಯಾಗಿ ನಾನು ನೇರವಾಗಿ ಇಂಥದೊಂದು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಷ್ಟ. ನನ್ನಂಥ ಹಲವಾರು ಜನರು ತಮ್ಮದೇ ಮಿತಿಯಲ್ಲಿ ಗುಣಮಟ್ಟ ಸುಧಾರಣೆಗೆ ಸಾಕಷ್ಟು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ವೃತ್ತಿ ಮಾತ್ಸರ್ಯ ಅದಕ್ಕೆ ತಡೆಯಾಗಿದೆ. ಕೊನೆಗೆ, ನೋಡುಗರಾದರೂ ಕ್ಯಾಕರಿಸಿ ಉಗಿದರೆ, ಈ ಅಧಃಪತನ ಕೊಂಚ ಹತೋಟಿಗೆ ಬಂದೀತೇನೋ ಎಂಬ ದೂರದ ಆಸೆ ನನ್ನದು.
ನಿರ್ವಾಹಕರಾದ ಹರಿಪ್ರಸಾದ ನಾಡಿಗ್ ಹಾಗೂ ಕಳಕಳಿಯ ಸಂಪದ ಮಿತ್ರರು ಪರಸ್ಪರ ಸಮಾಲೋಚನೆ ನಡೆಸಿ ಇಂಥದೊಂದು ಪ್ರಯತ್ನಕ್ಕೆ ಚಾಲನೆ ನೀಡಿದರೆ, ಅದು ಕನ್ನಡಕ್ಕೆ ಸಲ್ಲಿಸಿದ ಉತ್ತಮ ಸೇವೆಗಳಲ್ಲಿ ಒಂದಾಗಲಿದೆ.
- ಚಾಮರಾಜ ಸವಡಿ

- Login or register to post comments
- 278 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ನನಗೂ ಬಹಳ ದಿನಗಳಿಂದ ಈ ಯೋಚನೆ ಇದೆ.ನಾವು ನೋಡ್ತಾ ಇದೀವಿ ಅನ್ನೊ ಕರ್ಮಕ್ಕೆ ತೋರಿಸೊದನ್ನೆಲ್ಲ ಸಹಿಸ್ಕೊಂಡು ಇರ್ಬೇಕ ಅಂತ.ಆದ್ರೆ ಯಾರಿಗೆ ಅಂತ ಹೇಳೊದು ಅಂತಾನೆ ಗೊತ್ತಾಗ್ತ ಇರ್ಲಿಲ್ಲ.
ಈ ಮೂಲಕನಾದರು ಕಾರ್ಯ ರೂಪಕ್ಕೆ ಬಂದರೆ ಆಗಲಾದ್ರು ನಮ್ ಕಷ್ಟಸುಖ ಹೇಳ್ಕೊಬಹುದು.
.ಅದರಲ್ಲು ಕಲೆ ಮತ್ತು ಸಂಸ್ಕ್ರುತಿಯ ವರದಿಯ ಕುರಿತಂತೆ ಹೇಳಬೇಕು ಅಂದ್ರೆ ನನಗೊಂದು ಘಟನೆ ನೆನಪಾಗುತ್ತೆ.ಕುಮಾರಕ್ರುಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಬಳಿ ನನಗೊಬ್ಬರು ಮಾಧ್ಯಮ ಮಿತ್ರರು ಆಕಸ್ಮಿಕವಾಗಿ ಸಿಕ್ಕಿದ್ರು... ಉಭಯಕುಶಲೋಪರಿಯ ನಂತರ ಅತ್ತ ಕಡೆ ದಯಮಾಡಿಸಿದ ಕಾರಣ ಕೇಳಿದ್ರೆ ಅವ್ರು ಕೊಟ್ಟ ಉತ್ತರ.
. "ಪ್ರಸಾರ ಮಾಡೊದಿಕ್ಕೆ ಯಾವುದು ಇಂಟ್ರೆಸ್ಟ್ಟಿಂಗ್ ನಿವ್ಸ್ ಯಾವುದು ಇಲ್ಲ ಅದಕ್ಕೆ ಗ್ಯಾಪ್ ಫಿಲ್ ಮಾಡೊದಿಕ್ಕೆ ಯಾವುದಾದ್ರು ಎಕ್ಸಿಭಿಷನ್ ಇದ್ರೆ ಶೂಟ್ ಮಾಡ್ಕೊಂಡು ಹೋಗೋಣ ಅಂತ ಬಂದೆ" ಅಂದ್ರು.
ಇದು ನಮ್ ಮಾಧ್ಯಮದವರು ಕಲೆಗೆ ಕೊಡುವ ಬೆಲೆ. ಇನ್ನು ಸಿನಿಮಾಗಳ ಕುರಿತ ಕಾರ್ಯಕ್ರಮಗಳೊ ಯಾರು ದುಡ್ಡು ಜಾಸ್ತಿ ಕೊಟ್ಟಿರ್ತಾರೊ ಆ ಸಿನಿಮಾ ಎಷ್ಟೇ ಕೆಟ್ಟದಾಗಿದ್ರೂನು ಹೊಗಳಿ ಹೊಗಳಿ ಪ್ರೇಕ್ಷಕರ ಜೇಬಿಗೆ ಸೀದಾ ಸೆವೆನೊ ಕ್ಲಾಕ್ ಬ್ಲೇಡೆ.
ಸವಡಿ ಯವರೆ ನಿಜವಾಗ್ಲು ನಿಮ್ಮ ಕಾಳಜಿ ಮೆಚ್ಚ ಬೇಕಾದ್ದೆ. ಆದಷ್ಟು ಬೇಗ ಸಂಪದ ಮಿತ್ರರೆಲ್ಲಾ ಸೇರಿ ಇಂತಹ ಪ್ರಯತ್ನಕ್ಕೆ ಚಾಲನೆ ಸಿಗುವಂತಾಗ್ಲಿ.
ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಮಂಜುನಾಥ ಅವರೇ ಧನ್ಯವಾದಗಳು.
ಅಧಿಕೃತವಾಗಿ ಇಂಥದೊಂದು ಅಂಕಣ ಪ್ರಾರಂಭಿಸಲು ಆಗದಿದ್ದರೂ, ನಿಯಮಿತವಾಗಿ ಒಂದಿಷ್ಟು ಜನ, ಮಾಧ್ಯಮ ಪ್ರತಿಕ್ರಿಯೆ ಕೊಡುತ್ತ ಹೋದರೆ ಉತ್ತಮ. ನೋಡಿದ, ಓದಿದ ವಿಷಯಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸುತ್ತ ಹೋಗಬೇಕು. ಆಗ ಇತರರೂ ಅದಕ್ಕೆ ಸ್ಪಂದಿಸಲು ಶುರು ಮಾಡುತ್ತಾರೆ. ತುಂಬ ಜನ ಇಂತಹ ಚಟುವಟಿಕೆಯಲ್ಲಿ ತೊಡಗಿದಾಗ ಸಂಬಂಧಿಸಿದ ಮಾಧ್ಯಮ ಸಂಸ್ಥೆಗಳು ಅದನ್ನು ಖಂಡಿತ ಗಮನಿಸುತ್ತವೆ.
ಪತ್ರಿಕೆಗಳಲ್ಲಿ ಬರುವ ಟಿವಿ ಅವಲೋಕನ ಅಥವಾ ಅಂತಹ ವರದಿಗಳು ವಸ್ತುನಿಷ್ಠವಲ್ಲ. ಯಾರದೋ ಭಿಡೆಗೆ ಬರೆದ ಹೊಗಳಿಕೆಗಳು ಅಲ್ಲಿರುವುದು ಸಾಮಾನ್ಯ. ನೀವು ಹೇಳಿದಂತೆ, ಪ್ರತಿಯೊಂದು ಸಿನಿಮಾ ಬಿಡುಗಡೆಯಾದಾಗಲೂ, ಅದು ಉತ್ತಮ ಸಿನಿಮಾ ಎಂಬಂತೆ ಟಿವಿಗಳು ಬಿಂಬಿಸುತ್ತವೆ. ಏಕೆ ಎಂಬ ಸತ್ಯ ಎಲ್ಲರಿಗೂ ಗೊತ್ತು. ಪುಸ್ತಕಗಳು ಬಿಡುಗಡೆಯಾದಾಗ, ಹೊಸ ವಸ್ತುಗಳು ಮಾರುಕಟ್ಟೆಗೆ ಬಂದಾಗ, ರಿಯಲ್ ಎಸ್ಟೇಟ್ ವರದಿಗಳಲ್ಲಿ ಇಂತಹ ಸುಳ್ಳು ಮಾಹಿತಿ ಬರುವುದನ್ನು ನೋಡಬಹುದು.
ಇದಕ್ಕೆ ಅಂಕುಶ ಹಾಕಬೇಕಾದವರು ಅವನ್ನು ಓದುವ/ನೋಡುವ ಜನ.
- ಚಾಮರಾಜ ಸವಡಿ
http://chamarajsavadi@blogspot.com
ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ತುಂಬಾ ಒಳ್ಳೆಯ ಆಲೋಚನೆ. ಆದರೆ ಸಂಪದದ ಮೂಲಕ ಅಂಥ ಸ್ಪಷ್ಟ, ವಸ್ತುನಿಷ್ಠ ಅಭಿಪ್ರಾಯಗಳು ಆಯಾ ಮಾಧ್ಯಮಗಳಿಗೆ ತಲುಪುವುದು ಹೇಗೆ? ’ಹರಿ’ಯವರು ಇಂಥ ಒಂದು ಪ್ರಯತ್ನಕ್ಕೆ ಒಪ್ಪುತ್ತಾರೆಯೆ?
ಜಯಲಕ್ಷ್ಮೀ.ಪಾಟೀಲ್.
ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಹರಿಗೆ ಒತ್ತಡ ಹಾಕುವುದೊಂದೇ ಮಾರ್ಗ ಅನಿಸುತ್ತದೆ ಜಯಲಕ್ಷ್ಮೀ. ಜೊತೆಗೆ, ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ನಾವೂ ಒಂದಿಷ್ಟು ಸಂಯಮ ತೋರಿಸಬೇಕಾಗುತ್ತದೆ. ಇಲ್ಲದಿದ್ದರೆ ಹರಿಯವರ ಪಾಡು ಪ್ರವಾಹದ ಹರಿಗೋಲಿನಂತಾಗುತ್ತದೆ.
- ಚಾಮರಾಜ ಸವಡಿ
http://chamarajsavadi@blogspot.com
ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ನಿಜವಾಗಿಯೂ ಆಗಬೇಕಾದ್ದೇ ಇದು. ಮಾದ್ಯಮದಲ್ಲಿ ಕೆಲಸ ಮಾಡುವವರಿಗೇ ಇದು ಗೊತ್ತಾಗುತ್ತಿರುವಾಗ ನೋಡುಗರಿಗೆ ಎಷ್ಟು ಹಿಂಸೆಯಾಗುತ್ತಿದೆ ಎಂಬುದು ಅರ್ಥಾಗುತ್ತದೆ.
ಆದರೆ ಕ್ಯಾಕರಿಸಿ ಉಗಿಯುವ ಅಂದರೆ ಫೀಡ್ ಬ್ಯಾಕ್ ಗೆ ಒಂದು ವೇದಿಕೆ ಒದಗಿಸಬೇಕು/ ಒದಗಿಸಿಕೊಳ್ಳಬೇಕು.
ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಓದುಗರ/ನೋಡುಗರ ಪ್ರತಿಕ್ರಿಯೆಗಳಿಗೆ ಒಂದು ವೇದಿಕೆ ಖಂಡಿತ ಬೇಕಿದೆ. ಹರಿ ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ತುಂಬ ಜನ ಕಾಯುತ್ತಿದ್ದಾರೆ.
- ಚಾಮರಾಜ ಸವಡಿ
http://chamarajsavadi@blogspot.com