ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್ಮೇಲ್
ರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.
ಜಯಂತರ ಕತೆಗಳಲ್ಲಿ ಕಂಡು ಬರುವ ಆಶಯ, ಅವರು ನಮಗೆ ಕಟ್ಟಿಕೊಡುವ ನೋಟ ಮತ್ತು ಅದಕ್ಕೆ ಅವರು ಬಳಸುವ ಆಕೃತಿ ಮೂರನ್ನೂ ಒಟ್ಟಾಗಿ ಗಮನಿಸಬೇಕಾಗುತ್ತದೆ. ಮೊದಲೇ ಹೇಳಿದಂತೆ ಜಯಂತ್ ಮೂಲತಃ ಕವಿ. ಅವರೊಳಗಿನ ಕವಿ ಅನೇಕ ಬಿಂಬಗಳನ್ನು, ಪ್ರತಿಮೆಗಳನ್ನು, ಕೆಲವೊಮ್ಮೆ ಶಬ್ದಗಳಿಂದಲೂ ತಮಗೆ ಬೇಕಾದ ಸಂವೇದನೆಯನ್ನು ಮರುಸೃಷ್ಟಿಸಿಕೊಳ್ಳಬಲ್ಲ. ಇದನ್ನು ಅವರು ಕತೆಯ ಪರಿಸರದ, ಪಾತ್ರಗಳ ಒಳಗಿನಿಂದಲೇ ಮಾಡುವುದರಿಂದ ಅನೇಕ ಬಾರಿ ಅವು ಓದುಗನ ಮೇಲೆ ಉದ್ದೇಶಿತ ಪರಿಣಾಮವನ್ನು ಉಂಟುಮಾಡಿಯೂ ಅದಕ್ಕೆ ಯಾವೆಲ್ಲ ಅಂಶಗಳು ಕಾರಣವಾದವು ಎಂಬುದು ನಮಗೆ ನಿಲುಕುವುದಿಲ್ಲ.

- Login or register to post comments
- 300 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್ಮೇಲ್
ತು೦ಬಾ ಥ್ಯಾ೦ಕ್ಸ ! ನಿಮ್ಮ ಬರಹದಿ೦ದಾ ಅವರ ಪುಸ್ತಕಗಳನ್ನು ಓದ ಬೇಕು ಅನ್ನಿಸ್ತಿದೆ...
ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್ಮೇಲ್
ಪ್ರಿಯ ನರೇಂದ್ರರೇ,
ನಮಸ್ಕಾರ. ನಿಮ್ಮ ಲೇಖನ ಓದಿ ಖುಶಿಯಾಯಿತು. ಜಯಂತರನ್ನು ಓದಬೇಕೆಂಬ ತುಡಿತದಿಂದ ನಾನು ಬಹಳ ಹಿಂದೆಯೇ ಈ "ತೂಫಾನ್ ಮೇಲ್" ಹೊತ್ತಗೆಯನ್ನ ಕೊಂಡುಕೊಂಡೆ. ಅದು ನಾನು ಓದಿದ ಜಯಂತರ ಮೊದಲನೇ ಹೊತ್ತಗೆ. ನಾನು ಕೆಲ ತಿಂಗಳ ಹಿಂದೆಯೇ ಜಯಂತರ ಕುರಿತು ಒಂದು ಸಾಮಾನ್ಯ ಲೇಖನ ಬರೆದಿದ್ದೆ. ನೀವು ಹೆಚ್ಚು ಸೂಕ್ಷ್ಮವಾಗಿ, ಸಾಹಿತ್ಯಿಕವಾಗಿ ಬರೆದು ಒಳ್ಳೆಯ ಕೆಲಸ ಮಾಡಿದ್ದೀರಿ. "ತೂಫಾನ್ ಮೇಲ್"ಅನ್ನ ನಾನು ಬಿಡಿಬಿಡಿಯಾಗಿ ಓದಿದ್ದರಿಂದಾಗಿ ಸಮಗ್ರವಾಗಿ ಗ್ರಹಿಸಲು ಸಾಧ್ಯವಾಗಲಿಲ್ಲ. ನಿಮ್ಮ ಲೇಖನ ನೋಡಿದ ಮೇಲೆ ಮತ್ತೊಮ್ಮೆ ಓದಿ ಆ ಕುರಿತು ಬರೆಯುವಾ ಅನ್ನಿಸ್ತಿದೆ.
ತಾವು ಮಾಡುವ ಯಾವುದೇ ಕೆಲಸದಲ್ಲಾಗಿರಲಿ ತಮ್ಮದೇ ಛಾಪು ಮೂಡಿಸುವ ಜಯಂತರದು ಅಪ್ರತಿಮ ಪ್ರತಿಭೆ- ಅದು ಚಿತ್ರ ಸಾಹಿತ್ಯವಾಗಿರಬಹುದು, ಕತೆಗಳಾಗಿರಬಹುದು, ಸಂದರ್ಶನಗಳಾಗಿರಬಹುದು, ಭಾವನಾದಂತಹ ಪತ್ರಿಕೆಯ ಸಂಪಾದನೆಯಾಗಿರಬಹುದು. ಅವರು ಒಂದು ವೇಳೆ ಚಿತ್ರ ನಿರ್ದೇಶನಕ್ಕೂ ಇಳಿದುಬಿಟ್ಟಲ್ಲಿ ಅದು ಕನ್ನಡ ಚಿತ್ರರಸಿಕರ ಸೌಭಾಗ್ಯವೇ ಸರಿ!
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/
ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್ಮೇಲ್
ಪ್ರೀತಿಯ ಮುರಳಿ ಮತ್ತು ಶಶಿ,
ನಿಮ್ಮ ಪ್ರತಿಕ್ರಿಯೆಯಿಂದ ಹೀಗೆ ಗಂಭೀರವಾಗಿಯೂ ಸುದೀರ್ಘವಾಗಿಯೂ ಬರೆದ ಬರಹಗಳು ಕೂಡ ಆಸಕ್ತರ ಓದಿಗೆ ಭಾರವಾಗಲಿಕ್ಕಿಲ್ಲ ಎನ್ನುವ ವಿಶ್ವಾಸ ಮೂಡಿದೆ. ಧನ್ಯವಾದಗಳು. ಜಯಂತರ ಕತೆಗಳನ್ನು ಸಾಧಾರಣವಾಗಿ ಎಲ್ಲರೂ ಓದಿಯೇ ಇದ್ದಾರೆ. ಅವುಗಳ ಮರುಓದು, ಆಳ ಗ್ರಹಿಕೆ ಅಗತ್ಯ ಎನಿಸಿ, ಹೇಗೆ ಒಬ್ಬ ಬರಹಗಾರನನ್ನು ಕೂಡ ಈ ಕತೆಗಳು ಬೆಳೆಸಬಲ್ಲ ಕಸು ಹೊಂದಿವೆ ಎನ್ನುವ ನಿಟ್ಟಿನಲ್ಲಿ ಬರೆದೆ. ಇಂಥ ಅನಿಸಿಕೆಗಳು, ಅನುಮಾನಗಳು ಎಲ್ಲ ಓದುಗರಲ್ಲಿ ಇರುತ್ತವೆ. ಅವುಗಳನ್ನು ಹಂಚಿಕೊಳ್ಳುವುದು ಕೂಡ ಕನ್ನಡದ ಸಂದರ್ಭದಲ್ಲಿ ಬಹಳ ಮುಖ್ಯ. ಶಶಿ, ನಿಮ್ಮ ಬರಹವನ್ನು ಎದುರು ನೋಡುತ್ತಿರುತ್ತೇನೆ, ಖಂಡಿತ ಬರೆಯಿರಿ.
ಉ: ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್ಮೇಲ್
ತುಂಬಾ ಸವಿಸ್ತಾರವಾದ ವಿಮರ್ಶೆ.
ಜಯಂತರ ಶಕ್ತಿ ನಮಗೆ ಅರಿವಾಗುವುದು, ನಮಗೆ ಕಾಣದ ಅತಿ ಸೂಕ್ಷ್ಮ ವಿವರಗಳು ಅವರಿಗೆ, ಅವರಿಗೆ ಮಾತ್ರ ಕಂಡಾಗ. ಇದಕ್ಕೆ ಒಂದು ಉತ್ತಮ ಉದಾಹರಣೆ ’ ಬೊಗಸೆಯಲ್ಲಿ ಮಳೆ’. ಅಲ್ಲಿ ಮಳೆಯ ಒಂದೊಂದು ಹನಿಗಳಷ್ಟೆ ಅಲ್ಲ, ಒಂದು ಹನಿಯ ಅಷ್ಟೂ ತವಕ ತಲ್ಲಣಗಳನ್ನು ಸೆರೆಹಿಡಿಯಬಲ್ಲಷ್ಟು ಹರಿತ ಅವರ ಲೇಖನಿ ಮತ್ತು ಮನಸ್ಸು.
ಒಲುಮೆಯಿಂದ,
ಯಜಮಾನ್ ಫ್ರಾನ್ಸಿಸ್
"ಇದು ಬಾಳು ನೋಡು, ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ,
ಹಲವುತನದ ಮೈಮರೆಸುವಾಟವಿದು
ನಿಜವು ತೋರದಲ್ಲ......" (ಗೋಪಾಲಕೃಷ್ಣ ಅಡಿಗ)